ಮಹದಾಯಿ ವಿವಾದ; ಮತ್ತೆ ಕ್ಯಾತೆ ತೆಗೆದ ಗೋವಾ ಕಾಂಗ್ರೆಸ್
ಪಣಜಿ, ಡಿಸೆಂಬರ್ 16 : ಮಹದಾಯಿ ವಿವಾದದ ಕುರಿತು ಗೋವಾ ಮತ್ತೊಮ್ಮೆ ಕ್ಯಾತೆ ತೆಗೆದಿದೆ. ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ಕೊಟ್ಟಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿ ಗೋವಾ ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದೆ.
ಗೋವಾ ಪ್ರದೇಶ ಕಾಂಗ್ರೆಸ್ ಸಮಿತಿ (ಜಿಪಿಸಿಸಿ) ನರೇಂದ್ರ ಮೋದಿಗೆ ಪತ್ರ ಬರೆದಿದೆ. ಕರ್ನಾಟಕದ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗಳಿಸಲು ಕೇಂದ್ರ ಸರ್ಕಾರ ಯೋಜನೆಗೆ ಒಪ್ಪಿಗೆ ನೀಡಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಮಹದಾಯಿ ಒಂದು ಹನಿ ನೀರು ವ್ಯರ್ಥವಾಗಲು ಬಿಡಲ್ಲ
ಮಹದಾಯಿ ಯೋಜನೆ ವಿವಾದದ ವಿಚಾರ ಸುಪ್ರೀಂಕೋರ್ಟ್ ಮುಂದಿದೆ. ಮಹದಾಯಿ ನ್ಯಾಯಾಧೀಕರಣದ ಮುಂದೆಯೂ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಗೋವಾದ ವಾದವನ್ನು ಆಲಿಸದೇ ಏಕಪಕ್ಷೀಯವಾಗಿ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು ಸರಿಯಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಹದಾಯಿ ವಿವಾದ; ಗೋವಾ ಸಿಎಂ ಸ್ಫೋಟಕ ಹೇಳಿಕೆ
ಗೋವಾ ಜನರು ರಾಜ್ಯದ ಜೀವನದಿಯಾದ ಮಹದಾಯಿ ನದಿ ನೀರನ್ನು ಯಾವುದೇ ತಿರುಗಿಸಲು ಯಾವುದೇ ಕಾರಣಕ್ಕೂ ಒಪ್ಪಿಗೆ ನೀಡುವುದಿಲ್ಲ ಎಂದು ಗೋವಾ ಕಾಂಗ್ರೆಸ್ ಪತ್ರದಲ್ಲಿ ತಿಳಿಸಿದೆ. ಕೆಲವು ದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಸಹ ಮಹದಾಯಿ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದರು.
ಮತ್ತೆ ಮುನ್ನೆಲೆಗೆ ಬಂದ ಮಹದಾಯಿ ವಿವಾದ
ನೈಸರ್ಗಿಕ ವೈವಿದ್ಯತೆಗೆ ಧಕ್ಕೆ
ಪರಿಸರ ಇಲಾಖೆ ಕಳಸಾ-ಬಂಡೂರಿ ಯೋಜನೆಗೆ ಒಪ್ಪಿಗೆ ನೀಡಿದೆ. ನೈಸರ್ಗಿಕ ವೈವಿದ್ಯತೆಯನ್ನು ನಾಶಮಾಡುವಂತಹ ಯೋಜನೆಯನ್ನು ಕರ್ನಾಟಕ ಸರ್ಕಾರ 841 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಿದೆ. ಯೋಜನೆಯಿಂದಾಗಿ ಗೋವಾದ ನೈಸರ್ಗಿಕ ವೈವಿದ್ಯತೆಗೆ ಧಕ್ಕೆ ಉಂಟಾಗಲಿದೆ ಎಂದು ಗೋವಾ ಕಾಂಗ್ರೆಸ್ ಪತ್ರದಲ್ಲಿ ಆತಂಕ ವ್ಯಕ್ತವಪಡಿಸಿದೆ.
ಯಥಾಸ್ಥಿತಿಯನ್ನು ಕಾಪಾಡಲಿ
ಗೋವಾ ರಾಜ್ಯದ ಪರಿಸರ ವೈವಿದ್ಯತೆ, ಪಶ್ಚಿಮ ಘಟ್ಟಗಳ ಮಹತ್ವದ ಕೇಂದ್ರ ಸರ್ಕಾರಕ್ಕೆ ತಿಳಿಯಬೇಕಿತ್ತು. ಗೋವಾ ರಾಜ್ಯದ ಅಭಿಪ್ರಾಯವನ್ನು ಕೇಳದೆ ಯೋಜನೆಗೆ ಒಪ್ಪಿಗೆ ನೀಡಿರುವುದು ಸರಿಯಲ್ಲ. ಕರ್ನಾಟಕದಂತಹ ದೊಡ್ಡ ರಾಜ್ಯ ದಶಕಗಳಿಂದ ಉಳಿದುಕೊಂಡು ಬಂದಿರುವಂತಹ ಪರಿಸರವನ್ನು ಕಾಪಾಡಲು ಯಥಾಸ್ಥಿತಿ ಕಾಪಾಡಿಕೊಳ್ಳಲಿ ಎಂದು ಗೋವಾ ಕಾಂಗ್ರೆಸ್ ಪತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ವಿವರಣೆ ನೀಡಿದೆ.
ಗೋವಾ ಸರ್ಕಾರದ ಅನುಮತಿ ಇಲ್ಲ
ಕೆಲವು ದಿನಗಳ ಹಿಂದೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, "ಮಹದಾಯಿ ವಿಚಾರದಲ್ಲಿ ತಾಳ್ಮೆಯಿಂದ ಇರಿ. ಯೋಜನೆಗೆ ಗೋವಾ ಸರ್ಕಾರ ಒಪ್ಪಿಗೆ ನೀಡುವುದಿಲ್ಲ. ಮಹದಾಯಿ ನದಿ ನೀರನ್ನು ಹಂಚಿಕೆ ಮಾಡಲು ಸರ್ಕಾರ ಅನುಮತಿ ನೀಡುವುದಿಲ್ಲ" ಎಂದು ರಾಜ್ಯದ ಜನರಿಗೆ ಭರವಸೆಯನ್ನು ನೀಡಿದ್ದರು.
ಕುಡಿಯುವ ನೀರಿನ ಯೋಜನೆ
ಕರ್ನಾಟಕ ಸರ್ಕಾರ ಮಹದಾಯಿ ನದಿಯಿಂದ 5.5 ಟಿಎಂಸಿ ನೀರನ್ನು ಬಳಸಿಕೊಂಡು ಕಳಸಾ-ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ನದಿಗೆ ಹರಿಸಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ ಜಿಲ್ಲೆಗಳ ವಿವಿಧ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಯೋಜನೆ ಸಿದ್ಧಪಡಿಸಿದೆ. ಇದಕ್ಕೆ ಗೋವಾ ವಿರೋಧ ವ್ಯಕ್ತಪಡಿಸುತ್ತಿದೆ.
ಸುಧೀರ್ಘ ವಿಚಾರಣೆ
ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವೆ ಮಹದಾಯಿ ವಿವಾದದ ಬಗ್ಗೆ ಕಾನೂನು ಹೋರಾಟ ನಡೆದಿದೆ. ಮಹದಾಯಿ ನ್ಯಾಯಾಧೀಕರಣ ವಿವಾದದ ಬಗ್ಗೆ ಸುಧೀರ್ಘವಾದ ವಿಚಾರಣೆಯನ್ನು ನಡೆಸಿ 2018ರಲ್ಲಿ ಅಂತಿಮ ತೀರ್ಪನ್ನು ನೀಡಿತ್ತು. ಕರ್ನಾಟಕಕ್ಕೆ 13.4 ಟಿಎಂಸಿ ನೀರನ್ನು ಹಂಚಿಕೆ ಮಾಡಿತ್ತು.