ಟಿವಿ ಮಾಧ್ಯಮಗಳಿಂದ ಕನ್ನಡದ ಕಗ್ಗೊಲೆ : ಬಿಳಿಮಲೆ ವಿಷಾದ
ನವದೆಹಲಿ, ನವೆಂಬರ್ 20 : ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ, ಸಾಮಾಜಿಕವಾಗಿ ಕನ್ನಡತನಕ್ಕೆ ಕನ್ನಡವೇ ಸರಿಸಾಟಿ. ಶಂಕರ, ರಾಮಾನುಜ, ವಿದ್ಯಾರಣ್ಯ, ಬಸವೇಶ್ವರ, ಭಕ್ತಿಪಂಥದ ಕನಕ- ಪುರಂದರಂತಹ ದಾಸ ಶ್ರೇಷ್ಠರು, ಪಂಪ ರನ್ನ ಜನ್ನ ಕುಮಾರವ್ಯಾಸರಂತಹ ಕವಿಪುಂಗವರು ಕನ್ನಡವನ್ನು ಶ್ರೀಮಂತಗೊಳಿಸಿದ್ದಾರೆ ಎಂದವರು ಸಾಹಿತಿ ಡಾ. ಎಲ್ ಹನುಮಂತಯ್ಯನವರು.
ಫ್ಲೋರಿಡಾದಲ್ಲಿ ದೀಪಾವಳಿ-ಕನ್ನಡ ರಾಜ್ಯೋತ್ಸವದ ರೋಮಾಂಚನ
ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರ, ನೋಯಿಡಾ ಕನ್ನಡ ಕೂಟ ಹಾಗೂ ಜೆ.ಎಸ್.ಎಸ್ ತಾಂತ್ರಿಕ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ರಾಜ್ಯಸಭಾ ಸದಸ್ಯರಾದ ಡಾ.ಎಲ್.ಹನುಮಂತಯ್ಯ ಅವರು ಮಾತನಾಡುತ್ತಿದ್ದರು.
ಆಧುನಿಕ ಕಾಲದ ಅನೇಕಾನೇಕ ಸಾಹಿತಿಗಳು ಕನ್ನಡ ಭಾಷೆ ಮತ್ತು ನಾಡಿನ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ. ಅದನ್ನು ಉಳಿಸಿಕೊಂಡು ಮುನ್ನಡೆಸುವ ಜವಾಬ್ದಾರಿ ನಮ್ಮೆಲರದ್ದು. ರಾಜ್ಯದ ರಾಯಭಾರಿಗಳಾದ ಹೊರನಾಡ ಕನ್ನಡಿಗರಾದ ನೀವೆಲ್ಲಾ ಇದನ್ನು ಚೊಕ್ಕಟವಾಗಿ ನಿರ್ವಹಿಸಿ ಎಂದು ಅವರು ದೆಹಲಿ ಕನ್ನಡಿಗರನ್ನು ಆಗ್ರಹಿಸಿದರು.
ನಿಜವಾದ ಕನ್ನಡ ಪ್ರೇಮಿ ಯಾರು, ಎನ್ನಾರೈ ಕನ್ನಡಿಗನ ಅನುಭವಾಮೃತ
ಅತಿಥಿಯಾಗಿ ಆಗಮಿಸಿದ್ದ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದ ಮುಖ್ಯಸ್ಥರಾದ ಡಾ. ಪುರುಷೋತ್ತಮ್ ಬಿಳಿಮಲೆ ಅವರು, ಕನ್ನಡದಲ್ಲಿ ಸೊಗಸಾದ ಶಬ್ಧ ಪದಪುಂಜಗಳಿವೆ. ಆದರೆ ಇತ್ತೀಚಿಗೆ ಕನ್ನಡದ ಟಿವಿ ಮಾಧ್ಯಮಗಳು ಇಂಗ್ಲಿಷ್ ಶಬ್ದಗಳನ್ನು ಹೆಚ್ಚಾಗಿ ಬಳಸುವ ಮೂಲಕ ಕನ್ನಡವನ್ನು ಕೊಲ್ಲುವ ಕೆಲಸ ಮಾಡುತ್ತಿವೆ ಎಂದು ವಿಷಾದಿಸಿದರು. ಮನೆಯಲ್ಲಿ ಮಕ್ಕಳೊಂದಿಗೆ ಕನ್ನಡದಲ್ಲಿ ವ್ಯವಹರಿಸಲು ಹೊರನಾಡ ಕನ್ನಡಿಗರಿಗೆ ಕಿವಿಮಾತು ಹೇಳಿದರು.
ಅರಬರ ಸುಂದರ ಮರುಭೂಮಿಯಲ್ಲಿ ಕನ್ನಡದ ತಂಪಾದ ಗಾಳಿ
ಮತ್ತೊರ್ವ ಅತಿಥಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ದಿ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರ ಅವರು, ಕನ್ನಡ ಅತ್ಯಂತ ಪುರಾತನ ಭಾಷೆ. ನಮ್ಮ ಭಾಷೆಗೆ ತನ್ನದೆಯಾದ ಸ್ವಂತಿಕೆಯಿದೆ. ಕನ್ನಡ ಸಮೃದ್ಧ ಭಾಷೆ, ಭಾಷೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಕಂಕಣಬದ್ಧರಾಗೋಣ ಎಂದು ಕರೆ ನೀಡಿದರು. ಈ ದಿಸೆಯಲ್ಲಿ ಇಂತಹ ಕಾರ್ಯಕ್ರಮಗಳನ್ಮು ಹಮ್ಮಿಕೊಂಡು ರಾಜ್ಯಸರ್ಕಾರ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕರ್ನಾಟಕ ವಾರ್ತಾ ಕೇಂದ್ರದ ವಾರ್ತಾಧಿಕಾರಿ ಡಾ. ಗಿರೀಶ ಎಲ್.ಪಿ ಅವರು, ವರ್ಷದಲ್ಲಿ ಒಂದುದಿನ ಕಾರ್ಯಕ್ರಮ ನಡೆಸಿ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ತಮ್ಮನ್ನು ರಂಜಿಸುವುದು ಸರ್ಕಾರದ ಉದ್ದೇಶವಲ್ಲ, ರಾಜ್ಯೋತ್ಸವದ ಹೆಸರಿನಲ್ಲಿ ರಾಜ್ಯದ ಸಂಸ್ಕೃತಿ ಪರಂಪರೆ, ಇತಿಹಾಸ, ಕಲೆ, ಜಾನಪದ ವೈವಿಧ್ಯತೆಯನ್ನು ಹೊರನಾಡಿನ ಕನ್ನಡಿಗರಿಗೆ ಹಾಗೂ ಯುವಪೀಳಿಗೆಗೆ ತಿಳಿಸಿಕೊಟ್ಟು, ಹೊರರಾಜ್ಯಗಳಲ್ಲಿ ವರ್ಷಪೂರ್ತಿ ಕರ್ನಾಟಕದ ಸಾಂಸ್ಕೃತಿಕ ತೇರನ್ನು ಎಳೆಯವ ಕೆಲಸಕ್ಕೆ ಬುನಾದಿ ಹಾಕಿಕೊಡುವುದು ರಾಜ್ಯೋತ್ಸವದ ಉದ್ಧೇಶ, ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆನೀಡಿದರು. ಜೆಎಸ್ಎಸ್ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಜಿ.ಬಿ.ಪಾಟೀಲ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಕನ್ನಡಾಭಿಮಾನದ ಪುನರುಜ್ಜೀವನದ ರೋಚಕ ಕಥೆ
ರಿಜಿಸ್ಟರ್ ಸಿದ್ಧಯ್ಯ ಶಿರೂರ ಸ್ವಾಗತಿಸಿದರು. ಉಪನ್ಯಾಸಕಿ ಗೀತಾ ನಿರೂಪಿಸಿದರು. ಜೆಎಸ್ಎಸ್ ತಾಂತ್ರಿಕ ಮಹಾವಿದ್ಯಾಲಯದ ಸಂಯೋಜಕರು ಪಿ.ರಾಜಣ್ಣ, ಕನ್ನಡಕೂಟದ ಕಾರ್ಯದರ್ಶಿ ಮನೋಜ ಕುಮಾರ, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ, ಕಾರ್ಯದರ್ಶಿ ಸಿ.ಎಂ ನಾಗರಾಜ್, ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಖಾತೆ ಸಚಿವರ ವಿಶೇಷಾಧಿಕಾರಿ ಎಚ್. ಶ್ರೀನಿವಾಸ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಪ್ರಸಿದ್ಧ ಹಿನ್ನೆಲೆ ಗಾಯಕಿ ಡಾ. ಶಮಿತಾ ಮಲ್ನಾಡ್ ಅವರ ನೇತೃತ್ವದ "ಶಮಾ" ತಂಡ ಹಾಗೂ ದಾವಣಗೆರೆ ಜಿಲ್ಲೆ ಯಕ್ಕನಹಳ್ಳಿ ಗ್ರಾಮದ ಜಾನಪದ ಕಲಾತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು.