ಗೋವಾದಲ್ಲಿ ನಾಲ್ವರು ಸಚಿವರಿಂದ ರಾಜೀನಾಮೆ ಪಡೆದ ಮುಖ್ಯಮಂತ್ರಿ
ಪಣಜಿ, ಜುಲೈ 12: ಹತ್ತು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಿದ ನಂತರ ಗೋವಾ ರಾಜಕೀಯದಲ್ಲೂ ಸಾಕಷ್ಟು ಬದಲಾವಣೆ ಉಂಟಾಗುವ ಸನ್ನಿವೇಶ ಎದ್ದಿದೆ.
ಬಿಜೆಪಿ ಸೇರಿರುವ ಶಾಸಕರಿಗೆ ಮಣೆ ಹಾಕುವ ಸಲುವಾಗಿ ಈಗಾಗಲೇ ಸರ್ಕಾರದಲ್ಲಿ ಮಂತ್ರಿಗಳಾಗಿದ್ದ ನಾಲ್ವರ ಬಳಿ ಸ್ವತಃ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ರಾಜೀನಾಮೆ ಪಡೆದಿದ್ದಾರೆ.
ಗೋವಾದಲ್ಲೀಗ ಪಕ್ಷಾಂತರ ವಿರೋಧಿ ಕಾಯಿದೆ ಅನ್ವಯವಾಗೋಲ್ಲ, ಯಾಕೆ?
ಗೋವಾ ಫಾರ್ವರ್ಡ್ ಪಕ್ಷದ ನಾಯಕರಾದ ವಿಜಯ್ ಸರ್ದೇಸಾಯಿ, ಜಯೇಶ್ ಸಾಲ್ಗಾಂವ್ಕರ್, ವಿನೋದ್ ಪಾಲೇಕರ್ ಮತ್ತು ಇನ್ನೋರ್ವ ಪಕ್ಷೇತರ ಅಭ್ಯರ್ಥಿಯ ರಾಜೀನಾಮೆಯನ್ನು ಮುಖ್ಯಮಂತ್ರಿ ಪಡೆದಿದ್ದಾರೆ.
ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರಿರುವ ಶಾಸಕರಿಗೆ ಈ ಸ್ಥಾನಗಳನ್ನು ನೀಡುವ ಸೂಚನೆಯನ್ನು ಅವರು ನೀಡಿದ್ದಾರೆ.
ಗೋವಾ ಸರ್ಕಾರ ಬಹುಮತ ಪಡೆಯಲಾಗದೆ ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಪಕ್ಷದೊಂದಿಗೆ ಕೈಜೋಡಿಸಿದ್ದವರನ್ನು ಇದೀಗ ಕಾಂಗ್ರೆಸ್ ಶಾಸಕರು ಸೇರ್ಪಡೆಯಾದರು ಎಂಬ ಕಾರಣಕ್ಕೆ ಮಂತ್ರಿ ಸ್ಥಾನದಿಂದ ಬಲವಂತವಾಗಿ ಕೆಳಗಿಳಿಸಿದ ಕ್ರಮ ಗೋವಾ ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯ ಮೂಡಿಸಬಹುದು ಎನ್ನಲಾಗಿದೆ.
ಕರ್ನಾಟಕದ ನಂತರ ಗೋವಾದಲ್ಲಿಯೂ ಕಾಂಗ್ರೆಸ್ಗೆ ಭಾರಿ ಆಘಾತ
ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯ ಪರಿಣಾಮ ಎಂಬಂತೆ ಗೋವಾದಲ್ಲಿ ಗುರುವಾರ ಒಟ್ಟು 15 ಕಾಂಗ್ರೆಸ್ ಶಾಸಕರಲ್ಲಿ ಹತ್ತು ಶಾಸಕರು ಬಿಜೆಪಿ ಸೇರಿದ್ದರು.