ಮೆಟ್ರೋ ಮುಂದೆ ಜಿಗಿದು ವ್ಯಕ್ತಿ ಆತ್ಮಹತ್ಯೆ: ಮನೆಯಲ್ಲಿ ಪತ್ನಿ, ಮಗಳು ಸಾವಿಗೆ ಶರಣು
ನವದೆಹಲಿ, ಡಿಸೆಂಬರ್ 14: ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಸಾಮೂಹಿಕ ಆತ್ಮಹತ್ಯೆಯ ಘಟನೆ ವರದಿಯಾಗಿದೆ. ನೋಯ್ಡಾ ಸೆಕ್ಟರ್ 128ರಲ್ಲಿನ ಮನೆಯೊಂದರಲ್ಲಿ ಮಹಿಳೆ ಮತ್ತು ಆಕೆಯ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಮೊದಲು ಆ ಮಹಿಳೆಯ ಪತಿ ದೆಹಲಿಯ ಮೆಟ್ರೋ ರೈಲೊಂದರ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯ ಆತ್ಮಹತ್ಯೆ ಮಾಹಿತಿ ನೀಡಿದಾಗ ದೇಹವನ್ನು ಗುರುತಿಸುವ ಸಲುವಾಗಿ ಮಹಿಳೆ ಆರ್ಎಂಎಲ್ ಆಸ್ಪತ್ರೆಗೆ ಬಂದಿದ್ದರು. ಅಲ್ಲಿಂದ ಮನೆಗೆ ಹಿಂದಿರುಗಿದ ನಂತರ ಮಗಳೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಾಲೆಗೆ ಪೋಷಕರನ್ನು ಕರೆದು ತಾ ಎಂದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
'ಆರ್ಎಂಎಲ್ ಆಸ್ಪತ್ರೆಯಲ್ಲಿ ಇರಿಸಿದ್ದ ಪತಿ ಭರತ್ ಅವರ ದೇಹವನ್ನು ಗುರುತಿಸಲು ಮಹಿಳೆ ತೆರಳಿದ್ದರು. ಮನೆಗೆ ವಾಪಸ್ ಬಂದ ಬಳಿಕ ಕೊಠಡಿಯೊಂದರಲ್ಲಿ ಮಗಳ ಜತೆ ತಾವೂ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ' ಎಂದು ವೃತ್ತ ಅಧಿಕಾರಿ ಶ್ವೇತಬ್ ಪಾಂಡೆ ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿದ್ದ ಕುಟುಂಬ
ಈ ಕುಟುಂಬವು ಕೆಲವು ಸಮಯದಿಂದ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿತ್ತು ಎಂದು ವ್ಯಕ್ತಿಯ ಸಹೋದರ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಭರತ್ ಅವರ ಆತ್ಮಹತ್ಯೆಯ ಕಾರಣ ದೆಹಲಿ ಮೆಟ್ರೋದ ನೇರಳ ಬಣ್ಣದ ಮಾರ್ಗವನ್ನು ಶುಕ್ರವಾರ ಬೆಳಿಗ್ಗೆ ಕೆಲ ಸಮಯ ಮುಚ್ಚಲಾಗಿತ್ತು.
ಮರ್ಯಾದೆ ಹೋಯ್ತೆಂದು ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾದ ಆಟೋ ಚಾಲಕ
ಚೆನ್ನೈ ಮೂಲದ ಭರತ್
ನೋಯ್ಡಾದ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೆನ್ನೈ ಮೂಲದ ಭರತ್ ಜೆ. (33), ಶುಕ್ರವಾರ ಬೆಳಿಗ್ಗೆ ಜವಹರಲಾಲ್ ನೆಹರೂ ಸ್ಟೇಡಿಯಂ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ರೈಲಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಶಿವರಂಜಿನಿ ಮತ್ತು ಐದು ವರ್ಷದ ಮಗಳೊಂದಿಗೆ ಅವರು ನೋಯ್ಡಾ ಸೆಕ್ಟರ್ 128ನ ಜೇಪೀ ಗ್ರೀನ್ಸ್ ದಿ ಪೆವಿಲಿಯನ್ ಕೋರ್ಟ್ನಲ್ಲಿ ವಾಸಿಸುತ್ತಿದ್ದರು.
ಮಗಳಿಗೆ ನೇಣು ಹಾಕಿ ತಾವೂ ಆತ್ಮಹತ್ಯೆ
ಭರತ್ ಅವರ ಮೃತದೇಹವನ್ನು ಆರ್ಎಂಎಲ್ ಆಸ್ಪತ್ರೆಯಲ್ಲಿ ಇರಿಸಲಾಗಿತ್ತು. ಅದರ ಗುರುತು ಪತ್ತೆಗಾಗಿ ಶಿವರಂಜಿನಿ, ಪತಿಯ ಸಹೋದರ ಕಾರ್ತಿಕ್ ಜತೆಗೆ ಆಸ್ಪತ್ರೆಗೆ ತೆರಳಿದ್ದರು. ಬೆಳಿಗ್ಗೆ ದೇಹವನ್ನು ಗುರುತಿಸಿ ಮನೆಗೆ ಮರಳಿದ್ದವರು ರಾತ್ರಿ ಮಗಳಿಗೆ ನೇಣು ಹಾಕಿ, ತಾವೂ ಸೀಲಿಂಗ್ ಫ್ಯಾನ್ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು ಎರಡು ಪ್ರಕರಣ
ನವೆಂಬರ್ನಲ್ಲಿ ಕೂಡ ಮೆಟ್ರೊ ನಿಲ್ದಾಣದಲ್ಲಿ ಆತ್ಮಹತ್ಯೆಯ ಪ್ರಕರಣ ವರದಿಯಾಗಿತ್ತು. ನೋಯ್ಡಾ ಮತ್ತು ವೈಶಾಲಿಯಿಂದ ದ್ವಾರಕಾಗೆ ತೆರಳುವ ಗಾಲ್ಫ್ ಕೋರ್ಸ್ ಮೆಟ್ರೋ ನಿಲ್ದಾಣದ ನೀಲಿ ಮಾರ್ಗದ ಡಿಎಂಆರ್ಸಿ ರೈಲಿನ ಮುಂದೆ 25 ವರ್ಷದ ರೂಪಕ್ಸ್ ಪಾಲ್ ಜಿಗಿದಿದ್ದರು. ತೀವ್ರ ಗಾಯಗೊಂಡಿದ್ದ ಅವರನ್ನು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರೂ ಅವರು ಮೃತಪಟ್ಟಿದ್ದರು. ಅದೇ ತಿಂಗಳಲ್ಲಿ 75 ವರ್ಷದ ಅಮ್ರಿಕ್ ಸಿಂಗ್ ಎಂಬುವವರು ಲಕ್ಷ್ಮೀನಗರ ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.