ಪರಿಕರ್ ನಿಧನದ ಬೆನ್ನಲ್ಲೇ ಸಿಎಂ ಗಾದಿಗೆ ಶುರುವಾಯ್ತು ಗುದ್ದಾಟ
ಪಣಜಿ, ಮಾರ್ಚ್ 18: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕರ್ ಅವರ ನಿಧನದ ಸೂತಕ ರಾಜಕೀಯ ವಲಯದಲ್ಲಿ ಆವರಿಸಿರುವ ನಡುವೆಯೇ ಅಧಿಕಾರಕ್ಕಾಗಿ ಗುದ್ದಾಟ ತೀವ್ರವಾಗಿದೆ.
ಪರಿಕರ್ ಅನಾರೋಗ್ಯಕ್ಕೀಡಾದ ಸಂದರ್ಭದಿಂದಲೂ ಅಧಿಕಾರದ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ರಾಜ್ಯಪಾಲರಿಗೆ ಅನೇಕ ಬಾರಿ ಮನವಿ ಸಲ್ಲಿಸಿದೆ. ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ತನ್ನ ಬಳಿ ಸರ್ಕಾರ ರಚನೆಗೆ ಬಹುಮತವಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.
ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಪಕ್ಷಕ್ಕೆ ಸರ್ಕಾರ ರಚಿಸಲು ಅವಕಾಶ ನೀಡುತ್ತಿಲ್ಲ ಎಂದು ಅದು ರಾಜ್ಯಪಾಲರಾದ ಮೃದುಲಾ ಸಿನ್ಹಾ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಇತ್ತ ಬಿಜೆಪಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ನಡೆಸಿದೆ. ಬಿಜೆಪಿ ಮುಖಂಡರು ಮತ್ತು ಅದರ ಮಿತ್ರಪಕ್ಷಗಳ ನಡುವಿನ ಗೊಂದಲ, ಮನಸ್ತಾಪಗಳು ತೀವ್ರವಾಗಿವೆ. ಪರಿಕರ್ ಅವರ ಅಂತಿಮ ಪಯಣಕ್ಕೆ ಸಿದ್ಧತೆಗಳು ನಡೆಯುವ ನಡುವೆಯೇ ಸಿಡಾ ಡಿ ಗೋವಾ ಹೋಟೆಲ್ನಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಸರ್ಕಾರ ಉಳಿಸಿಕೊಳ್ಳುವ ಮತ್ತು ಮುಂದಿನ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಚಾರದಲ್ಲಿ ತಮ್ಮ ನಿಲುವಿನ ಬಗ್ಗೆ ಬಿಗಿಪಟ್ಟು ತಾಳಿವೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ, ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲಿದ್ದಾರೆ.
ತಡರಾತ್ರಿ ಗಡ್ಕರಿ ಸಭೆ
ರಾತ್ರಿಯಿಡೀ ಚರ್ಚೆಗಳು ನಡೆದರೂ ಯಾವುದೇ ಫಲಿತಾಂಶ ದೊರೆತಿಲ್ಲ. ಮಧ್ಯರಾತ್ರಿ ಗೋವಾಕ್ಕೆ ತೆರಳಿದ ಕೇಂದ್ರ ಸಚಿವ ನಿತಿನ್ ಗಡ್ಕರಿ ಬಿಜೆಪಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು. ಮೊದಲ ಸುತ್ತಿನ ಮಾತುಕತೆ ಬೆಳಗಿನ ಜಾವ 5 ಗಂಟೆಯವರೆಗೂ ನಡೆಯಿತು. ಪ್ರತಿ ಶಾಸಕರೂ ಗಡ್ಕರಿ ಮತ್ತು ಪಕ್ಷದ ಮುಖಂಡ ಬಿ.ಎಲ್. ಸಂತೋಷ್ ಅವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಗೋವಾ 'ಸಿಎಂ' ಮನೋಹರ್ ಸ್ಥಾನವನ್ನು ಯಾರು ತುಂಬಬಲ್ಲರು?
|
ಮಿತ್ರ ಪಕ್ಷದ ಧಾವಳಿಕರ್ ಕಣ್ಣು
ಬಿಜೆಪಿಯ ಮಿತ್ರಪಕ್ಷವಾಗಿರುವ ಎಂಜಿಪಿಯ ಶಾಸಕ ಸುದಿನ್ ಧಾವಳಿಕರ್ ಮುಖ್ಯಮಂತ್ರಿ ಗಾದಿಗೆ ತಮ್ಮ ಹೆಸರು ಪ್ರಸ್ತಾಪಿಸಿಕೊಂಡಿದ್ದಾರೆ. 'ಅವರು ತಮ್ಮ ಬೇಡಿಕೆ ಸಲ್ಲಿಸಿದ್ದಾರೆ. ಅದರ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಬಿಜೆಪಿಯನ್ನು ಬೆಂಬಲಿಸಲು ಅನೇಕ ಬಾರಿ ತ್ಯಾಗ ಮಾಡಿದ್ದೇನೆ. ಹೀಗಾಗಿ ತಮಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ಗೋವಾ ವಿಧಾನಸಭೆ ಉಪ ಸಭಾಧ್ಯಕ್ಷ ಮಿಖಾಯೆಲ್ ಲೋಬೋ ತಿಳಿಸಿದ್ದಾರೆ. ಸಂಜೆ ಪರಿಕರ್ ಅವರ ಅಂತ್ಯಕ್ರಿಯೆ ಪೂರ್ಣಗೊಂಡ ಬಳಿಕ ಈ ಕುರಿತಾದ ಪ್ರಕ್ರಿಯೆಗಳು ನಡೆಯಲಿವೆ ಎಂದಿದ್ದಾರೆ.
|
ಬೆಂಬಲ ಕೊಟ್ಟಿದ್ದು ಪರಿಕರ್ಗೆ, ಬಿಜೆಪಿಗಲ್ಲ
ಗೋವಾ ಫಾರ್ವರ್ಡ್ ಪಕ್ಷದ ವಿಜೈ ಸರ್ದೇಸಾಯಿ ಮತ್ತು ಇತರೆ ಸ್ವತಂತ್ರ ಶಾಸಕರು ನಿತಿನ್ ಗಡ್ಕರಿ ಅವರೊಂದಿಗೆ ತಡರಾತ್ರಿ ಮಾತುಕತೆ ನಡೆಸಿದರು. ಈ ಹಿಂದೆ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದ ಪಕ್ಷೇತರ ಶಾಸಕ ಪ್ರಸಾದ್ ಗಾಂವ್ಕರ್ ಅವರನ್ನು ವಿಜೈ ಸರ್ದೇಸಾಯಿ ತಮ್ಮೊಂದಿಗೆ ಕರೆತಂದು ಗಡ್ಕರಿ ಅವರನ್ನು ಭೇಟಿ ಮಾಡಿಸಿದ್ದಾರೆ.
'ನಾವು ಮನೋಹರ್ ಪರಿಕರ್ ಅವರಿಗೆ ಬೆಂಬಲ ನೀಡಿದ್ದೆವೇ ಹೊರತು ಬಿಜೆಪಿಗೆ ಅಲ್ಲ. ಈಗ ಅವರಿಲ್ಲ. ಆಯ್ಕೆಗಳು ಮುಕ್ತವಾಗಿವೆ. ಗೋವಾದಲ್ಲಿ ಸ್ಥಿರತೆಯನ್ನು ನಾವು ಬಯಸಿದ್ದೇವೆ. ಸರ್ಕಾರದ ವಿಸರ್ಜನೆಯಾಗುವುದನ್ನು ನಾವು ಬಯಸುವುದಿಲ್ಲ. ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಿರ್ಧಾರ ಹೊರಬರುವವರೆಗೂ ಕಾಯಲಿದ್ದೇವೆ ಮತ್ತು ಬಳಿಕ ನಂತರದ ತೀರ್ಮಾನ ತೆಗೆದುಕೊಳ್ಳಲಿದ್ದೇವೆ ಎಂದು ವಿಜೈ ತಿಳಿಸಿದ್ದಾರೆ.
ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ
|
ಕಾಂಗ್ರೆಸ್ ಕಸರತ್ತು ಮುಂದುವರಿಕೆ
ಕಾಂಗ್ರೆಸ್ ಸರ್ಕಾರ ರಚನೆಗೆ ತೀವ್ರ ಕಸರತ್ತು ನಡೆಸಿದೆ. ಎನ್ಸಿಪಿ ಶಾಸಕ ಚರ್ಚಿಲ್ ಅಲೆಮಾವೊ ಅವರ ಮನವೊಲಿಸಿ ಬೆಂಬಲ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್, ಒಮ್ಮ ಪಕ್ಷೇತರ ಶಾಸಕನ ಬೆಂಬಲ ಹೊಂದಿದೆ. ಒಟ್ಟು 17 ಶಾಸಕರ ಬೆಂಬಲ ಕಾಂಗ್ರೆಸ್ಗಿದ್ದು, ಸರ್ಕಾರ ರಚಿಸಲು ಇಬ್ಬರು ಸದಸ್ಯರ ಕೊರತೆ ಇದೆ.
ಸಮ್ಮಿಶ್ರ ಸರ್ಕಾರದ ಮಿತ್ರಪಕ್ಷಗಳು ಪರಿಕರ್ ಅವರಿಗೆ ಬೆಂಬಲ ನೀಡಿದ್ದವೆಯೇ ಹೊರತು ಬಿಜೆಪಿಗಲ್ಲ ಎಂದು ರಾಜ್ಯಪಾಲರಿಗೆ ಬರೆದಿರುವ ಪತ್ರದಲ್ಲಿ ಕಾಂಗ್ರೆಸ್ ಹೇಳಿದೆ. ತಾನು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾಗುವವರೆಗೂ ಕಾಂಗ್ರೆಸ್ ಹೊಂದಿರುವ ಶಾಸಕರ ಸಂಖ್ಯೆ ಪರಿಗಣನೆಗೆ ಬರುವುದಿಲ್ಲ ಎಂದು ಬಿಜೆಪಿ ತಿರುಗೇಟು ನೀಡಿದೆ.
ಮನೋಹರ್ ಪರಿಕರ್ ನಿಧನ ಸುದ್ದಿಗೆ ಯಾರು, ಏನು ಹೇಳಿದರು?
|
ಬಿಜೆಪಿಯಿಂದ ಆಫರ್ ಇಲ್ಲ ಎಂದು ಕಾಮತ್
ಈ ಮಧ್ಯೆ ಬಿಜೆಪಿಯು ತನ್ನ ಮಾಜಿ ಸದಸ್ಯ ದಿಗಂಬರ್ ಕಾಮತ್ ಅವರನ್ನು ಕಾಂಗ್ರೆಸ್ನಿಂದ ಪಕ್ಷಕ್ಕೆ ಸೆಳೆದುಕೊಂಡು ಅವರಿಗೆ ಮುಖ್ಯಮಂತ್ರಿ ಹುದ್ದೆ ನೀಡಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಅದನ್ನು ದಿಗಂಬರ್ ಕಾಮತ್ ನಿರಾಕರಿಸಿದ್ದಾರೆ.
'ನನ್ನ ದೆಹಲಿ ಕಾರ್ಯಕ್ರಮ 2-3 ದಿನಗಳ ಹಿಂದೆಯೇ ಅಂತಿಮಗೊಂಡಿತ್ತು. ಯಾರನ್ನೂ ಭೇಟಿ ಮಾಡುವ ಪ್ರಶ್ನೆಯೇ ಇಲ್ಲ. ನನಗೆ ಬಿಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಹುಟ್ಟುಹಾಕಿರುವ ಕಥೆಗಳಿವು. ನನಗೆ ಮುಖ್ಯಮಂತ್ರಿ ಹುದ್ದೆಯ ನಾಯಕತ್ವದ ಬಗ್ಗೆ ಯಾವುದೇ ಚಿಂತೆಯಿಲ್ಲ' ಎಂದು ಕಾಂಗ್ರೆಸ್ ಶಾಸಕರಾಗಿರುವ ಮಾಜಿ ಮುಖ್ಯಮಂತ್ರಿ ಕಾಮತ್ ಸ್ಪಷ್ಟನೆ ನೀಡಿದ್ದಾರೆ.