"ಲಖೀಂಪುರ್ ಖೇರಿ ಪ್ರಕರಣದಲ್ಲಿ 'ಅಪರಾಧಿ'ಗೆ ಕೇಂದ್ರ ಸರ್ಕಾರದ ರಕ್ಷಣೆ"
ನವದೆಹಲಿ, ಡಿಸೆಂಬರ್ 16: ಉತ್ತರ ಪ್ರದೇಶದ ಲಖೀಂಪುರ ಖೇರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಒಬ್ಬ ಅಪರಾಧಿಯನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ.
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ಆಶಿಶ್ ಮಿಶ್ರಾ ತಂದೆ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸಂಪುಟದಿಂದ ತೆಗೆದು ಹಾಕಬೇಕು. ಆದರೆ ಅವರ ವಿರುದ್ಧ ಯಾವುದೇ ರೀತಿ ಕ್ರಮ ತೆಗೆದುಕೊಳ್ಳದೇ ಅಪರಾಧಿಯನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದೀರಿ ಎಂದು ಪ್ರಿಯಾಂಕಾ ಗಾಂಧಿ ಕಿಡಿ ಕಾರಿದ್ದಾರೆ.
ಲಖಿಂಪುರ ಖೇರಿ ಪ್ರಕರಣ: ಅಜಯ್ ಮಿಶ್ರಾ ಕ್ರಿಮಿನಲ್ ಎಂದ ರಾಹುಲ್
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಮಂದಿ ಅಮಾಯಕರು ಪ್ರಾಣ ಬಿಟ್ಟಿದ್ದು, ಇದು ಪೂರ್ವ ಯೋಜಿತ ಪಿತೂರಿ ಎಂದು ವಿಶೇಷ ತನಿಖಾ ತಂಡವು ಸ್ಥಳೀಯ ನ್ಯಾಯಾಲಯಕ್ಕೆ ತಿಳಿಸಿತು. ಇದರ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ಕೈ ಬಿಡುವಂತೆ ಪ್ರತಿಪಕ್ಷಗಳು ಪಟ್ಟು ಹಿಡಿದು ಕುಳಿತಿವೆ.
ನೈತಿಕ ದಿವಾಳಿತನದ ಸ್ಪಷ್ಟ ಸೂಚನೆ:
"ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರನ್ನು ವಜಾಗೊಳಿಸಲು ಸರ್ಕಾರ ನಿರಾಕರಿಸಿರುವುದು ಅದರ ನೈತಿಕ ದಿವಾಳಿತನದ ಸ್ಪಷ್ಟ ಸೂಚನೆಯಾಗಿದೆ" ಎಂದು ಪ್ರಿಯಾಂಕಾ ಗಾಂಧಿ ಟ್ವಿಟರ್ನಲ್ಲಿ ಹೇಳಿದ್ದಾರೆ.
"ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ, ಧರ್ಮನಿಷ್ಠೆಯ ಕನ್ನಡಕ ಮತ್ತು ಧಾರ್ಮಿಕ ಉಡುಪುಗಳನ್ನು ಧರಿಸುವುದರಿಂದ ನೀವು ಕ್ರಿಮಿನಲ್ ಅಜಯ್ ಮಿಶ್ರಾ ಟೆನಿಯನ್ನು ವಜಾಗೊಳಿಸಬೇಕು ಮತ್ತು ಕಾನೂನಿನ ಪ್ರಕಾರ ಶಿಸ್ತುಕ್ರಮ ತೆಗೆದುಕೊಳ್ಳಬೇಕು," ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಲೋಕಸಭೆಯಲ್ಲಿ ಲಖೀಂಪುರ್ ಖೇರಿ ಪ್ರಕರಣದ ಗದ್ದಲ:
ಇಂದು ಲೋಕಸಭೆಯಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ವಿರುದ್ಧ ಹರಿಹಾಯ್ದ ರಾಹುಲ್ ಗಾಂಧಿ, ಅವರನ್ನು "ಕ್ರಿಮಿನಲ್" ಎಂದು ಕರೆದಿದ್ದಾರೆ ಮತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ. "ಸಚಿವರು ರಾಜೀನಾಮೆ ನೀಡಬೇಕು. ಅವರು ಕ್ರಿಮಿನಲ್" ಎಂದು ರಾಹುಲ್ ಗಾಂಧಿಯವರ ಹೇಳಿಕೆ ಲೋಕಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯಿತು. ಪ್ರಧಾನಿ ಮೋದಿ ಅಜಯ್ ಮಿಶ್ರಾ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು. ಈ ವಿಚಾರವನ್ನು ನಾವು ಸಂಸತ್ತಿನಲ್ಲಿ ಚರ್ಚಿಸಲು ನಾವು ಬಯಸುತ್ತೇವೆ. ಆದರೆ ಪ್ರಧಾನಿ ಅದನ್ನು ನಿರಾಕರಿಸುತ್ತಿದ್ದಾರೆ. ಅವರು ಇದಕ್ಕೆ ಸಮರ್ಥನೆಗಳನ್ನು ನೀಡುತ್ತಿದ್ದಾರೆ," ಎಂದು ರಾಹುಲ್ ಗಾಂಧಿ ತಿಳಿಸಿದರು.
13 ಆರೋಪಿಗಳನ್ನು ಬಂಧಿಸಿರುವ ಎಸ್ಐಟಿ:
ಲಖೀಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎಫ್ಐಆರ್ ಅನ್ನು ದಾಖಲಿಸಿಕೊಳ್ಳಲಾಗಿದೆ. ವಿಶೇಷ ತನಿಖಾ ತಂಡವು ನಾಲ್ಕು ರೈತರು, ಒಬ್ಬ ಪತ್ರಕರ್ತ ಸೇರಿದಂತೆ ಎಂಟು ಮಂದಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಆಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ 13 ಆರೋಪಿಗಳನ್ನು ಬಂಧಿಸಿತ್ತು. ಎರಡನೇ ಎಫ್ಐಆರ್ನಲ್ಲಿ ಇಬ್ಬರು ಬಿಜೆಪಿ ಕಾರ್ಯಕರ್ತರ ಸಾವಿಗೆ ಸಂಬಂಧಿಸಿದಂತೆ ಚಾಲಕ ಹಾಗೂ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ವಿಚಾರಣೆ ನಡೆಸುತ್ತಿದೆ.
Recommended Video