'ಯಾವುದೇ ಭರವಸೆ ಇಲ್ಲ..': ರಾಜೀನಾಮೆ ಪತ್ರದಲ್ಲಿ ಸೋನಿಯಾಗೆ ಹೇಳಿದ ಗೋವಾ ಕಾಂಗ್ರೆಸ್ ನಾಯಕ
ನವದೆಹಲಿ, ಸೆಪ್ಟೆಂಬರ್, 27: ಅನುಭವಿ ಗೋವಾ ಕಾಂಗ್ರೆಸ್ ನಾಯಕ, ಗೋವಾ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಈಗ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಹೊಗಳಿದ ಬೆನ್ನಲ್ಲೇ ಲುಯಿಜಿನೊ ಫಲೆರೊ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲಿ ಲುಯಿಜಿನೊ ಫಲೆರೊ "ಕಾಂಗ್ರೆಸ್ ಪಕ್ಷ ಕುಸಿತ ಕಾಣುವುದನ್ನು ತಡೆಯುವುದರಲ್ಲಿ ಯಾವುದೇ ಭರವಸೆ ಆಗಲಿ ಅಥವಾ ಆಶಯ ಇಲ್ಲ," ಎಂದು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷಗಳ ರಾಜಕೀಯ ಜೀವನವನ್ನು ಹೊಂದಿರುವ ಗೋವಾ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಹೊಗಳಿದ್ದರು. ಈಗ ತಮ್ಮ 40 ವರ್ಷಗಳ ಕಾಂಗ್ರೆಸ್ನೊಂದಿಗೆ ನಂಟಿಗೆ ಕೊನೆ ಹೇಳಿದ್ದಾರೆ. ಈ ನಡುವೆ ಲುಯಿಜಿನೊ ಫಲೆರೊ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗಿದೆ.
ದೀದಿಯನ್ನು ಹೊಗಳಿದ್ದ ಗೋವಾ ಮಾಜಿ ಸಿಎಂ ಲುಯಿಜಿನೊ ಕಾಂಗ್ರೆಸ್ಗೆ ರಾಜೀನಾಮೆ
ಇನ್ನು ತನ್ನ ರಾಜೀನಾಮೆ ಪತ್ರದಲ್ಲಿ ಗೋವಾ ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ, "ಯಾವ ಪಕ್ಷಕ್ಕಾಗಿ ನಾವು ಹೋರಾಟ ನಡೆಸಿದ ಹಾಗೂ ತ್ಯಾಗವನ್ನು ಮಾಡಿದೆವೋ ಅದೇ ಪಕ್ಷವಾಗಿ ಕಾಂಗ್ರೆಸ್ ಈಗ ಉಳಿದಿಲ್ಲ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪಕ್ಷದ ಕುಸಿತವನ್ನು ನೆನಪಿಸಿಕೊಂಡಿದ್ದಾರೆ. ತೀವ್ರ ಮುಜುಗರಕ್ಕೆ ಒಳಪಟ್ಟಿದ್ದಾರೆ ಎಂದು ಬರವಣಿಯ ಮೂಲಕ ಅಭಿಪ್ರಾಯ ಮೂಡಿಸಿದ್ದಾರೆ.
"ಈವರೆಗೆ ನಮ್ಮ 13 ಶಾಸಕರ ಸೋಲಿಗೆ ಯಾರೂ ಕೂಡಾ ಹೊಣೆಗಾರರಾಗಿಲ್ಲ. ಕಾಂಗ್ರೆಸ್ ಪಕ್ಷದ ಕುಸಿತವನ್ನು ತಡೆಯಲು ಹಾಗೂ ಕಾಂಗ್ರೆಸ್ ಅನ್ನು ಪುನಃಶ್ಚೇತನಗೊಳಿಸುವ ಯಾವುದೇ ಭರವಸೆ ಅಥವಾ ಇಚ್ಛೆ ಇರುವುದು ನನಗೆ ಕಂಡು ಬಂದಿಲ್ಲ," ಎಂದು ಕಾಂಗ್ರೆಸ್ನಲ್ಲಿ 40 ವರ್ಷಗಳ ರಾಜಕೀಯ ಜೀವನವನ್ನು ಹೊಂದಿರುವ ಅನುಭವಿ ನಾಯಕ ಹೇಳಿದ್ಧಾರೆ.
"ನಾವು ಯಾವ ಪಕ್ಷಕ್ಕಾಗಿ ಹೋರಾಟ ನಡೆಸಿದ್ದೆವು ಹಾಗೂ ತ್ಯಾಗವನ್ನು ಮಾಡಿದ್ದೆವೋ ಅದೇ ಪಕ್ಷವಾಗಿ ಕಾಂಗ್ರೆಸ್ ಉಳಿದಿಲ್ಲ. ಕಾಂಗ್ರೆಸ್ ಪಕ್ಷವನ್ನು ಸ್ಥಾಪನೆ ಮಾಡಿದವರು ಯಾವ ಸಿದ್ದಾಂತವನ್ನು ಹೊಂದಿದ್ದರೋ ಹಾಗೂ ಯಾವ ತತ್ವ, ಆದರ್ಶವನ್ನು ಹೊಂದಿದ್ದರೋ ಅದಕ್ಕೆ ವಿರುದ್ದವಾಗಿ ಇಂದಿನ ಕಾಂಗ್ರೆಸ್ ಪಕ್ಷವು ನಡೆಯುತ್ತಿದೆ," ಎಂದಿದ್ದಾರೆ. ಇಂದಿರಾ ಗಾಂಧಿ, ರಾಜೀವ್ ಗಾಂಧೀ, ಸೋನಿಯಾ ಗಾಂಧಿ, ರಾಹುಲ್ ಗಾಂಧಿಯನ್ನು ಉಲ್ಲೇಖಿಸಿ ಈ ಗೋವಾ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ ರಾಜೀನಾಮೆ ಪತ್ರದಲ್ಲಿ ಈ ಹೇಳಿಕೆ ನೀಡಿದ್ದಾರೆ.
"ಗೋವಾ ಕಾಂಗ್ರೆಸ್ ಪಕ್ಷವು ಸಂಪೂರ್ಣವಾಗಿ ಪಕ್ಷದ ನಿಲುವಿಗೆ ಒಂದು ಕ್ರೂರ ವಿಡಂಬನೆಯಾಗಿದೆ. ಒಂದು ಕೆಲವೇ ಜನರ ಗುಂಪು ಇತರರ ವಿಚಾರವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಕಾಂಗ್ರೆಸ್ ಪಕ್ಷವನ್ನು ನಡೆಸುತ್ತಿದೆ. ಈ ಗುಂಪು ತಮ್ಮ ವೈಯಕ್ತಿಕ ಲಾಭವನ್ನು ಹೆಚ್ಚಾಗಿ ನೋಡಿಕೊಳ್ಳುತ್ತಾರೆ. ಒಂದು ಸಮರ್ಥವಾದ ವಿರೋಧ ಪಕ್ಷ ಆಗುವಲ್ಲಿ ನಾವು ಸಂಪೂರ್ಣವಾಗಿ ವಿಫಲರಾಗಿದ್ದೇವೆ," ಎಂದು ಕೂಡಾ ಅಭಿಪ್ರಾಯಿಸಿದ್ದಾರೆ. ಹಾಗೆಯೇ ಬಹುಮುಖ್ಯವಾಗಿ ಗೋವಾದಲ್ಲಿ ಕಾಂಗ್ರೆಸ್ ಅಧಃಪತನದ ಬಗ್ಗೆ ಕಾಂಗ್ರೆಸ್ ನಾಯಕ ಲುಯಿಜಿನೊ ಫಲೆರೊ ಉಲ್ಲೇಖ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಕಾಂಗ್ರೆಸ್ನ 15 ಶಾಸಕರ ಪೈಕಿ ಹತ್ತು ಮಂದಿ ಕಾಂಗ್ರೆಸ್ ಅನ್ನು ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಹಾಡಿ ಹೊಗಳಿದ್ದ ಲುಯಿಜಿನೊ ಫಲೆರೊ, ದೀದಿಯನ್ನು "ಬೀದಿ ಹೋರಾಟಗಾರ್ತಿ" ಎಂದು ಹೇಳಿದ್ದರು. "ಪ್ರಧಾನಿ ನರೇಂದ್ರ ಮೋದಿಗೆ ಮಮತಾ ಬ್ಯಾನರ್ಜಿ ಕಠಿಣ ಸ್ಫರ್ಧೆಯನ್ನು ನೀಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಮಮತಾರ ಕಾರ್ಯತಂತ್ರವೇ ಜಯಗಳಿಸಿದೆ," ಎಂದು ಶ್ಲಾಘಿಸಿದ್ದರು.
"ನಾನು ಕೆಲವು ಜನರು ಭೇಟಿಯಾದೆ. ಅವರು ನಾನು ಸುಮಾರು 40 ವರ್ಷಗಳಿಂದ ಕಾಂಗ್ರೆಸ್ನಲ್ಲೇ ಇರುವ ಕಾಂಗ್ರೆಸಿಗ ಎಂದು ಹೇಳಿದ್ದಾರೆ. ಕಾಂಗ್ರೆಸ್ ಕುಟುಂಬದಲ್ಲಿ ನಾನು ಕಾಂಗ್ರೆಸಿಗನಾಗಿಯೇ ಇರುತ್ತೇನೆ. ಎಲ್ಲಾ ನಾಲ್ಕು ಕಾಂಗ್ರೆಸ್ಗಳಲ್ಲಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಉತ್ತಮ ಸ್ಪರ್ಧೆ ನೀಡಿದ್ದು ಮಮತಾ ಬ್ಯಾನರ್ಜಿ ಹಾಗೂ ಪ್ರಬಲವಾದ ಅವರ ರಾಜಕೀಯ ಬಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಪಶ್ಚಿಮ ಬಂಗಾಳದಲ್ಲಿ ಸುಮಾರು 200 ಸಭೆಗಳನ್ನು ನಡೆಸಿದ್ದಾರೆ. ಹಾಗೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದಲ್ಲಿ ಸುಮಾರು 250 ಸಭೆಗಳನ್ನು ನಡೆಸಿದ್ದಾರೆ. ಬಳಿಕ ಅಲ್ಲಿ ಇಡಿ, ಸಿಬಿಐ ಕೂಡಾ ಬಳಸಿಕೊಂಡಿದ್ದಾರೆ. ಆದರೆ ಪಶ್ಚಿಮ ಬಂಗಾಳದಲ್ಲಿ ಗೆಲುವು ಸಾಧಿಸಿದ್ದು ಮಮತಾರ ಸೂತ್ರ," ಎಂದು ಮಾಜಿ ಮುಖ್ಯಮಂತ್ರಿ ಲುಯಿಜಿನೊ ಫಲೆರೊ ಹೇಳಿದ್ದರು.
(ಒನ್ಇಂಡಿಯಾ ಸುದ್ದಿ)