ಕರ್ನಾಟಕದ ನಂತರ ಗೋವಾದಲ್ಲಿಯೂ ಕಾಂಗ್ರೆಸ್ಗೆ ಭಾರಿ ಆಘಾತ
ಪಣಜಿ, ಜುಲೈ 10: ಕರ್ನಾಟಕದಲ್ಲಿ ಭಾರಿ ಹಿನ್ನಡೆ ಅನುಭವಿಸುತ್ತಿರುವ ಕಾಂಗ್ರೆಸ್, ಅದಕ್ಕಿಂತಲೂ ದೊಡ್ಡ ಹಿನ್ನಡೆಯನ್ನು ಗೋವಾ ರಾಜ್ಯದಲ್ಲಿ ಅನುಭವಿಸಿದೆ.
ಗೋವಾದ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ, ಇದರಲ್ಲಿ ವಿರೋಧ ಪಕ್ಷದ ನಾಯಕರು ಸೇರಿದ್ದಾರೆ.
'10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ'
ಗೋವಾದಲ್ಲಿ ಬಿಜೆಪಿಯು ಮಿತ್ರ ಪಕ್ಷದೊಂದಿಗೆ ಅಧಿಕಾರದಲ್ಲಿದ್ದು ಕೆಲವು ದಿನಗಳಿಂದ ಅಧಿಕಾರ ಉಳಿಸಿಕೊಳ್ಳಲು ಪರದಾಡುತ್ತಿತ್ತು, ಇಂತಹಾ ಸಮಯದಲ್ಲಿ ಕಾಂಗ್ರೆಸ್ನ ಹತ್ತು ಶಾಸಕರು ಒಟ್ಟಾಗಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಘೋಷಿಸಿ ಇಂದು ಸ್ಪೀಕರ್ಗೆ ಪತ್ರ ನೀಡಿದ್ದಾರೆ.
ಗೋವಾದಲ್ಲಿ 15 ಕಾಂಗ್ರೆಸ್ ಶಾಸಕರಿದ್ದರು, ಅದರಲ್ಲಿ 10 ಶಾಸಕರು ಬಿಜೆಪಿಗೆ ಬೆಂಬಲ ಘೋಷಿಸಿ ಬಿಜೆಪಿ ಸೇರಿದ್ದಾರೆ. ಒಟ್ಟಾರೆ ಶಾಸಕರ ಮೂರನೇ ಎರಡು ಭಾಗದಷ್ಟು ಪಕ್ಷಾಂತರ ಮಾಡಿರುವ ಕಾರಣ ಆ ಹತ್ತು ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುವ ಅನಿವಾರ್ಯತೆಯೂ ಸೃಷ್ಟಿಯಾಗಿಲ್ಲ.
ಅಲುಗಾಡುತ್ತಿದ್ದ ಬಿಜೆಪಿ ಸರ್ಕಾರವ ಗಟ್ಟಿ ಮಾಡಿದ ಕೈ ಶಾಸಕರು
ಗೋವಾದಲ್ಲಿ ಅಲುಗಾಡುತ್ತಿದ್ದ ಬಿಜೆಪಿ ಸರ್ಕಾರವನ್ನು ಕಾಂಗ್ರೆಸ್ನ 10 ಶಾಸಕರು ಉಳಿಸಿದ್ದು, ಕಾಂಗ್ರೆಸ್ ಶಾಸಕರು ಯಾವುದೇ ಬೇಡಿಕೆ ಇಲ್ಲದೆ, ಸ್ವತಂತ್ರ್ಯವಾಗಿ ಬಂದು ತಮ್ಮ ಪಕ್ಷ ಸೇರಿ, ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಹೇಳಿದ್ದಾರೆ.
ವಿಪಕ್ಷ ನಾಯಕರೇ ಪಕ್ಷಾಂತರ ಮಾಡಿದ್ದಾರೆ
ಪಕ್ಷಾಂತರ ಮಾಡಿದ ಶಾಸಕರ ಮುಖಂಡತ್ವ ವಹಿಸಿದ್ದ, ಗೋವಾ ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿದ್ದ ಚಂದ್ರಕಾಂತ್ ಕಾವ್ಲೇಕರ್ ಮಾತನಾಡಿ, ಮುಖ್ಯಮಂತ್ರಿ ಮಾಡುತ್ತಿರುವ ಒಳ್ಳೆಯ ಕಾರ್ಯಕ್ಕೆ ಬೆಂಬಲ ನೀಡಲು ಬಿಜೆಪಿ ಸೇರಿದ್ದೇವೆ, ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸಹ ನಾವು ಸರ್ಕಾರ ರಚಿಸಲು ಆಗಲಿಲ್ಲ, ಈಗ ಕೆಲಸ ಮಾಡುತ್ತಿರುವ ಸರ್ಕಾರಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
Live Updates: ದೇವೇಗೌಡ ನಿವಾಸಕ್ಕೆ ಕುಮಾರಸ್ವಾಮಿ ಧಿಡೀರ್ ಭೇಟಿ
'ಕಾಂಗ್ರೆಸ್ ಭರವಸೆಗಳನ್ನು ಈಡೇರಿಸಲಿಲ್ಲ'
ಕಾಂಗ್ರೆಸ್ ಪಕ್ಷ ಮಾಡಿದ್ದ ಭರವಸೆಗಳನ್ನು ಈಡೇರಿಸಲಿಲ್ಲ, ಕಾಂಗ್ರೆಸ್ಗೆ ಹಲವು ಅವಕಾಶಗಳು ಸಿಕ್ಕಿದ್ದರೂ ಸಹ ಅವರು ಕೆಲಸ ಮಾಡಲಿಲ್ಲ, ಯಾವುದೇ ಅಭಿವೃದ್ಧಿಯನ್ನೇ ಮಾಡದಿದ್ದಲ್ಲಿ ನಮ್ಮನ್ನು ಜನ ಆರಿಸುವುದಾದರೂ ಹೇಗೆ? ಹಾಗಾಗಿ ನಾವು ಈ ನಿರ್ಣಯ ಕೈಗೊಂಡಿದ್ದೇವೆ ಎಂದು ಚಂದ್ರಕಾಂತ್ ಕಾವ್ಲೇಕರ್ ಹೇಳಿದ್ದಾರೆ.
ಪಕ್ಷಾಂತರ ಮಾಡಿದ ಶಾಸಕರ ಹೆಸರು
ಗೋವಾ ಕಾಂಗ್ರೆಸ್ ಶಾಸಕರಾಗಿದ್ದ ಬಾಬು ಕಾಲ್ವೇಕರ್, ಬಾಬುಶ್ ಮೊನ್ಸೆರಾಟೆ ಮತ್ತು ಅವರ ಪತ್ನಿ ಜೆನಿಫರ್ ಮೊನ್ಸೆರಾಟೆ, ಟೋನಿ ಫರ್ನಾಂಡಿಸ್, ಫ್ರಾನ್ಸಿಸ್ ಸಿಲ್ವೇರಿಯಾ, ಫಿಲಿಪಿ ನೇರಿ ರೋಡ್ರಿಗೋಸ್, ಕ್ಲಾಫಾಸಿಯೋ, ವಿಲ್ಫ್ರೆಡ್ ಡಿಸಾ, ನೀಲಕಂಠ ಹಲಂಕಾರ್, ಇಸಿಡೋರ್ ಫರ್ನಾಂಡೀಸ್ ಅವರುಗಳು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ತೆಲಂಗಾಣದಲ್ಲಿಯೂ ಹೀಗೆಯೇ ಆಗಿತ್ತು
ಕೆಲವು ದಿನಗಳ ಹಿಂದಷ್ಟೆ ತೆಲಂಗಾಣದಲ್ಲೂ ಸಹ ಕಾಂಗ್ರೆಸ್ಗೆ ಹೀಗೆಯೇ ಆಗಿತ್ತು, 18 ಶಾಸಕರಲ್ಲಿ 12 ಶಾಸಕರು ಆಡಿತಾರೂಢ ಟಿಆರ್ಎಸ್ಗೆ ಬೆಂಬಲ ಸೂಚಿಸಿ ಪಕ್ಷಾಂತರ ಮಾಡಿದ್ದರು. ಇದೀಗ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಭಾರಿ ಸಂಕಷ್ಟದಲ್ಲಿದ್ದು ಕಾಂಗ್ರೆಸ್ನ ಉಳಿವು ಅಪಾಯದಲ್ಲಿದೆ.