ಗೋವಾ; ಎಎಪಿಗೆ ಉತ್ಪಲ್ ಪರಿಕ್ಕರ್ ಆಹ್ವಾನಿಸಿದ ಕೇಜ್ರಿವಾಲ್
ಪಣಜಿ, ಜನವರಿ 17; ಗೋವಾ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ರಾಜ್ಯ ಮಾಜಿ ಸಿಎಂ ದಿ. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ ಚುನಾವಣಾ ಕಣಕ್ಕಿಳಿಯುವ ಕುರಿತು ಇನ್ನೂ ಅಂತಿಮ ತೀರ್ಮಾನವಾಗಿಲ್ಲ.
ಉತ್ಪಲ್ ಪರಿಕ್ಕರ್ ತಮ್ಮ ತಂದೆ ಪ್ರತಿನಿಧಿಸುತ್ತಿದ್ದ ಗೋವಾ ರಾಜಧಾನಿ ಪಣಜಿ ಕ್ಷೇತ್ರದಿಂದಲೇ ಚುನಾವಣೆಗೆ ಸ್ಪರ್ಧಿಸಲು ಬಯಸಿದ್ದಾರೆ. ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿದ್ದಾರೆ. ಆದರೆ ಬಿಜೆಪಿ ಟಿಕೆಟ್ ನೀಡುವ ಕುರಿತು ಯಾವುದೇ ಸುಳಿವು ಕೊಟ್ಟಿಲ್ಲ.
ಗೋವಾ; ಬಿಜೆಪಿ ಹಸಿರು ನಿಶಾನೆಗಾಗಿ ಕಾದು ಕೂತ ಉತ್ಪಲ್ ಪರಿಕ್ಕರ್!
ಶನಿವಾರ ಮತ್ತು ಭಾನುವಾರ ಗೋವಾ ಪ್ರವಾಸ ಕೈಗೊಂಡಿದ್ದ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಚುನಾವಣಾ ಪ್ರಚಾರ ನಡೆಸಿದರು. ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್ರನ್ನು ಪಕ್ಷಕ್ಕೆ ಆಹ್ವಾನಿಸಿದರು.
ಗೋವಾ ಚುನಾವಣೆ; 13 ಅಂಶಗಳ ಅಜೆಂಡಾ ಘೋಷಿಸಿದ ಅರವಿಂದ ಕೇಜ್ರಿವಾಲ್
ಒಂದು ಕಡೆ ಶಿವಸೇನೆ ಉತ್ಪಲ್ ಪರಿಕ್ಕರ್ ಚುನಾವಣೆಗೆ ಸ್ಪರ್ಧಿಸಿದರೆ ಬೆಂಬಲಿಸುವುದಾಗಿ ಘೋಷಣೆ ಮಾಡಿದೆ. ಮತ್ತೊಂದು ಕಡೆ ಎಎಪಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದೆ. ಬಿಜೆಪಿ ಉತ್ಪಲ್ ಪರಿಕ್ಕರ್ ಸ್ಪರ್ಧೆಗೆ ಹಸಿರು ನಿಶಾನೆ ತೋರಲಿದೆಯೇ? ಕಾದು ನೋಡಬೇಕಿದೆ.
ಗೋವಾ ಚುನಾವಣೆ; ಜನವರಿ 19ರಂದು ಬಿಜೆಪಿ ಅಭ್ಯರ್ಥಿಗಳು ಘೋಷಣೆ
ಜನವರಿ 11ರಂದು ಉತ್ಪಲ್ ಪರಿಕ್ಕರ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದರು. ಪಣಜಿ ಕ್ಷೇತ್ರದಲ್ಲಿ ಅವರು ಚುನಾವಣೆ ಪ್ರಚಾರ ಆರಂಭಿಸಿದ್ದು, ಒಂದು ವೇಳೆ ಬಿಜೆಪಿ ಟಿಕೆಟ್ ನೀಡದಿದ್ದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.
ಭಾನುವಾರ ಗೋವಾದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅರವಿಂದ ಕೇಜ್ರಿವಾಲ್, "ನಾನು ಮನೋಹರ್ ಪರಿಕ್ಕರ್ ಗೌರವಿಸುತ್ತೇನೆ. ಅವರ ಪುತ್ರ ಉತ್ಪಲ್ ಪರಿಕ್ಕರ್ ಬಯಸಿದರೆ ಎಎಪಿ ಪಕ್ಷ ಸೇರ್ಪಡೆಗೆ ಸ್ವಾಗತಿಸುತ್ತೇನೆ" ಎಂದರು.
ಮತ್ತೊಂದು ಕಡೆ ಗೋವಾ ಚುನಾವಣೆಗೆ ಎನ್ಸಿಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿವೆ. ಉತ್ಪಲ್ ಪರಿಕ್ಕರ್ ಪಣಜಿಯಿಂದ ಸ್ಪರ್ಧೆ ಮಾಡುವುದಾದರೆ ಬೆಂಬಲಿಸುತ್ತೇವೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಟಿಕೆಟ್ ಬಯಸಿದ್ದರು; 2019ರಲ್ಲಿ ಮನೋಹರ್ ಪರಿಕ್ಕರ್ ನಿಧನದ ಬಳಿಕ ಪಣಜಿ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಯಿತು. ಆಗಲೇ ಉತ್ಪಲ್ ಪರಿಕ್ಕರ್ ಬಿಜೆಪಿ ಟಿಕೆಟ್ನಿಂದ ಕಣಕ್ಕಿಳಿಯಲು ಬಯಸಿದ್ದರು. ಆದರೆ ಪಕ್ಷ ಟಿಕೆಟ್ ನೀಡಲಿಲ್ಲ.
ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್ ಅಭ್ಯರ್ಥಿಯಾದರು. ಕಾಂಗ್ರೆಸ್ನ ಅಟನಸಿಯೋ ಮೊನ್ನೆರ್ರೇಟ್ 1,758 ಮತಗಳ ಅಂತರಿಂದ ಸಿದ್ಧಾರ್ಥ್ ಕುನ್ಸಿಲಿಯೆಂಕರ್ ಸೋಲಿಸಿದರು. ಮನೋಹರ್ ಪರಿಕ್ಕರ್ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಕಾಂಗ್ರೆಸ್ ಪಾಲಾಯಿತು.
ಟಿಕೆಟ್ ನೀಡಲು ಆಗುವುದಿಲ್ಲ; ಗೋವಾ ಬಿಜೆಪಿ ಚುನಾವಣಾ ಉಸ್ತುವಾರಿ ದೇವೇಂದ್ರ ಫಡ್ನವೀಸ್ ಜನವರಿ 12ರಂದು ಮಾಧ್ಯಮಗಳ ಜೊತೆ ಮಾತನಾಡಿ, "ಮನೋಹರ್ ಪರಿಕ್ಕರ್ ಗೋವಾದಲ್ಲಿ ಬಿಜೆಪಿ ಕಟ್ಟಿ ಬೆಳೆಸಲು ಸಾಕಷ್ಟು ಶ್ರಮ ವಹಿಸಿದ್ದಾರೆ. ಆದರೆ ನಾಯಕರ ಮಕ್ಕಳು ಎಂಬ ಕಾರಣಕ್ಕೆ ಟಿಕೆಟ್ ನೀಡುವುದು ಬಿಜೆಪಿಯಲ್ಲಿ ಸಾಧ್ಯವಿಲ್ಲ" ಎಂದು ಹೇಳಿದ್ದರು.
"ಬಿಜೆಪಿಯಲ್ಲಿ ಅಭ್ಯರ್ಥಿ ಸಾಮರ್ಥ್ಯದ ಮೇಲೆ ಟಿಕೆಟ್ ನೀಡಲಾಗುತ್ತದೆ. ಟಿಕೆಟ್ ನೀಡುವ ಕುರಿತು ಪಕ್ಷದ ಸಂಸದೀಯ ಮಂಡಳಿ ಅಂತಿಮ ತೀರ್ಮಾನ ಕೈಗೊಳ್ಳಲಿದೆ" ಎಂದು ದೇವೇಂದ್ರ ಫಡ್ನವೀಸ್ ಸ್ಪಷ್ಟಪಡಿಸಿದ್ದರು.
"ನನ್ನ ತಂದೆಯ ಜೊತೆ ಕೆಲಸ ಮಾಡಿದರೆ ನನ್ನ ಪರವಾಗಿ ಚುನಾವಣೆ ಪ್ರಚಾರಕ್ಕೆ ಬರುತ್ತಿದ್ದಾರೆ. ನಾನು ನನ್ನ ಅಭಿಪ್ರಾಯವನ್ನು ರಾಜ್ಯ, ಕೇಂದ್ರದ ನಾಯಕರಿಗೆ ತಿಳಿಸಿದ್ದೇನೆ. ಟಿಕೆಟ್ ನೀಡುವ ಕುರಿತು ಅವರು ತೀರ್ಮಾನ ಕೈಗೊಳ್ಳಬೇಕು" ಎಂದು ಉತ್ಪಲ್ ಪರಿಕ್ಕರ್ ಹೇಳಿದ್ದಾರೆ. ಅವರು ಪಣಜಿಯಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.
Recommended Video
ಪಣಜಿ ಕ್ಷೇತ್ರದಿಂದಲೇ ಟಿಕೆಟ್ ಬೇಕು ಎಂಬುದು ಉತ್ಪಲ್ ಪರಿಕ್ಕರ್ ಬೇಡಿಕೆ. ಆದರೆ ಬಾಬುಶ್ ಮೊನ್ಸೆರಾತ್ ಸೇರಿದಂತೆ ಇನ್ನೂ ಕೆಲವು ಬಿಜೆಪಿ ನಾಯಕರು ಕ್ಷೇತ್ರದ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದಾರೆ. ಆದ್ದರಿಂದ ಯಾರಿಗೆ ಟಿಕೆಟ್ ಸಿಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.