ಮುಖ್ಯಸ್ಥರಿಲ್ಲದೆ ನಾವಿಕನಿಲ್ಲದ ದೋಣಿಯಂತಾದ ಸಿಬಿಐ
ನವದೆಹಲಿ, ನವೆಂಬರ್ 14: ಲಂಚ ಪ್ರಕರಣವೊಂದರಲ್ಲಿ ಸಿಲುಕಿರುವ ಸಿಬಿಐನ ಇಬ್ಬರು ಮುಖ್ಯಸ್ಥರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದು ಸಿಬಿಐನ ಕಾರ್ಯವೈಖರಿಗೆ ಭಾರಿ ಹಿನ್ನಡೆಯಾಗಿದೆ.
ಮಹತ್ವದ ಪ್ರಕರಣಗಳನ್ನು ನಿಭಾಯಿಸುವ ವಿಚಾರದಲ್ಲಿ ಸಿಬಿಐ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಸಿಬಿಐ ಅನೇಕ ಪ್ರಮುಖ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದೆ. ಇನ್ನೂ ಕೆಲವು ಪ್ರಕರಣಗಳು ಸಿಬಿಐ ಹಿಡಿತಕ್ಕೆ ಬರಬೇಕಿದೆ. ಅಲ್ಲದೆ, ಈಗಾಗಲೇ ತನಿಖೆ ನಡೆಸಿರುವ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿವೆ. ಮುಖ್ಯಸ್ಥರ ಗೈರಿನಲ್ಲಿ ಇವೆಲ್ಲವುಗಳ ನಿರ್ವಹಣೆ ನಡೆಸುವುದು ಸಿಬಿಐಗೆ ಕಷ್ಟಕರವಾಗಿದೆ.
ಅಲೋಕ್ ವಿರುದ್ಧದ ತನಿಖೆ ಪೂರ್ಣ : ಕ್ಷಮೆಯೊಂದಿಗೆ ವರದಿ ಸಲ್ಲಿಕೆ
ವಿಜಯ್ ಮಲ್ಯ, ಮೆಹುಲ್ ಚೋಕ್ಸಿ ಮುಂತಾದವರ ಪ್ರಕರಣಗಳ ವಿಚಾರಣೆ ಅತ್ಯಂತ ನಿರ್ಣಾಯಕವಾಗಿದ್ದು, ನ್ಯಾಯಾಲಯದಲ್ಲಿ ಅವುಗಳನ್ನು ನಿರ್ವಹಿಸಲು ಮುಖ್ಯಸ್ಥರೇ ಇಲ್ಲವಾಗಿದ್ದಾರೆ.
ಹಂಗಾಮಿ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ನಾಗೇಶ್ವರ ರಾವ್ ಅವರನ್ನು ನೇಮಿಸಿತ್ತು. ಆದರೆ, ಅವರು ದೈನಂದಿನ ಕಾರ್ಯಗಳ ನಿರ್ವಹಣೆ ಮಾಡಬಹುದೇ ವಿನಾ, ನಿರ್ಣಯಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಹೀಗಾಗಿ ಸಿಬಿಐ ನಾವಿಕನಿಲ್ಲದ ದೋಣಿಯಂತಾಗಿದೆ.
ಅಧಿಕಾರಿಗಳ ಹಿಂದೇಟು
ಮೂಲಗಳ ಪ್ರಕಾರ, ಸಿಬಿಐ ಮುಖ್ಯಸ್ಥ ಅಲೋಕ್ ವರ್ಮಾ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನಾ ಅವರ ನಡುವಿನ ಬಹಿರಂಗ ಕಿತ್ತಾಟದ ಬಳಿಕ ಬಾಕಿ ಉಳಿದಿರುವ ಪ್ರಕರಣಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಮುಂದಾಗುತ್ತಿಲ್ಲ. ಯಾವುದನ್ನೂ ಕಡತಗಳಲ್ಲಿ ಉಳಿಸಿಕೊಳ್ಳುತ್ತಿಲ್ಲ. ಈ ಕಾರಣದಿಂದಾಗಿ ಅನೇಕ ಪ್ರಕರಣಗಳು ತೊಂದರೆಗೆ ಒಳಗಾಗಿವೆ.
ಮಲ್ಯ ಪ್ರಕರಣ ನೋಡುವವರಾರು?
ಲಂಡನ್ ನ್ಯಾಯಾಲಯವು ಮದ್ಯ ಉದ್ಯಮಿ ವಿಜಯ್ ಮಲ್ಯ ವಿರುದ್ಧದ ಹಣ ವಂಚನೆ ಆರೋಪದ ಪ್ರಕರಣದ ತೀರ್ಪನ್ನು ಡಿ.10ರಂದು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ, ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ಥಾನ ಅವರನ್ನು ಕೇಂದ್ರ ಸರ್ಕಾರ ಕಡ್ಡಾಯ ರಜೆಯ ಮೇಲೆ ಕಳುಹಿಸಿರುವುದರಿಂದ ಸಂಸ್ಥೆಯನ್ನು ಯಾರು ಪ್ರತಿನಿಧಿಸಲಿದ್ದಾರೆ ಎನ್ನುವುದು ಇನ್ನೂ ಗೊಂದಲದಲ್ಲಿದೆ.
ರಾಕೇಶ್ ಅಸ್ಥಾನ ಕೈಲಿದ್ದ ಮಲ್ಯ ಕೇಸ್ ಕತೆ ಏನಾಗಲಿದೆ?
ಇಂಟರ್ಪೋಲ್ ಕೋರಿಕೆಗೆ ಪ್ರತಿಕ್ರಿಯೆ ಇಲ್ಲ
ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ಆಭರಣ ವ್ಯಾಪಾರಿ ಮೆಹುಲ್ ಚೋಕ್ಸಿ ಕುರಿತು ಕೆಲವು ವಿವರಗಳನ್ನು ನೀಡುವಂತೆ ಇಂಟರ್ಪೋಲ್ ಸಿಬಿಐಗೆ ಕೇಳಿದೆ. ಆದರೆ, ಇದಕ್ಕೆ ಸಂಸ್ಥೆ ಯಾವುದೇ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿಲ್ಲ.
'ಭಾರತದಲ್ಲಿನ ಜೈಲುಗಳು ಕೆಟ್ಟ ಸ್ಥಿತಿಯಲ್ಲಿವೆ. ಹೀಗಾಗಿ ತನ್ನನ್ನು ಭಾರತಕ್ಕೆ ಒಪ್ಪಿಸಬೇಡಿ' ಎಂದು ಚೋಕ್ಸಿ ತಕರಾರು ಎತ್ತಿದ್ದಾನೆ. ತನ್ನ ವಿರುದ್ಧದ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸುತ್ತಿಲ್ಲ ಎಂದು ಸಹ ಆರೋಪಿಸಿದ್ದಾನೆ. ಆದರೆ, ಇದಕ್ಕೆ ಸಿಬಿಐ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.
13 ಸಾವಿರ ಕೋಟಿ ವಂಚನೆ ನಂತರ ಮೆಹುಲ್ ಚೋಕ್ಸಿ ಮೊದಲ ಮಾತುಗಳಿವು
ತನಿಖೆ ನಡೆಸಲು ತಂಡವೇ ಇಲ್ಲ
ಬಿಹಾರದ ಮುಜಫ್ಫರ್ಪುರ ಬಾಲಕಿಯರ ಆಶ್ರಮದಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಕುರಿತಾದ ತನಿಖೆಗೆಗೂ ಹಿನ್ನಡೆಯಾಗಿದೆ. ಆಶ್ರಮದ ಸಮೀಪದ ಸ್ಮಶಾನದಲ್ಲಿ ಒಂದು ತಲೆಬುರುಡೆ ಮತ್ತು ಕೆಲವು ಮೂಳೆಗಳು ದೊರೆತಿದ್ದರೂ, ಅದು ನಾಪತ್ತೆಯಾಗಿರುವ ಬಾಲಕಿಯರಲ್ಲೇ ಯಾರದ್ದಾದರೂ ಆಗಿರಬಹುದೇ ಎಂದು ತಿಳಿದುಕೊಳ್ಳುವ ಸಲುವಾಗಿ ಪರೀಕ್ಷೆಗೆ ಒಳಪಡಿಸಲು ವೈದ್ಯಕೀಯ ಮತ್ತು ವಿಧಿವಿಜ್ಞಾನ ತಜ್ಞರ ತಂಡವನ್ನು ರಚಿಸಲು ಸಿಬಿಐ ಮುಂದಾಗಿಲ್ಲ.
ರಾಕೇಶ್ ಅಸ್ಥಾನಾ ವಿರುದ್ಧ ದಾಖಲೆಗಳಿವೆ: ದೆಹಲಿ ಹೈಕೋರ್ಟ್ಗೆ ಸಿಬಿಐ
ಪ್ರಕರಣವೇ ದಾಖಲಾಗುತ್ತಿಲ್ಲ
ಅಕ್ಟೋಬರ್ 22ರಲ್ಲಿ ಸಿಬಿಐ ಮುಖ್ಯಸ್ಥರ ಕಿತ್ತಾಟ ಮತ್ತು ಸಿಬಿಐ-ಸರ್ಕಾರದ ಜಗಳಗಳು ಬೀದಿಗೆ ಬಂದ ಬಳಿಕ ಇದುವರೆಗೂ ಕೇವಲ ಏಳು ಸಾಮಾನ್ಯ ಪ್ರಕರಣಗಳು ನೋಂದಣಿಯಾಗಿವೆ. ಇದಕ್ಕೂ ಮುನ್ನ ಸಂಸ್ಥೆಯಲ್ಲಿ ತಿಂಗಳಿಗೆ ಕನಿಷ್ಠ 36 ಪ್ರಕರಣಗಳು ದಾಖಲಾಗುತ್ತಿದ್ದವು. ಮುಖ್ಯಸ್ಥರೇ ಇಲ್ಲದ ಕಾರಣ ಪ್ರಮುಖ ಪ್ರಕರಣಗಳು ಸಿಬಿಐಗೆ ಬರುತ್ತಿಲ್ಲ. ಬಂದರೂ ಅವುಗಳನ್ನು ಕೈಗೆತ್ತಿಕೊಳ್ಳುವ ನಿರ್ಣಯ ಪ್ರಕ್ರಿಯೆ ನಡೆಯಲು ಸಾಧ್ಯವಾಗುತ್ತಿಲ್ಲ.
ಪೂಜೆ ಮಾಡಿಸಬೇಕಂತೆ!
ಸಿಬಿಐ ಕಚೇರಿಯನ್ನು ಇತ್ತೀಚೆಗೆ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಅದು ಸ್ಮಶಾನದ ಪಕ್ಕವೇ ಇದೆ. ಹೀಗಾಗಿ ಅಲ್ಲಿಗೆ ಸ್ಥಳಾಂತರವಾದಾಗಿನಿಂದ ಸಿಬಿಐ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ತಮಾಷೆಯ ಮಾತುಗಳು ಕೇಳಿಬರುತ್ತಿವೆ. ಒಂದೇ ಪ್ರಕರಣದಲ್ಲಿ ನಮ್ಮ ನಾಲ್ವರು ಅಧಿಕಾರಿಗಳು ಸಂಕಷ್ಟದಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಸಿಬಿಐಅನ್ನು ಪಾರು ಮಾಡಲು ದೇವರೇ ಬರಬೇಕು ಎನ್ನುವುದು ಸಿಬಿಐನ ಮತ್ತೊಬ್ಬ ಅಧಿಕಾರಿಯೊಬ್ಬರ ಮಾತು. ಕಚೇರಿಯ ಆವರಣದಲ್ಲಿ ಪೂಜೆಯನ್ನು ನಡೆಸುವುದು ಸೂಕ್ತ ಎಂದು ಅವರು ಸಲಹೆ ಕೂಡ ನೀಡಿದ್ದಾರೆ.