'10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ'
ಪಣಜಿ, ಜೂನ್ 12: ಮನೋಹರ್ ಪರಿಕ್ಕರ್ ಅವರ ನಿಧನದ ನಂತರ ಗೋವಾ ರಾಜಕೀಯದಲ್ಲಿ ದಿನೇ ದಿನೇ ಅಚ್ಚರಿಯ ಬೆಳವಣಿಗೆಗಳು ಸಂಭವಿಸಿ, ಬಿಜೆಪಿ ಅಸ್ತಿತ್ವವೇ ಅಲ್ಲಾಡುತ್ತಿದೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಪ್ರಮೋದ್ ಸವಾಂತ್ ಅವರು ಮುಖ್ಯಮಂತ್ರಿಯಾಗಿ ನಿಧಾನಗತಿಯಲ್ಲಿ ಎಲ್ಲರ ವಿಶ್ವಾಸ ಗಳಿಸುತ್ತಿದ್ದಾರೆ.
ಗೋವಾದಲ್ಲಿ ಬಿಜೆಪಿ ಸ್ವತಂತ್ರವಾಗಿ ಅಧಿಕಾರ ನಡೆಸುವಷ್ಟು ಬಹುಮತ ಹೊಂದಿಲ್ಲದ ಕಾರಣ ಜಿ ಎಫ್ ಯು ಮತ್ತು ಎಂಜಿಪಿ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಜಿಎಫ್ ಪಿಯ ವಿಜಯ್ ಸರ್ದೇಸಾಯಿ ಮತ್ತು ಎಮ್ ಜಿಪಿಯ ಸುದಿನ್ ಧಾವಾಲಿಕರ್ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ಆಯುರ್ವೇದ ವೈದ್ಯ ಪ್ರಮೋದ್ ಈಗ ಗೋವಾ ಮುಖ್ಯಮಂತ್ರಿ
ಈ ನಡುವೆ ಸರ್ಕಾರವನ್ನು ಇನ್ನಷ್ಟು ಬಲಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆದಿದೆ. 10 ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರಲು ಸಿದ್ಧರಾಗಿದ್ದಾರೆ ಎಂದು ಗೋವಾ ಬಿಜೆಪಿ ಅಧ್ಯಕ್ಷ ವಿನಯ್ ತೆಂಡೂಲ್ಕರ್ ಅವರು ಬುಧವಾರ(ಜೂನ್ 12)ದಂದು ಹೇಳಿದ್ದಾರೆ.
ಆದರೆ, ನಮಗೆ ತಕ್ಷಣಕ್ಕೆ ಅವರನ್ನು ಸ್ವಾಗತಿಸುವ ಉಮೇದಿಲ್ಲ, ನಮಗೆ ಬೇಕಾದ ಸಂಖ್ಯಾಬಲವಿದೆ. ನಮ್ಮ ಮಿತ್ರ ಪಕ್ಷಗಳ ಜೊತೆ ಹೊಂದಾಣಿಕೆ ಮುಂದುವರೆಸಬೇಕಿದೆ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಲು ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಛೊಡಂಕರ್ ಅವರು ನಿರಾಕರಿಸಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಕೋಟಿಗಟ್ಟಲೇ ಹಣ ನೀಡಿ ಬಿಜೆಪಿಗೆ ಸೇರಿಸಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಗಿರೀಶ್ ಅವರು ನೀಡಿದ್ದ ಹೇಳಿಕೆಗೆ ಪ್ರತಿಯಾಗಿ ವಿನಯ್ ಅವರು ಕಾಂಗ್ರೆಸ್ಸಿಗರು ಬಿಜೆಪಿ ಬರಲಿದ್ದಾರೆ ಎಂದು ತಿಳಿಸಿದ್ದರು.
ಮನೋಹರ್ ನಿಧನದ ನಂತರವೂ ಗೋವಾ ಬಿಜೆಪಿ ಸರ್ಕಾರ ಸ್ಥಿರ
ಕಾಂಗ್ರೆಸ್ ನಾಯಕರಾದ ಸುಭಾಷ್ ಶಿರೋಡ್ಕರ್ ಹಾಗೂ ದಯಾನಂದ್ ಸೊಪ್ಟೆ ಅವರು ಕಳೆದ ಅಕ್ಟೋಬರ್ ನಲ್ಲಿ ಬಿಜೆಪಿ ಸೇರಿದ್ದರು. ಅವರಿಗೆ ಒಂದು ನಯಾಪೈಸೆ ನೀಡಿಲ್ಲ ಎಂದು ವಿನಯ್ ಹೇಳಿದ್ದಾರೆ.
ಗೋವಾ ವಿಧಾನಸಭೆ ಶಾಸಕರ ಬಲಾಬಲ ಒಟ್ಟು 40, ಹಾಲಿ ಬಲಾಬಲ 37: ಮ್ಯಾಜಿಕ್ ನಂಬರ್ : 19 ಬಿಜೆಪಿ : 12 ಗೋವಾ ಫಾರ್ವಡ್: 3 ಎಂಜಿಪಿ: 3 ಎನ್ ಸಿಪಿ : 1 ಪಕ್ಷೇತರರು : 2 ಬಿಜೆಪಿ ಪ್ಲಸ್ : 23 ಕಾಂಗ್ರೆಸ್ : 14
ಗೋವಾ ಫಾರ್ವರ್ಡ್ ಪಕ್ಷ ಹಾಗೂ ಎಂಜಿಪಿಯ ತಲಾ ಮೂವರು ಹಾಗೂ 3 ಪಕ್ಷೇತರರು ಬೆಂಬಲ ಸೂಚಿಸಿದ್ದಾರೆ.