ಮೋದಿ ಘೋಷಿಸಿದ್ದ 'ಜನತಾ ಕರ್ಫ್ಯೂ' ಮೆಚ್ಚಿದ ವಿಶ್ವ ಆರೋಗ್ಯ ಸಂಸ್ಥೆ
ನವದೆಹಲಿ, ಮಾರ್ಚ್ 20: ಪ್ರಧಾನಿ ನರೇಂದ್ರ ಮೋದಿಯ 'ಜನತಾ ಕರ್ಫ್ಯೂ' ಯೋಜನೆಯನ್ನು ವಿಶ್ವ ಸಂಸ್ಥೆ ಮೆಚ್ಚಿಕೊಂಡಿದೆ. ವೈರಸ್ ಹರಡದಂತೆ ತಡೆಗಟ್ಟಲು ಇದೊಂದು ಒಳ್ಳೆಯ ಪ್ಲಾನ್ ಎಂದು ಸಂತಸ ವ್ಯಕ್ತಪಡಿಸಿದೆ.
ಜನತಾ ಕರ್ಫ್ಯೂದಿಂದ ಕೊರೊನಾ ವೈರಸ್ ಹರಡುವುದನ್ನು ತಡೆಯಬಹುದಾಗಿದೆ. ಭಾರತದ ಪ್ರಧಾನಿ ಮೋದಿ ಜನತಾ ಕರ್ಫ್ಯೂ ಜಾರಿಗೊಳಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಭಾನುವಾರದ ಭಾರತ್ ಬಂದ್ ಕರೆ ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲಿದೆ ಎಂದು ವಿಶ್ಚ ಆರೋಗ್ಯ ಸಂಸ್ಥೆಯ ಭಾರತೀಯ ಪ್ರತಿನಿಧಿ ಹೆಂಕ್ ಬೆಕೆಡಮ್ ಹೇಳಿದ್ದಾರೆ.
ಏನಿದು ಜನತಾ ಕರ್ಫ್ಯೂ? ವೈರಸ್ ಭೀತಿ ನಡುವೆ ಹೇಗೆ ವರ್ಕ್ ಆಗುತ್ತೆ?
ಮೋದಿ ನಿನ್ನೆ ದೇಶವನ್ನು ಉದ್ಧೇಶಿಸಿದ ಮಾತನಾಡಿದ್ದು 'ಜನತಾ ಕರ್ಫ್ಯೂ' ಕರೆ ನೀಡಿದ್ದಾರೆ. ಇದಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಅತ್ತ ವಿಶ್ವ ಆರೋಗ್ಯ ಸಂಸ್ಥೆ ಕೂಡ ಈ ಕಾರ್ಯಕ್ಕೆ ಬೆನ್ನು ತಟ್ಟಿದೆ. ಭಾರತೀಯ ಪ್ರತಿನಿಧಿ ಹೆಂಕ್ ಬೆಕೆಡಮ್ 'ಜನತಾ ಕರ್ಫ್ಯೂ'ಗೆ ಪೂರ್ಣ ಅಂಕ ನೀಡಿದ್ದಾರೆ.
ಜನತಾ ಕರ್ಫ್ಯೂ ಅಂದರೆ ಏನು?
ಮಾರ್ಚ್ 22ರ ರವಿವಾರದಂದು ಬೆಳಗ್ಗೆ 7 ರಿಂದ ರಾತ್ರಿ 9 ರ ತನಕ ಜನತಾ ಕರ್ಫ್ಯೂ ಆಚರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ದೇಶದ ನಿವಾಸಿಗಳು ಮನೆಯಲ್ಲೇ ಉಳಿದು ಕರ್ಫ್ಯೂ ಆಚರಣೆಗೆ ಸಹಕರಿಸುವಂತೆ ಕೋರಿದ್ದಾರೆ. ಅಂದು ಮನೆಯಿಂದ ಹೊರಕ್ಕೆ ಬರಬೇಡಿ, ಮಾರ್ಚ್ 22ರ ಸಂಜೆ 5 ಗಂಟೆಗೆ ಸರಿಯಾಗಿ ನಿಮ್ಮ ಮನೆಯ ಬಾಗಿಲು, ಕಿಟಕಿ ಬಳಿ ನಿಂತು ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ವರ್ಗಕ್ಕೆ ಧನ್ಯವಾದ ಸಲ್ಲಿಸೋಣ ಎಂದು ಕರೆ ನೀಡಿದರು.