ಗೋವಾ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಎಎಪಿ ಸೇರ್ಪಡೆ
ಪಣಜಿ, ನವೆಂಬರ್ 16: ಮುಂದಿನ ವರ್ಷ ಆರಂಭದಲ್ಲೇ ಉತ್ತರ ಪ್ರದೇಶ, ಪಂಜಾಬ್ ಮಾತ್ರವಲ್ಲದೇ ಗೋವಾ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆಗಳು ನಡೆಯಲಿದೆ. ಈ ನಡುವೆ ಗೋವಾ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಗೋವಾ ಬಿಜೆಪಿ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಗೋವಾ ಬಿಜೆಪಿ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಮಂಗಳವಾರ ಸತ್ತಾರಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆ ಆಗಿದ್ದಾರೆ. ವಿಶ್ವಜಿತ್ ಕೃಷ್ಣರಾವ್ ರಾಣೆ 2017 ರಲ್ಲಿ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆ ವಿರುದ್ಧ ಪೊರಿಯಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇನ್ನು ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ನಡುವೆ ಹಲವಾರು ನಾಯಕರುಗಳು ಎಎಪಿಗೆ ಸೇರ್ಪಡೆ ಆಗಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಎಎಪಿಗೆ ಸೇರ್ಪಡೆ: ಗೋವಾ ಸಿಎಂ ವಿರುದ್ಧ ಸ್ಪರ್ಧೆಗೆ ಸಜ್ಜು
ಗೋವಾದ ಪೊರಿಯಮ್ ಕ್ಷೇತ್ರದ ಭಾರತೀಯ ಜನತಾ ಪಕ್ಷ(ಬಿಜೆಪಿ)ದ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಮಂಗಳವಾರ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರ್ಪಡೆ ಆಗಲಿರುವ ಸಾಧ್ಯತೆಯ ಬಗ್ಗೆ ಈ ಹಿಂದೆಯೇ ವರದಿ ಆಗಿತ್ತು.
ಗೋವಾಕ್ಕೆ ಮೂರನೇ ಬಾರಿ ಭೇಟಿ ನೀಡಿದ ಕೇಜ್ರಿವಾಲ್
ಪ್ರಸ್ತುತ ಅರವಿಂದ್ ಕೇಜ್ರಿವಾಲ್ ಇಂದಿನಿಂದ ಎರಡು ದಿನಗಳ ಗೋವಾ ಪ್ರವಾಸದಲ್ಲಿದ್ದಾರೆ. ಇಂದು ಮಧ್ಯಾಹ್ನ ಗೋವಾ ತಲುಪಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಲ್ಲಿ ಚುನಾವಣಾ ಕಾರ್ಯವನ್ನು ನಡೆಸಲಿದ್ದಾರೆ. ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾಗೆ ಅರವಿಂದ್ ಕೇಜ್ರಿವಾಲ್ರ ಮೂರನೇ ಭೇಟಿ ಇದಾಗಿದೆ.
ಗೋವಾದ 40 ವಿಧಾನಸಭೆ ಸೀಟಿಗೆ ಎಂಟು ಪಕ್ಷಗಳ ಚುನಾವಣಾ ಸಮರ ಹೇಗಿದೆ ನೋಡಿ..
ಇನ್ನು ಈ ಹಿಂದೆ ಗೋವಾ ಮೈನಿಂಗ್ ಪೀಪಲ್ಸ್ ಫ್ರಂಟ್ ಮುಖ್ಯಸ್ಥ, ಸಾಮಾಜಿಕ ಕಾರ್ಯಕರ್ತ, ಕಾರ್ಮಿಕ ಸಂಘದ ನಾಯಕ ಪುತಿ ಗಾಂವ್ಕರ್, ಗೋವಾದಲ್ಲಿ ಭಾನುವಾರ ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸೇರ್ಪಡೆಗೊಂಡಿದ್ದರು. ಪುತಿ ಗಾಂವ್ಕರ್ 2022 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ವಿರುದ್ಧ ಸ್ಯಾಂಕ್ವೆಲಿಮ್ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಗೋವಾ ಮೈನಿಂಗ್ ಪೀಪಲ್ಸ್ ಫ್ರಂಟ್ ಮುಖ್ಯಸ್ಥರಾಗಿರುವ ಪುತಿ ಗಾಂವ್ಕರ್, ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.
ಇನ್ನು ತಾನು ಎಎಪಿಗೆ ಸೇರ್ಪಡೆ ಆಗಿರುವ ವಿಚಾರದ ಬಗ್ಗೆ ಮಾತನಾಡಿದ್ದ ಪುತಿ ಗಾಂವ್ಕರ್, "ದೆಹಲಿಯಲ್ಲಿ ಕೇಜ್ರಿವಾಲ್ ಮಾಡಿದ ಕಾರ್ಯಗಳಿಂದಾಗಿ ನಾನು ಸ್ಫೂರ್ತಿ ಪಡೆದು ಬಳಿಕ ಎಎಪಿಗೆ ಸೇರ್ಪಡೆ ಆಗಿದ್ದೇನೆ. ಎಎಪಿ ತಾನು ನೀಡುವ ಭರವಸೆಗಳನ್ನು ಈಡೇರಿಸುವ ಪಕ್ಷವಾಗಿದೆ. ಕೆಲವು ದಿನಗಳ ಹಿಂದೆ ನಾನು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಗಣಿಗಾರಿಕೆ, ಭೂ ಮಾಲೀಕತ್ವ ಮತ್ತು ಇತರ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದೇನೆ. ಕೇಜ್ರಿವಾಲ್ ದೆಹಲಿಯಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಉತ್ತಮ ಮೂಲಸೌಕರ್ಯ ಅಥವಾ ಉಚಿತ ವಿದ್ಯುತ್ ಭರವಸೆ ಆಗಲಿ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದಾರೆ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ," ಎಂದು ಶ್ಲಾಘಿಸಿದ್ದರು.
ಗೋವಾವು ಒಟ್ಟು 40 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿದ್ದು, ಪ್ರಸ್ತುತ ಬಿಜೆಪಿಯು 17 ಶಾಸಕರನ್ನು ಹೊಂದಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ)ಯ ವಿಜಯ್ ಸರ್ದೇಸಾಯಿ ಹಾಗೂ ಮೂವರು ಸ್ವತಂತ್ರ ಶಾಸಕರ ಬೆಂಬಲ ಹೊಂದಿದೆ. ಜಿಎಫ್ಪಿ ಹಾಗೂ ಎಂಜಿಪಿ ತಲಾ ಮೂವರು ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 15 ಶಾಸಕರನ್ನು ಹೊಂದಿದೆ. ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಎಂಟು ಪಕ್ಷಗಳು ಸಜ್ಜಾಗಿದೆ.
(ಒನ್ಇಂಡಿಯಾ ಸುದ್ದಿ)