ಗೋವಾ ಚುನಾವಣೆ: 'ಇತ್ತೀಚೆಗೆ ಕೆಲವು ಪಕ್ಷ ಇಲ್ಲಿಗೆ ಬರುತ್ತಿದೆ', ಎಎಪಿ, ಟಿಎಂಸಿಗೆ ನಡ್ಡಾ ಟಾಂಗ್
ಪಣಜಿ, ನವೆಂಬರ್ 25: ಗೋವಾದಲ್ಲಿ ಮುಂದಿನ ವರ್ಷದಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಈ ಹಿನ್ನೆಲೆಯಿಂದಾಗಿ ಎಲ್ಲಾ ಪಕ್ಷಗಳ ನಾಯಕರುಗಳು ಗೋವಾಕ್ಕೆ ತೆರಳಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಕೂಡಾ ಗೋವಾಕ್ಕೆ ಬುಧವಾರವೇ ತೆರಳಿದ್ದು, ಎರಡು ದಿನಗಳ ಪ್ರವಾಸದಲ್ಲಿ ಇದ್ದಾರೆ.
ಗುರುವಾರ ಗೋವಾದ ವಾಲ್ಪೋದಲ್ಲಿ "ಕಾರ್ಯಕರ್ತ ಮೇಳ" ದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ, "ಸಮಾಜದ ನೀತಿ ಸಂಹಿತೆಗಾಗಿ ಪಕ್ಷವು ಕೆಲಸ ಮಾಡಬೇಕಾಗಿದೆ. ಎಲ್ಲರಿಗೂ ಪ್ರಯೋಜನವಾಗುವವರೆಗೆ ರಾಜ್ಯದ ರಾಜ್ಯದ ಅಭಿವೃದ್ಧಿ ಮತ್ತು ಸಬಲೀಕರಣಕ್ಕೆ ಬೆಂಬಲ ನೀಡಿ," ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.
ಗೋವಾ ಬಿಜೆಪಿ ನಾಯಕ ವಿಶ್ವಜಿತ್ ರಾಣೆ ಎಎಪಿ ಸೇರ್ಪಡೆ
"ನಾವು ಸಮಾಜದ ನೀತಿ ಸಂಹಿತೆಯನ್ನು ಉಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ. ನಾವು ಗೋವಾದಲ್ಲಿ ಒಟ್ಟಾಗಿ ಕೆಲಸ ಮಾಡಬೇಕಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ, ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ ಔರ್ ಸಬ್ಕಾ ಪ್ರಯಾಸ್ ಎಂಬ ಧ್ಯೇಯದೊಂದಿಗೆ ರಾಜ್ಯವನ್ನು ಅಭಿವೃದ್ಧಿಪಡಿಸಲು ನಾವು ಕೆಲಸ ಮಾಡಬೇಕಾಗಿದೆ. ನಾವು ಈ ದೇಶದ ಕಟ್ಟಕಡೆಯ ವ್ಯಕ್ತಿ ಕೂಡಾ ಸಶಕ್ತನಾಗುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ," ಎಂದು ಕೂಡಾ ತಿಳಿಸಿದರು.
"70 ವರ್ಷಗಳ ಕಾಲ ಕಾಂಗ್ರೆಸ್ ನಡೆಸಿದ ಸರ್ಕಾರಗಳಲ್ಲಿ ಜನರು ಇನ್ನು ಕೂಡಾ ಹಿಂದೆ ಉಳಿದಿದ್ದಾರೆ. ಈಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಯಲ್ಲಿದೆ. ಗೋವಾದಲ್ಲಿ ಹಾಗೂ ದೇಶದಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಕೂಡಾ ತಲುಪುವ ಕಾರ್ಯ ನಡೆದಿದೆ," ಎಂದು ಹೇಳಿದರು.
"ಇತ್ತೀಚಿನ ದಿನಗಳಲ್ಲಿ ಹಲವು ಪಕ್ಷಗಳು ಗೋವಾಕ್ಕೆ ಬಂದಿದೆ. ಜನರನ್ನು ಓಲೈಕೆ ಮಾಡುವ ಯತ್ನ ಮಾಡುತ್ತಿದೆ. ಅವರು ಪಶ್ಚಿಮ ಬಂಗಾಳದಿಂದ ಏನು ಮಾಡಿದ್ದಾರೆ ಎಂದು ಯಾರದಾರೂ ಕೇಳಬೇಕೇ?. ಮತ್ತೊಂದೆಡೆ ದೆಹಲಿಯಲ್ಲಿ ಇರುವವರು ಬರೀ ಜಾಹೀರಾತು ಹೊರತುಪಡಿಸಿ ಬೇರೆ ಏನನ್ನು ಮಾಡುತ್ತಿಲ್ಲ. ಎಲ್ಲವನ್ನೂ ಕೇಂದ್ರ ಸರ್ಕಾರಕ್ಕೆ ಬಿಟ್ಟು ಬಿಟ್ಟಿದ್ದಾರೆ," ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಗೋವಾದ 40 ವಿಧಾನಸಭೆ ಸೀಟಿಗೆ ಎಂಟು ಪಕ್ಷಗಳ ಚುನಾವಣಾ ಸಮರ ಹೇಗಿದೆ ನೋಡಿ..
ಗೋವಾ ಬಿಜೆಪಿ ತೊರೆದು ಎಎಪಿ ಸೇರಿದ ನಾಯಕ
ಗೋವಾಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಭೇಟಿ ನೀಡುವ ಸ್ವಲ್ಪ ದಿನಗಳ ಮೊದಲು ಬಿಜೆಪಿ ನಾಯಕರೋರ್ವರು ಪಕ್ಷವನ್ನು ತೊರೆದು ಎಎಪಿಗೆ ಸೇರ್ಪಡೆ ಆಗಿದ್ದಾರೆ. ಗೋವಾ ಬಿಜೆಪಿ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ಗೋವಾ ಬಿಜೆಪಿ ನಾಯಕ ವಿಶ್ವಜಿತ್ ಕೃಷ್ಣರಾವ್ ರಾಣೆ ಸತ್ತಾರಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿಗೆ ಸೇರ್ಪಡೆ ಆಗಿದ್ದಾರೆ.
ವಿಶ್ವಜಿತ್ ಕೃಷ್ಣರಾವ್ ರಾಣೆ 2017 ರಲ್ಲಿ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ರಾಣೆ ವಿರುದ್ಧ ಪೊರಿಯಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಇನ್ನು ಗೋವಾದಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ನಡುವೆ ಹಲವಾರು ನಾಯಕರುಗಳು ಎಎಪಿಗೆ ಸೇರ್ಪಡೆ ಆಗಿದ್ದಾರೆ.
ಗೋವಾ ಸಣ್ಣ ರಾಜ್ಯವಾದರೂ ಕೂಡಾ ಪ್ರಸ್ತುತ ಗೋವಾದಲ್ಲಿ ಭರ್ಜರಿ ಚುನಾವಣಾ ತಯಾರಿಯನ್ನು ಮುಖ್ಯಮಂತ್ರಿ ಗದ್ದುಗೆಯ ಮೇಲೆ ಗುರಿ ಇಟ್ಟಿರುವ ಪಕ್ಷಗಳು ನಡೆಸುತ್ತಿದೆ. 40 ವಿಧಾನಸಭೆ ಸೀಟುಗಳನ್ನು ಹೊಂದಿರುವ ಗೋವಾ ರಾಜ್ಯದಲ್ಲಿ 2022 ರ ಫೆಬ್ರವರಿ ತಿಂಗಳಿನಲ್ಲಿ ವಿಧಾನಸಭೆ ಚುನಾವಣೆಯು ನಡೆಯಲಿದೆ. ಗೋವಾ ವಿಧಾನಸಭೆ ಒಟ್ಟು 40 ಸದಸ್ಯ ಬಲದ ವಿಧಾನಸಭೆಯನ್ನು ಹೊಂದಿದ್ದು, ಪ್ರಸ್ತುತ ಬಿಜೆಪಿಯು 17 ಶಾಸಕರನ್ನು ಹೊಂದಿದೆ. ಮಹಾರಾಷ್ಟ್ರವಾದಿ ಗೋಮಾಂತಕ್ ಪಾರ್ಟಿ(ಎಂಜಿಪಿ), ಗೋವಾ ಫಾರ್ವರ್ಡ್ ಪಾರ್ಟಿ(ಜಿಎಫ್ಪಿ)ಯ ವಿಜಯ್ ಸರ್ದೇಸಾಯಿ ಹಾಗೂ ಮೂವರು ಸ್ವತಂತ್ರ ಶಾಸಕರ ಬೆಂಬಲ ಹೊಂದಿದೆ. ಜಿಎಫ್ಪಿ ಹಾಗೂ ಎಂಜಿಪಿ ತಲಾ ಮೂವರು ಶಾಸಕರನ್ನು ಹೊಂದಿದ್ದು, ಕಾಂಗ್ರೆಸ್ 15 ಶಾಸಕರನ್ನು ಹೊಂದಿದೆ. ಮುಂದಿನ ವರ್ಷ ಗೋವಾದಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಎಂಟು ಪಕ್ಷಗಳು ಸಜ್ಜಾಗಿದೆ.