ಛೆ ಛೆ.. ಜೀವ ಉಳಿಸುವ ವೈದ್ಯರಿಗೆ ಭಾರತದಲ್ಲಿ ಇದೆಂಥಾ ಪರಿಸ್ಥಿತಿ.?!
ವೈದ್ಯೋ.. ನಾರಾಯಣೋ.. ಹರಿಃ ಎಂಬ ಮಾತಿದೆ. ಇದರ ಅರ್ಥ ವೈದ್ಯನಾದವನು ದೇವರ ಸಮಾನ ಎಂದು. ಸದ್ಯ ಇಡೀ ಜಗತ್ತಿಗೆ ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವವರು ಇದೇ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ.
Recommended Video
ಹಗಲು ರಾತ್ರಿ ಎನ್ನದೆ, ಕುಟುಂಬದ ಸಂಪರ್ಕವೇ ಇಲ್ಲದೆ, ಜೀವದ ಹಂಗನ್ನು ತೊರೆದು ವೈದ್ಯರು ಮತ್ತು ಸಕಲ ವೈದ್ಯಕೀಯ ಸಿಬ್ಬಂದಿ 'ಕೊರೊನಾ ವಾರಿಯರ್ಸ್' ಆಗಿ ಜನರ ಪ್ರಾಣ ಉಳಿಸಲು ಹೋರಾಡುತ್ತಿದ್ದಾರೆ. ಅಂಥದ್ರಲ್ಲಿ ದೆಹಲಿಯ ಓರ್ವ ವೈದ್ಯೆಗೆ ಎಂಥಾ ಪರಿಸ್ಥಿತಿ ಎದುರಾಗಿದೆ ಗೊತ್ತೇ.?
ಖಾಸಗಿ ವೈದ್ಯರನ್ನೇ ಬೆಚ್ಚಿ ಬೀಳಿಸುತ್ತೆ ಮಹಾರಾಷ್ಟ್ರದ ಹೊಸ ರೂಲ್ಸ್!
ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡುವಾಗ ಕೊರೊನಾ ವೈರಸ್ ಸೋಂಕು ಪೀಡಿತೆಯಾದ ವೈದ್ಯೆ, ಸಂಪೂರ್ಣವಾಗಿ ಗುಣಮುಖರಾದ ಬಳಿಕ ಮನೆಗೆ ವಾಪಸ್ ಬಂದರೆ, ಆಕೆಯ ಅಕ್ಕ-ಪಕ್ಕದವರು ನಡೆದುಕೊಂಡ ರೀತಿ ನಿಜಕ್ಕೂ ಶೋಚನೀಯ.!
ರೋಗಿಗೆ ಚಿಕಿತ್ಸೆ ನೀಡುವಾಗ ಸೋಂಕು
ದೆಹಲಿಯ ಪೊಲೀಸ್ ಲೈನ್ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಡಾಕ್ಟರ್ ಆಗಿರುವ ವೈದ್ಯೆಗೆ, ಕೋವಿಡ್-19 ರೋಗಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಸೋಂಕು ತಾಗಿದೆ. ಹೀಗಾಗಿ, ವಾರಗಳ ಕಾಲ ಐಸೋಲೇಷನ್ ವಾರ್ಡ್ ನಲ್ಲಿದ್ದು ಚಿಕಿತ್ಸೆ ಪಡೆದ ವೈದ್ಯೆ ಮೇ 13 ರಂದು ಬುಧವಾರ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು.
ವೈದ್ಯೆಗೆ ನಿಂದನೆ
ಸತತ ಎರಡು ಪರೀಕ್ಷೆಗಳಲ್ಲಿ ಕೋವಿಡ್-19 ನೆಗೆಟಿವ್ ಎಂದು ಕಂಡುಬಂದ ಮೇಲೆ ವೈದ್ಯೆ ಡಿಸ್ಚಾರ್ಜ್ ಆಗಿ ವಸಂತ್ ಕುಂಜ್ ನಲ್ಲಿರುವ ತಮ್ಮ ಮನೆಗೆ ಬಂದಿದ್ದಾರೆ. ಮನೆಗೆ ಆಕೆ ಕಾಲಿಡುತ್ತಿದ್ದಂತೆಯೇ, ಆಕೆಯ ಅಕ್ಕ-ಪಕ್ಕದ ಮನೆಯವರು ಕೆಟ್ಟ ಬೈಗುಳಗಳಿಂದ ನಿಂದಿಸಿದ್ದಾರೆ. ಮನಬಂದಂತೆ ಛೀಮಾರಿ ಹಾಕಿದ್ದಾರೆ. ದೊಡ್ಡ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ.
ವೈದ್ಯೆಗೆ ಬೆದರಿಕೆ
''ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ'' ಎಂದು ವೈದ್ಯೆ ಎಷ್ಟೇ ಹೇಳಿದರೂ ಕೇಳದ ನೆರೆ ಮನೆಯವರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಸಾಲದಕ್ಕೆ, ''ಮನೆಯಿಂದ ಆಚೆ ಹೇಗೆ ಕಾಲಿಡ್ತಿಯಾ ಅಂತ ನಾನೂ ನೋಡ್ತೀನಿ. ನೀನು ಈ ಜಾಗದಲ್ಲಿ ಇರಲೇಬಾರದು. ಯಾರಿಗೆ ಬೇಕಾದರೂ ದೂರು ಕೊಡು'' ಅಂತ ವೈದ್ಯೆ ಬೆದರಿಕೆ ಕೂಡ ಹಾಕಿದ್ದಾರೆ.
ದೂರು ನೀಡಿದ ವೈದ್ಯೆ
ಮನೆಯಲ್ಲಿ ಒಂಟಿಯಾಗಿ ವಾಸ ಮಾಡುವ ವೈದ್ಯೆ ಬೇರೆ ದಾರಿ ಇಲ್ಲದೆ, ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ಇದೀಗ ಸುರಕ್ಷತೆ ಇಲ್ಲದಂತಾಗಿದೆ. ಸೋಂಕಿನ ಭಯದಿಂದ ನೆರೆ ಮನೆಯವರು ಹಾಗೆ ವರ್ತಿಸಿರಬಹುದು. ಆದರೆ, ಅದೇ ಸೋಂಕಿನ ಭೀತಿಯಿಂದ ರೋಗಿಗಳಿಗೆ ಚಿಕಿತ್ಸೆ ನೀಡಲ್ಲ ಎಂದು ವೈದ್ಯರು ಹಿಂದೇಟು ಹಾಕಿದರೆ, ಪರಿಸ್ಥಿತಿ ಏನಾಗಬಹುದು.. ಊಹಿಸಿ.