ಟೆಕ್ಕಿಯ ಜೀವಕ್ಕೇ ಕುತ್ತು ತಂದ ಟ್ರಾಫಿಕ್ ಪೊಲೀಸರೊಂದಿಗಿನ ವಾಗ್ವಾದ
ನೋಯ್ಡಾ, ಸೆಪ್ಟೆಂಬರ್ 10: ಸಂಚಾರ ನಿಯಮ ಮೀರಿದರೆ ಅತಿಯಾದ ದಂಡ ವಿಧಿಸುವ ನಿರ್ಧಾರ ಒಂದೊಂದೇ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕೆಲವರು ಪೊಲೀಸರೊಂದಿಗೆ ವಾಗ್ವಾದ ನಡೆಸುವ ಅವರ ಮೇಲೆ ಹಲ್ಲೆ ನಡೆಸುವ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುತ್ತದೆ. ಈಗ ಇಂತಹದ್ದೊಂದು ವಾಗ್ವಾದ ಒಂದು ಜೀವವನ್ನೇ ಕಸಿದುಕೊಂಡಿದೆ.
ನೋಯ್ಡಾದಲ್ಲಿ 35 ವರ್ಷದ ವ್ಯಕ್ತಿಯೊಬ್ಬರು ನಿಯಮ ಉಲ್ಲಂಘನೆ ವಿಚಾರದಲ್ಲಿ ಸಂಚಾರ ಪೊಲೀಸರೊಂದಿಗೆ ಜಗಳವಾಡಿದ ಪರಿಣಾಮ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಸಂಬಂಧ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಡಿಮೆ ಮಾಡಿ: ಸಿದ್ದರಾಮಯ್ಯ
ದೆಹಲಿಯ ಘಾಜಿಯಾಬಾದ್ ಸಮೀಪ ಭಾನುವಾರ ಸಂಜೆ ಈ ಘಟನೆ ನಡೆದಿದೆ. ಸಾಪ್ಟ್ವೇರ್ ಕಂಪೆನಿಯೊಂದರ ಉದ್ಯೋಗಿಯಾಗಿರುವ ವ್ಯಕ್ತಿಯೊಬ್ಬರು ತಮ್ಮ ವೃದ್ಧ ಪೋಷಕರೊಂದಿಗೆ ಕಾರ್ನಲ್ಲಿ ತೆರಳುತ್ತಿದ್ದರು. ಮದುಮೇಹದಿಂದ ಬಳಲುತ್ತಿರುವ ಟೆಕಿ ಅವರ ಕಾರನ್ನು ಪೊಲೀಸರು ಘಾಜಿಯಾಬಾದ್ ಸಮೀಪದ ಸಿಐಎಸ್ಎಫ್ ಬಳಿ ಅಡ್ಡಹಾಕಿ ನಿಲ್ಲಿಸಿದ್ದರು.
'ಕಠಿಣ ಮೋಟಾರ್ ವಾಹನ ಕಾಯ್ದೆ' ಅಡಿಯಲ್ಲಿ ತಪಾಸಣೆ ಮಾಡುವ ನೆಪದಲ್ಲಿ ಸಂಚಾರ ಪೊಲೀಸರು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು ಎಂದು ಮೃತನ 65 ವರ್ಷದ ತಂದೆ ಆರೋಪಿಸಿದ್ದಾರೆ.
'ಯಾವುದೇ ಕ್ರಮ ತೆಗೆದುಕೊಳ್ಳುವುದಕ್ಕೂ ರೀತಿ ನೀತಿ ಇರುತ್ತದೆ. ಸಂಚಾರ ನಿಯಮಾವಳಿಗಳು ಬದಲಾಗಿರುವುದು ತೊಂದರೆಯಿಲ್ಲ. ಪೊಲೀಸರು ಜನರೊಂದಿಗೆ ವಿನಯದಿಂದ ವರ್ತಿಸಬೇಕು. ತಪಾಸಣೆ ನಡೆಸಬೇಕೆಂದರೆ ಕಾರ್ನಿಂದ ಇಳಿಯಿರಿ ಎಂದು ಹೇಳಬೇಕು. ನಮ್ಮದು ವೇಗದ ಚಾಲನೆಯಾಗಲೀ ಅಥವಾ ಇನ್ನೊಂದಾಗಲೀ ಇರಲಿಲ್ಲ. ಕಾರ್ನ ಒಳಗೆ ಇಬ್ಬರು ವೃದ್ಧರು ಕುಳಿತಿದ್ದೇವೆ. ಆದರೂ ಅವರು ಲಾಠಿ ತೆಗೆದುಕೊಂಡು ಕಾರ್ಗೆ ಬಾರಿಸಿದ್ದಾರೆ. ಇದು ತಪಾಸಣೆ ಮಾಡುವ ರೀತಿಯೇ? ನನಗೆ ಗೊತ್ತಿರುವಂತೆ ಯಾವ ನಿಯಮವೂ ಇದಕ್ಕೆ ಅವಕಾಶ ನೀಡುವುದಿಲ್ಲ' ಎಂದು ಅವರು ನೋವಿನಿಂದ ಹೇಳಿದ್ದಾರೆ.
ದಂಡ ಮೊತ್ತ ಹೆಚ್ಚಳ; ಪೆಟ್ರೋಲ್ ಸ್ಥಗಿತಗೊಳಿಸುವ ಎಚ್ಚರಿಕೆ
'ಏರುಧ್ವನಿಯಲ್ಲಿ ಮಾತನಾಡಿದ ಪೊಲೀಸರಿಂದಾಗಿ ನನ್ನ ಮಗನನ್ನು ನಾನು ಕಳೆದುಕೊಂಡಿದ್ದೇನೆ. ಆತನಿಗೆ ಐದು ವರ್ಷದ ಮಗಳಿದ್ದಾರೆ. ಅವಳೀಯ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡಿದ್ದಾಳೆ. ನನಗೆ 65 ವರ್ಷವಾಗಿದೆ. ಆಕೆಯನ್ನು ಸಲಹುವವರು ಯಾರು? ಭವಿಷ್ಯದಲ್ಲಿ ಆಕೆಯ ಗತಿಯೇನು?' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತಮಗೆ ನ್ಯಾಯ ಒದಗಿಸಲಿದ್ದಾರೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
ಹೊಸ ಟ್ರಾಫಿಕ್ ರೂಲ್ಸ್ ಜಾರಿ: ಯಾವ ತಪ್ಪಿಗೆ ಎಷ್ಟು ದಂಡ?
ಈ ಘಟನೆ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪೊಲೀಸರು ಎಚ್ಚೆತ್ತುಕೊಂಡಿದ್ದಾರೆ. ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
'ಮೃತವ್ಯಕ್ತಿಯು ಮದುಮೇಹದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ. ಸಂಜೆ ಆರು ಗಂಟೆ ಸುಮಾರಿಗೆ ಘಾಜಿಯಾಬಾದ್ ಸಮೀಪ ಈ ಘಟನೆ ನಡೆದಿದೆ. ಈ ಬಗ್ಗೆ ಘಾಜಿಯಾಬಾದ್ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ' ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.