ಈ App ನಿಮ್ಹತ್ರ ಇಲ್ಲಾಂದ್ರೆ ಪೊಲೀಸರ ಕೆಂಗಣ್ಣಿಗೆ ಗುರಿ
ನವದೆಹಲಿ, ಮೇ 5: ಕೊರೊನಾವೈರಸ್ ಸೋಂಕಿತರ ಮೇಲೆ ನಿಗಾ ಇಡಲು ಕೇಂದ್ರ ಆರೋಗ್ಯ ಇಲಾಖೆ ಹೊರ ತಂದಿರುವ ಆರೋಗ್ಯ ಸೇತು App ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಇಲ್ಲಾಂದ್ರೆ ತೊಂದರೆಯಾಗುತ್ತದೆಯೇ? ಹೌದು ಎನ್ನುತ್ತಿದ್ದಾರೆ ನೋಯ್ಡಾ ಪೊಲೀಸರು.
ರಸ್ತೆಗಿಳಿಯುತ್ತಿರುವ ಸಾರ್ವಜನಿಕರನ್ನು ವಿಚಾರಿಸುವ ವೇಳೆ ಸ್ಮಾರ್ಟ್ ಫೋನಿನಲ್ಲಿ ಆರೋಗ್ಯ ಸೇತು ಅಪ್ಲಿಕೇಷನ್ ಇದೆಯೇ? ಎಂದು ಪ್ರಶ್ನಿಸುತ್ತಿದ್ದಾರೆ. ಒಂದು ವೇಳೆ ಅಪ್ಲಿಕೇಷನ್ ಇಲ್ಲದಿದ್ದರೆ ಲಾಕ್ಡೌನ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದಾರೆ.
ಆರೋಗ್ಯ ಸೇತು App ಡೌನ್ಲೋಡ್ ಮಾಡಿಕೊಳ್ಳಿ: ಮೋದಿ ಕೊಟ್ಟ ಟಾಸ್ಕ್
ಒಂದು ವೇಳೆ ಹೊರಗಡೆ ತಿರುಗಾಡುವಾಗ ಮೊಬೈಲ್ ಫೋನ್ ಮರೆತು ಬಂದಿದ್ದರೆ, ಸಾಧಾರಣ ಫೋನ್ ಹೊಂದಿದ್ದರೆ, ಸ್ಮಾರ್ಟ್ ಫೋನ್ ಆ ಅಪ್ಲಿಕೇಷನ್ ಸಪೋರ್ಟ್ ಮಾಡದಿದ್ದರೆ ಏನು ಮಾಡುವುದು ಎಂದು ಈ ಸುದ್ದಿ ತಿಳಿದ ನಾಗರಿಕರು ಪ್ರಶ್ನಿಸಿದ್ದಾರೆ.
ಇದಕ್ಕೆ ಉತ್ತರಿಸಿರುವ ನೋಯ್ಡಾ ಪೊಲೀಸರು. ಆರೋಗ್ಯ ಸೇತು ಅಪ್ಲಿಕೇಷನ್ ಬಳಸುವುದು ಪ್ರತಿಯೊಬ್ಬರ ಸುರಕ್ಷತಾ ದೃಷ್ಟಿಯಿಂದ ಒಳ್ಳೆಯದು. ಪ್ರಧಾನಿ ಮೋದಿ ಅವರು ಇತ್ತೀಚಿನ ತಮ್ಮ ಭಾಷಣದಲ್ಲೂ ಈ ಬಗ್ಗೆ ಒತ್ತು ನೀಡಿ ಹೇಳಿದ್ದಾರೆ. ಸ್ಮಾರ್ಟ್ ಫೋನ್ ಹೊಂದಿರುವ ವ್ಯಕ್ತಿ ಆರೋಗ್ಯ ಆಪ್ ಬಳಸದೆ ರಸ್ತೆಗಿಳಿದರೆ ಅದು ಲಾಕ್ಡೌನ್ ನಿಯಮ ಮುರಿದ್ದಂತಾಗುತ್ತದೆ, ಪೊಲೀಸರು ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿ ಆಶುತೋಷ್ ದ್ವಿವೇದಿ ಹೇಳಿದ್ದಾರೆ.
ಆರೋಗ್ಯ ಸೇತು ಅಪ್ಲಿಕೇಷನ್ ಬಳಕೆ ಕಡ್ಡಾಯಗೊಳಿಸುವಂತೆ ಸರ್ಕಾರಿ ಹಾಗೂ ಖಾಸಗಿ ಕಂಪನಿಗಳಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಆದೇಶ ನೀಡಿದೆ. ಒಂದು ವೇಳೆ ಸ್ಮಾರ್ಟ್ ಫೋನ್ ಇದ್ದು, ಆರೋಗ್ಯ ಸೇತು ಆಪ್ ಹೊಂದಿರದಿದ್ದರೆ ಅಥವಾ ಬಳಕೆ ಮಾಡದಿದ್ದರೆ, ಅಂಥ ವ್ಯಕ್ತಿಯ ವಿರುದ್ಧ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಬಹುದು, ಅಪರಾಧ ಸಾಬೀತಾದರೆ, 6 ತಿಂಗಳ ತನಕ ಜೈಲುವಾಸ ಅನುಭವಿಸಬೇಕಾಗುತ್ತದೆ ಎಂದು ಪೊಲೀಸ್ ಅಧಿಕಾರಿ ದ್ವಿವೇದಿ ಹೇಳಿದರು.