ಲಸಿಕೆ ಪಡೆಯುತ್ತೇನೆ, ವೈದ್ಯರು ದೇವರ ದೂತರು: ಬಾಬಾ ರಾಮ್ದೇವ್ ಯೂಟರ್ನ್
ನವದೆಹಲಿ, ಜೂನ್ 10: ನನಗೆ ಕೊರೊನಾ ಲಸಿಕೆಯ ಅಗತ್ಯವಿಲ್ಲ, ಯೋಗ ಹಾಗೂ ಆಯುರ್ವೇದದ ರಕ್ಷಣೆ ನನಗಿದೆ ಎಂದು ಹೇಳಿಕೆ ನೀಡಿದ್ದ ಬಾಬಾ ರಾಮ್ದೇವ್ ಇದಕ್ಕೆ ವ್ಯತಿರಿಕ್ತ ಹೇಳಿಕೆಯನ್ನು ನೀಡಿದ್ದಾರೆ. ನಾನು ಕೊರೊನಾ ಲಸಿಕೆಯನ್ನು ಪಡೆಯುತ್ತೇನೆ ಎಂದಿರುವ ಅವರು ವೈದ್ಯರನ್ನು "ಭೂಲೋಕಕ್ಕೆ ಬಂದಿರುವ ದೇವರ ದೂತರು" ಎಂದು ಹೇಳಿಕೆಯನ್ನು ನೀಡಿ ಅಚ್ಚರಿ ಮೂಡಿಸಿದ್ದಾರೆ.
ಇದಕ್ಕೂ ಮುನ್ನ ಬಾಬಾ ರಾಮ್ದೇವ್ ಅಲೋಪತಿ ವೈದ್ಯ ಪದ್ದತಿಯ ವಿರುದ್ಧ ಹಾಗೂ ವೈದ್ಯರ ವಿರುದ್ಧ ಹೇಳಿಕೆಯನ್ನು ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಈಗ ಅವರು ತಮ್ಮ ಹೇಳೀಕೆಯಿಂದ ಯೂಟರ್ನ್ ಹೊಡೆದಿದ್ದಾರೆ. ಜೊತೆಗೆ ಎಲ್ಲರಿಗೂ ಉಚಿತ ಲಸಿಕೆ ನೀಡುವ ನಿರ್ಧಾರದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಅವರು ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರ ಐತಿಹಾಸಿಕ ಹೆಜ್ಜೆ ಎಂದು ಬಣ್ಣಿಸಿದ್ದಾರೆ.
ಯೋಗಗುರು ಬಾಬಾ ರಾಮ್ದೇವ್ಗೆ ಸಮನ್ಸ್ ನೀಡಿದ ದೆಹಲಿ ಹೈಕೋರ್ಟ್
"ಲಸಿಕೆಯ ಎರಡೂ ಡೋಸ್ಗಳನ್ನು ಪಡೆಯಿರಿ ಜೊತೆಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಕೂಡ ಪಡೆಯಿರಿ. ಈ ಮೂಲಕ ಕೊರೊನಾದಿಂದ ಒಬ್ಬ ವ್ಯಕ್ತಿ ಕೂಡ ಸಾಯುವುದಿಲ್ಲ. ಇವುಗಳು ನಿಮಗೆ ಆ ಪ್ರಮಾಣದ ರಕ್ಷಣೆಯನ್ನು ನೀಡುತ್ತದೆ" ಎಂದು ಬಾಬಾ ರಾಮ್ದೇವ್ ಹರಿದ್ವಾರದಲ್ಲಿ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ್ದಾರೆ.
ಈ ಸಂದರ್ಭದಲ್ಲಿ ಯಾವಾಗ ನೀವು ಲಸಿಕೆಯನ್ನು ಪಡೆಯುತ್ತೀರಿ ಎಂದು ಕೇಳಿದ ಪ್ರಶ್ನೆಗೆ 'ಆದಷ್ಟು ಶೀಘ್ರವಾಗಿ' ಎಂದು ಉತ್ತರಿದ್ದಾರೆ. ಇದೇ ಸಂದರ್ಭದಲ್ಲಿ ರಾಮದೇವ್ ಉತ್ತಮ ಅಲೋಪತಿ ವೈದ್ಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು, "ಭೂಮಿಯ ಮೇಲಿನ ದೇವರ ದೂತರು" ಎಂದು ಬಣ್ಣಿಸಿದ್ದಾರೆ.
ಭಾರತೀಯ ವೈದ್ಯಕೀಯ ಸಂಘ (ಐಎಂಎ) ಜೊತೆಗೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾತನಾಡಿದ ರಾಮ್ದೇವ್ ತಾನು ಯಾವುದೇ ಸಂಘಟನೆಯ ಜೊತೆಗೆ ದ್ವೇಷವನ್ನು ಹೊಂದಲು ಬಯಸುವುದಿಲ್ಲ ಎಂದಿದ್ದಾರೆ. ಜೊತೆಗೆ ಔಷಧಿಗಳ ಹೆಸರಿನಲ್ಲಿ ಜನರನ್ನು ಶೋಷಣೆ ಮಾಡುವುದಕ್ಕೆ ಮಾತ್ರವೇ ತನ್ನ ವಿರೋಧವಿದೆ ಎಂದಿದ್ದಾರೆ.
"ನಾನು ಯಾವುದೇ ಸಂಸ್ಥೆಗೂ ವಿರುದ್ಧವಾಗಿಲ್ಲ. ಒಳ್ಳೆಯ ವೈದ್ಯರು ನಮ್ಮ ಪಾಲಿಗೆ ನಿಜವಾದ ವರವಿದ್ದಂತೆ. ಅವರು ಭೂಮಿಗೆ ಬಂದಿರುವ ದೇವರ ದೂತರು. ಆದರೆ ಕೆಲವೊಬ್ಬ ವೈದ್ಯರಿಂದ ತಪ್ಪುಗಳಾಗಬಹುದು" ಎಂದಿದ್ದಾರೆ. ಜೊತೆಗೆ ತುರ್ತು ಚಿಕಿತ್ಸೆಗೆ ಮತ್ತು ಶಸ್ತ್ರ ಚಿಕಿತ್ಸೆಗೆ ಅಲೋಪತಿ ಅತ್ಯುತ್ತಮವಾಗಿದೆ. ಆ ವಿಚಾರದಲ್ಲಿ ಎರಡನೇ ಅಭಿಪ್ರಾಯವಿಲ್ಲ ಎಂದು ಬಾಬಾ ರಾಮ್ದೇವ್ ಹೇಳಿಕೆಯನ್ನು ನೀಡಿದ್ದಾರೆ.