ನೀವು ದೇಶವನ್ನು ನೆಮ್ಮದಿಯಾಗಿರಲು ಬಿಡಲ್ಲ: ಆಯೋಧ್ಯೆ ವಿಚಾರಕ್ಕೆ ತರಾಟೆ
ನವದೆಹಲಿ, ಏಪ್ರಿಲ್ 12: ನೀವು ಯಾವತ್ತಿಗೂ ಈ ದೇಶವನ್ನು ಶಾಂತಿಯಿಂದ ಇರಲು ಬಿಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದ್ದು, ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ- ಬಾಬ್ರಿ ಮಸೀದಿ ಜಾಗ ಬಿಟ್ಟು ವಿವಾದರಹಿತವಾದ ಸ್ಥಳದಲ್ಲಿರುವ ಒಂಬತ್ತು ಪುರಾತನ ದೇವಾಲಯದಲ್ಲಿ ಧಾರ್ಮಿಕ ಚಟುವಟಿಕೆ ನಡೆಸಲು ಅನುಮತಿ ಕೇಳಿದ್ದ ಅರ್ಜಿಯನ್ನು ವಜಾ ಮಾಡಲಾಯಿತು.
"ಅಲ್ಲಿ ಏನಾದರೂ ಒಂದು ಇರುತ್ತದೆ" ಎಂದು ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿ ಸಂಜೀವ್ ಖನ್ನಾರನ್ನು ಒಳಗೊಂಡ ಪೀಠವು ಹೇಳಿದೆ.
ಅಯೋಧ್ಯೆ ವಿವಾದ: ಸಂಧಾನಕಾರರಾಗಿ ಶ್ರೀಗಳು ಬೇಡ ಎಂದ ಓವೈಸಿ, ಕಾರಣವೇನು?
ಜನವರಿ ಹತ್ತನೇ ತಾರೀಕಿನಂದು ಅಲಹಾಬಾದ್ ಹೈ ಕೋರ್ಟ್ ನ ಲಖನೌ ಪೀಠವು ನೀಡಿದ್ದ ಆದೇಶದ ವಿರುದ್ಧ ಸಲ್ಲಿಸಿದ್ದ ಮನವಿಯ ವಿಚಾರಣೆ ಆರಂಭವಾಯಿತು. ಅಲಹಾಬಾದ್ ಹೈ ಕೋರ್ಟ್ ಒಂಬತ್ತು ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವ ಅವಕಾಶವನ್ನು ನಿರಾಕರಿಸಿತ್ತು ಹಾಗೂ ಅರ್ಜಿದಾರರಿಗೆ ಐದು ಲಕ್ಷ ವಿಧಿಸಿತ್ತು.
ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಇದೇ ವಿಚಾರವನ್ನು ಕೆದಕುವುದನ್ನು ನಿಲ್ಲಿಸಿ ಎಂದು ಅರ್ಜಿದಾರರಾದ ಪಂಡಿತ್ ಅಮರ್ ನಾಥ್ ಮಿಶ್ರಾಗೆ ಹೇಳಲಾಗಿದೆ. ಮಿಶ್ರಾ ಅವರು ಸಾಮಾಜಿಕ ಕಾರ್ಯಕರ್ತ. ಪುರಾತನ ದೇವಾಲಯಗಳಲ್ಲಿ ಪೂಜೆ ನಡೆಸುವ ಸಂಬಂಧ ಅಧಿಕಾರಿಗಳು ಕುರುಡರಂತೆ ವರ್ತಿಸುತ್ತಿದ್ದಾರೆ. ಆದರೆ ಆ ದೇವಸ್ಥಾನಗಳು ವಿವಾದ ಇಲ್ಲದ ಸ್ಥಳಗಳಲ್ಲಿವೆ ಎಂದಿದ್ದರು.