ಕಾಂಗ್ರೆಸ್ ಬಂಗಾಳಕ್ಕೆ ಬರುವುದು ಸರಿಯಾದರೆ, ನಾವು ಗೋವಾದಲ್ಲಿ ಸ್ಪರ್ಧಿಸುವುದು ತಪ್ಪೇ?
ಪಣಜಿ, ಡಿಸೆಂಬರ್ 1: ತ್ರಿಪುರಾ ನಾಗರಿಕ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಎದುರು ಹೀನಾಯವಾಗಿ ಸೋತಿರುವ ಟಿಎಂಸಿ ವಿರುದ್ಧ ರಾಜಕೀಯ ವಲಯದಲ್ಲಿ ಟೀಕಾಪ್ರಹಾರ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳದ ಹೊರಗೆ ಪಕ್ಷವನ್ನು ವಿಸ್ತರಿಸುವ ಯೋಜನೆ ವಿರುದ್ಧ ಕೇಳಿ ಬರುತ್ತಿರುವ ಎಲ್ಲ ಟೀಕೆಗಳಿಗೆ ತೃಣಮೂಲ ಕಾಂಗ್ರೆಸ್ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತಿರುಗೇಟು ಕೊಟ್ಟಿದ್ದಾರೆ.
"ನಾನು ಬಿಜೆಪಿಯನ್ನು ರಾಜಕೀಯವಾಗಿ ಈ ದೇಶದಿಂದ ಹೊರಗೆ ನೋಡಲು ಬಯಸುತ್ತೇನೆ. ಬಂಗಾಳದಲ್ಲಿ ಕಾಂಗ್ರೆಸ್ ಸ್ಪರ್ಧಿಸುವುದೇ ಆದರೆ, ನಾನು ಗೋವಾದಲ್ಲಿ ಏಕೆ ಸ್ಪರ್ಧೆ ಮಾಡಬಾರದು," ಎಂದು ಮಮತಾ ಬ್ಯಾನರ್ಜಿ ಪ್ರಶ್ನೆ ಮಾಡಿದ್ದಾರೆ. ಮುಂಬೈನಲ್ಲಿ ನಾಗರಿಕ ಸಮಾಜದ ಸಂವಾದದಲ್ಲಿ ಅವರು ಮಾತನಾಡಿದ್ದಾರೆ.
ಗೋವಾ ಚುನಾವಣೆ; ಪರಿಕ್ಕರ್ ಪುತ್ರನಿಗೆ ಬಿಜೆಪಿ ಟಿಕೆಟ್ ಸಿಗಲಿದೆಯೇ?
"ಬಿಜೆಪಿ ವಿರುದ್ಧ ಹೋರಾಡುವುದು ಹಾಗೂ ಕ್ಷೇತ್ರದಲ್ಲಿ ಉಳಿಯುವುದೇ ಇಲ್ಲಿ ಮುಖ್ಯ, ಇಲ್ಲದಿದ್ದರೆ ಅವರು ನಿಮ್ಮನ್ನು ಔಟ್ ಮಾಡುತ್ತಾರೆ. ಎಲ್ಲಾ ಪ್ರಾದೇಶಿಕ ಪಕ್ಷಗಳು ಒಟ್ಟಾಗಿದ್ದರೆ ಬಿಜೆಪಿಯನ್ನು ಸೋಲಿಸುವುದು ಸುಲಭವಾಗಿರುತ್ತದೆ. ರಾಜ್ಯದಲ್ಲಿ ಪರಿಸ್ಥಿತಿ ಚೆನ್ನಾಗಿದ್ದರೂ ನಾನು ಬಂಗಾಳದಿಂದ ಹೊರನಡೆಯಬೇಕಾಯಿತು, ಇತರರೂ ಕೂಡ ಹೊರ ಬಂದರೆ ಉತ್ತಮ ಸ್ಪರ್ಧೆ ನಡೆಸಲು ಸಾಧ್ಯವಾಗುತ್ತದೆ," " ಎಂದು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದರು.
ಕೇಂದ್ರ ಸರ್ಕಾರದ ಲೆಕ್ಕಾಚಾರಗಳ ಬಗ್ಗೆ ಉಲ್ಲೇಖ;
ಭಾರತದಲ್ಲಿ ಮುಂಬರುವ ಪಂಚರಾಜ್ಯ ಚುನಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ವಿವಾದಿತ ಕೃಷಿ ಕಾಯ್ದೆಗಳ ರದ್ಧತಿ ಮತ್ತು ಇತ್ತೀಚಿನ ಇಂಧನ ಬೆಲೆ ಇಳಿಕೆಯು ಚುನಾವಣೆ ಉದ್ದೇಶಕ್ಕಾಗಿ ಬಿಜೆಪಿ ತೆಗೆದುಕೊಂಡಿರುವ ಲೆಕ್ಕಾಚಾರದ ಕ್ರಮಗಳಾಗಿವೆ, ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
"ದೇಶದ ಮತ್ತು ರಾಜ್ಯಗಳ ಚುನಾವಣೆಯ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೆದರುತ್ತಾರೆ. ಆದ್ದರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕಡಿಮೆಯಾಗುತ್ತವೆ. ಆದರೆ ಉಳಿದ ಸಮಯದಲ್ಲಿ, ಅವುಗಳ ಬೆಲೆ ಏರಿಕೆ ಆಗುತ್ತವೆ. ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೃಷಿ ಕಾನೂನುಗಳನ್ನು ರದ್ದುಪಡಿಸಲಾಗಿದೆ, "ಎಂದು ಅವರು ಹೇಳಿದ್ದಾರೆ.
ರಾಜಕಾರಣಿಗಳಿಗೆ ಹೆಚ್ಚು ಮಾತನಾಡುವುದೇ ಅಭ್ಯಾಸ:
"ರಾಜಕಾರಣಿಗಳಿಗೆ ಹೆಚ್ಚು ಮಾತನಾಡುವುದು ಅಭ್ಯಾಸವಾಗಿದೆ, ಆದರೆ ನಾನು ಕಡಿಮೆ ಮಾತನಾಡಲು ಮತ್ತು ಹೆಚ್ಚು ನಡೆಯಲು ಇಷ್ಟಪಡುತ್ತೇನೆ," ಎನ್ನುವ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಕುರಿತು ಮಮತಾ ಬ್ಯಾನರ್ಜಿ ವ್ಯಂಗ್ಯವಾಡಿದರು.
ವಿವಾದಾತ್ಮಕ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಕೇಂದ್ರದ ಆಡಳಿತ ಪಕ್ಷವು ಪ್ರತಿಪಕ್ಷ ನಾಯಕರು ಹಾಗೂ ವಿರೋಧಿಗಳ ವಿರುದ್ಧ ಕಠಿಣ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಆರೋಪಿಸಿದರು. "ಯುಎಪಿಎ ನಾಗರಿಕ ಸಮಾಜಕ್ಕಾಗಿ ಅಲ್ಲ. ಅದು ಈಗ ದುರ್ಬಳಕೆಯಾಗುತ್ತಿದೆ. ನನಗೆ ಯಾವುದೇ ಏಜೆನ್ಸಿ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ. ಆದರೆ ಅವುಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿ ಬದಲಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಜನರ ವಿರುದ್ಧ ಯಾವುದೇ ಕಾನೂನು ಬರುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ," ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.