285 ಕೋಟಿ ವಂಚನೆ ಪ್ರಕರಣದಲ್ಲಿ ತಗಲ್ಹಾಕಿಕೊಂಡವನು ಎಂಥ ಖತರ್ನಾಕ್!
ನೋಯ್ಡಾ, ಡಿಸೆಂಬರ್ 19: ವಂಚನೆ ಪ್ರಕರಣದಲ್ಲಿ ಗಂಡ-ಹೆಂಡತಿ ಹಾಗೂ ಮಗನನ್ನು ನೋಯ್ಡಾ ಸೆಕ್ಟರ್ 20ರ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. 285 ಕೋಟಿ ರುಪಾಯಿ ಮೌಲ್ಯದ ಆಸ್ತಿ ದಾಖಲೆಗಳನ್ನು ಫೋರ್ಜರಿ ಮಾಡಿದ್ದಕ್ಕೆ ಹಾಗೂ ಈಗಾಗಲೇ ಸಾವನ್ನಪ್ಪಿದ ತಾಯಿ ಈಗಲೂ ಬದುಕಿದ್ದಾರೆ ಎಂದು ಅಫಿಡವಿಟ್ ಮಾಡಿದ ಆರೋಪದಲ್ಲಿ ಬಂಧಿಸಲಾಗಿದೆ.
ಕೋರ್ಟ್ ಆದೇಶದ ಅನ್ವಯ ವಿಜಯ್ ಗುಪ್ತಾ ದೂರಿನ ಪ್ರಕಾರ, ಅವರ ಸೋದರ ಸುನೀಲ್ ಗುಪ್ತಾ, ಆತನ ಪತ್ನಿ, ಇಬ್ಬರು ಮಕ್ಕಳು ಮತ್ತು ಇತರ ಸಹಚರರ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ನೋಯ್ಡಾ ಪತ್ರಕರ್ತೆ ಸಾವು ಪ್ರಕರಣಕ್ಕೆ ಹೊಸ ತಿರುವು
ವಿಜಯ್ ನೀಡಿದ ದೂರಿನಲ್ಲಿ ತಿಳಿಸಿರುವ ಪ್ರಕಾರ, ಅವರ ತಾಯಿ 2011ರ ಮಾರ್ಚ್ ನಲ್ಲೇ ಮುಂಬೈನಲ್ಲಿ ತೀರಿಕೊಂಡಿದ್ದಾರೆ. ಆದರೆ ಸುನೀಲ್ ಉಪನೋಂದಣಾಧಿಕಾರಿ ಕಚೇರಿಯಲ್ಲಿ ತನ್ನ ತಾಯಿ ಜೀವಂತ ಇದ್ದಾರೆ ಎಂದು ಅಫಿಡವಿಟ್ ಸಲ್ಲಿಸಿ, ಆಕೆಯ ಆಸ್ತಿ, ಆಭರಣಗಳು, ಮ್ಯೂಚುವಲ್ ಫಂಡ್ ಇತ್ಯಾದಿಗಳನ್ನು ತನ್ನ ಹಾಗೂ ಕುಟುಂಬದ ಹೆಸರಿಗೆ ವರ್ಗಾವಣೆ ಮಾಡಿಕೊಂಡಿದ್ದಾನೆ.
ಈ ಸೋದರರಿಗೆ ಸಮಾನವಾಗಿ ಹಂಚಿಕೆ ಆಗಬೇಕಾದ ಎರಡು ಕಚೇರಿಗಳಿವೆ. ಒಂದು ಮುಂಬೈನಲ್ಲಿದ್ದು ಅದನ್ನು ಸುನೀಲ್ ನಡೆಸುತ್ತಿದ್ದರೆ, ಮತ್ತೊಂದು ಸೆಕ್ಟರ್ 15Aನಲ್ಲಿ ವಿಜಯ್ ನಿರ್ವಹಣೆ ಮಾಡುತ್ತಿದ್ದಾರೆ. ವಿಜಯ್ ದೂರಿನಲ್ಲಿ ತಿಳಿಸಿದ ಪ್ರಕಾರ, ಸೋದರರ ಕಂಪನಿಯ ಖಾತೆಯಿಂದ ಕೂಡ ಸುಳ್ಳು ಬಿಲ್ ಗಳನ್ನು ನೀಡಿ, ತನ್ನ ಸ್ನೇಹಿತರಿಗೆ ಹಣ ವರ್ಗಾವಣೆ ಮಾಡಿರುವ ಸುನೀಲ್ ಭಾರೀ ನಷ್ಟಕ್ಕೆ ಕಾರಣನಾಗಿದ್ದಾನೆ.
16ನೇ ಅಂತಸ್ತಿನ ಬಾಲ್ಕನಿಯಿಂದ ಬೆಕ್ಕು ಎಸೆದು ಜೈಲು ಸೇರಿದ
ಚಾರ್ಟರ್ಡ್ ಅಕೌಂಟೆಂಟ್ ಸಹಾಯ ಪಡೆದು ಲೆಕ್ಕಪತ್ರ, ತೆರಿಗೆ, ಆಡಿಟ್ ವರದಿ ಇತ್ಯಾದಿಗಳನ್ನು ಬದಲಾಯಿಸಿರುವ ಸುನೀಲ್, ಎಲ್ಲರ ದಾರಿ ತಪ್ಪಿಸಿದ್ದಾನೆ ಎಂದು ವಿಜಯ್ ದೂರಿದ್ದಾರೆ. ಏಳು ವರ್ಷಗಳ ಹಿಂದೆ ಪೋಷಕರು ತೀರಿಕೊಂಡಾಗಿಂದ ಈ ವಂಚನೆ ಶುರುವಾಯಿತು. ಅವರೇ ಕಂಪನಿಯ ಮೂಲ ನಿರ್ದೇಶಕರು ಎಂದು ಹೇಳಿದ್ದಾರೆ.
ಪೊಲೀಸರು ಅಂದಾಜಿಸಿರುವಂತೆ ವಂಚನೆ ಮಾಡಿರುವ ಒಟ್ಟು ಮೊತ್ತ 285 ಕೋಟಿ ರುಪಾಯಿ. ಇನ್ನು ರೌಡಿಗಳನ್ನು ಕಳುಹಿಸಿ, ಜೀವ ಬೆದರಿಕೆ ಹಾಕಿಸಿದ ದೂರು ಕೂಡ ಸುನೀಲ್ ವಿರುದ್ಧ ದಾಖಲಾಗಿದೆ. ಸದ್ಯಕ್ಕೆ ಸುನೀಲ್, ಆತನ ಪತ್ನಿ ರಾಧಾ ಹಾಗೂ ಮಗ ಅಭಿಷೇಕ್ ನನ್ನು ಬಂಧಿಸಲಾಗಿದೆ. ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದಾರೆ.