ಟಿಎಂಸಿ ಸಂಸದ ಡೆರೆಕ್ ಒಬ್ರಿಯನ್ ರಾಜ್ಯಸಭೆಯಿಂದ ಅಮಾನತು
ನವದೆಹಲಿ, ಡಿಸೆಂಬರ್ 22: ಸಂಸತ್ತಿನಲ್ಲಿ ಅಶಿಸ್ತಿನ ವರ್ತನೆ ತೋರಿದ ಆರೋಪದಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯನ್ರನ್ನು ಈ ಚಳಿಗಾಲದ ಅಧಿವೇಶನದ ಉಳಿದ ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿದೆ. ಒಬ್ರಿಯನ್ ರಾಜ್ಯಸಭೆಯ ನಿಯಮ ಪುಸ್ತಕವನ್ನು ಅಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಆರೋಪ ಮಾಡಲಾಗಿದ್ದು, ಈ ಹಿನ್ನೆಲೆಯಿಂದಾಗಿ ಅವರನ್ನು ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿದೆ.
ಇನ್ನು ಕಳೆದ ಮುಂಗಾರು ಅಧಿವೇಶನದ ಸಂದರ್ಭದಲ್ಲಿ ಮೂರು ಕೃಷಿ ಕಾಯ್ದೆ ಮಸೂದೆಯನ್ನು ವಿರೋಧ ಮಾಡಿ ರಾಜ್ಯ ಸಭೆಯಲ್ಲಿ ಪ್ರತಿಭಟನೆ ಮಾಡಿ, ದುರ್ನಡತೆ ತೋರಿದ್ದಾರೆ ಎಂಬ ಆರೋಪದಲ್ಲಿ ಈ ಚಳಿಗಾಲದ ಅಧಿವೇಶನದಿಂದಲೂ ಹನ್ನೆರಡು ಮಂದಿ ಸಂಸದರನ್ನು ಅಮಾನತು ಮಾಡಲಾಗಿದೆ.
ಮುಂಗಾರು ಅಧಿವೇಶನದ ವೇಳೆ ಅಶಿಸ್ತಿನ ವರ್ತನೆ: 12 ವಿಪಕ್ಷ ಸಂಸದರು ರಾಜ್ಯಸಭೆಯಿಂದ ಅಮಾನತು
ಅಖಿಲೇಶ್ ಪ್ರಸಾದ್ ಸಿಂಗ್, ಫುಲೋ ದೇವಿ ನೇತಮ್, ಸೈಯದ್ ನಾಸೀರ್ ಹುಸೇನ್, ಛಾಯಾ ವರ್ಮಾ, ರಾಜಮಣಿ ಪಟೇಲ್ ಮತ್ತು ಕಾಂಗ್ರೆಸ್ನ ರಿಪುನ್ ಬೋರಾ, ಶಿವಸೇನೆಯ ಪ್ರಿಯಾಂಕಾ ಚತುರ್ವೇದಿ, ಅನಿಲ್ ದೇಸಾಯಿ, ಸಿಪಿಐ-ಎಂನ ಎಲಮರಮ್ ಕರೀಂ, ಸಿಪಿಐನ ಬಿನೋಯ್ ವಿಶ್ವಂ ಮತ್ತು ತೃಣಮೂಲ ಕಾಂಗ್ರೆಸ್ನ ಡೋಲಾ ಸೇನ್ ಮತ್ತು ಶಾಂತಾ ಛೆಟ್ರಿ ಅವರನ್ನು ಈ ಚಳಿಗಾಲದ ಅಧಿವೇಶನದಿಂದ ಅಮಾನತುಗೊಳಿಸಲಾಗಿದೆ. ಇನ್ನು ಈಗ ಟಿಎಂಸಿಯ ಸಂಸದ ಡೆರೆಕ್ ಒಬ್ರಿಯನ್ರನ್ನು ಕೂಡಾ ಅಮಾನತು ಮಾಡಲಾಗಿದೆ.
ಡೆರೆಕ್ ಒಬ್ರಿಯನ್ ನಿಯಮ ಪುಸ್ತಕವನ್ನು ಅಧ್ಯಕ್ಷರ ಮೇಲೆ ಎಸೆದಿದ್ದಾರೆ ಎಂದು ಸದನದ ಅಧ್ಯಕ್ಷತೆ ವಹಿಸಿದ್ದ ಸಸ್ಮಿತ್ ಪಾತ್ರಾ ಆರೋಪ ಮಾಡಿದ್ದಾರೆ. "ಡೆರೆಕ್ ಒಬ್ರಿಯನ್ ಅಧ್ಯಕ್ಷರ ಕಡೆಗೆ ನಿಯಮ ಪುಸ್ತಕವನ್ನು ತೀವ್ರವಾಗಿ ಎಸೆದರು. ನಿಯಮ ಪುಸ್ತಕವು ಕುರ್ಚಿ, ಕಾರ್ಯದರ್ಶಿ ಅಥವಾ ಮೇಜಿನ ಬಳಿ ಇರುವ ಅಧಿಕಾರಿಗಳ ಮೇಲೆ ಬಡಿಯುತ್ತಿತ್ತು," ಎಂದು ಸದನದ ಅಧ್ಯಕ್ಷತೆ ವಹಿಸಿದ್ದ ಸಸ್ಮಿತ್ ಪಾತ್ರಾ ಹೇಳಿದ್ದಾರೆ.
ಇದು ಇಡೀ ದೇಶಕ್ಕೆ ಮಾಡಿದ ಅವಮಾನ ಎಂದ ಪಿಯೂಷ್
ಇನ್ನು ರಾಜ್ಯಸಭೆ ನಾಯಕ ಪಿಯೂಷ್ ಗೋಯಲ್, "ಡೆರೆಕ್ ಒಬ್ರಿಯನ್ ನಿಯಮ ಪುಸ್ತಕವನ್ನು ಎಸೆದಿರುವ ರೀತಿ ಇದು ಕೇವಲ ಅಧ್ಯಕ್ಷರು ಅಥವಾ ಪ್ರಧಾನ ಕಾರ್ಯದರ್ಶಿ ಅಥವಾ ಸದನಕ್ಕೆ ಮಾಡಿ ಅವಮಾನವಲ್ಲ ಇದು ಇಡೀ ದೇಶಕ್ಕೆ ಮಾಡಿ ಅವಮಾನ," ಎಂದು ಟೀಕೆ ಮಾಡಿದ್ದಾರೆ. ಆದರೆ ಈ ಬಗ್ಗೆ ಡೆರೆಕ್ ಒಬ್ರಿಯನ್ ಮಾತ್ರ ತದ್ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ.
ಡೆರೆಕ್ ಒಬ್ರಿಯನ್ ಹೇಳುವುದು ಏನು?
ಈ ವಿಚಾರವನ್ನು ಡೆರೆಕ್ ಒಬ್ರಿಯನ್ ಮಾತ್ರ ಅಲ್ಲಗಳೆದಿದ್ದಾರೆ. ಈ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿರುವ ಡೆರೆಕ್, "ಹೋ ನಿಜವಾಗಿಯೂ ಹೌದೇ?, ನಾನು ನಿಯಮ ಪುಸ್ತಕವನ್ನು ಎಸೆದಿದ್ದೇನೆ ಎಂದು ಹೇಳಿದವರು ಯಾರು?, ನನಗೆ ಈ ಘಟನೆಯ ವಿಡಿಯೋ ಅಥವಾ ಚಿತ್ರವನ್ನು ತೋರಿಸಿ," ಎಂದು ಆಗ್ರಹ ಮಾಡಿದ್ದಾರೆ.
The last time I got suspended from RS was when govt. was BULLDOZING #FarmLaws
— Derek O'Brien | ডেরেক ও'ব্রায়েন (@derekobrienmp) December 21, 2021
We all know what happened after that.
Today, suspended while protesting against BJP making a mockery of #Parliament and BULLDOZING #ElectionLawsBill2021
Hope this Bill too will be repealed soon
"ಕೃಷಿ ಕಾಯ್ದೆ ಜಾರಿ ಸಂದರ್ಭದಂತೆಯೇ ಈಗ ನಡೆದಿದೆ. ಆ ಸಂದರ್ಭದಲ್ಲಿ ಹನ್ನೆರಡು ವಿಪಕ್ಷ ಸಂಸದರನ್ನು ಅಮಾನತು ಮಾಡುವ ಮೂಲಕ ಸರ್ಕಾರ ಬಹುಮತ ಪಡೆದುಕೊಂಡಿತು. ಈಗ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ 2021 ಚರ್ಚೆ ಸಂದರ್ಭದಲ್ಲೂ ಕೇಂದ್ರ ಸರ್ಕಾರ ಅದೇ ರೀತಿಯ ವರ್ತನೆ ತೋರುತ್ತಿದೆ," ಎಂದು ಆರೋಪ ಮಾಡಿದ್ದಾರೆ. "ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿದ ಬಳಿಕ, ಈಗ ಬಿಜೆಪಿಯು ನನಗೆ ನಿಯಮ ಪುಸ್ತಕದ ಪಾಠವನ್ನು ಹೇಳಿಕೊಡಲು ಮುಂದಾಗಿದೆ. ವಿರೋಧ ಎಂಬುವುದು ಸತ್ತು ಹೋಗಿದೆ. ಇನ್ನು ಕೇಲವ ಇಬ್ಬರು ಉಳಿದಿದ್ದಾರೆ. ಯಾರು ಎಂದು ನೀವೇ ಅಂದಾಜು ಮಾಡಿ," ಎಂದು ಒಬ್ರಿಯನ್ ಟ್ವೀಟ್ ಮಾಡಿದ್ದಾರೆ.
Recommended Video
"ಈ ಹಿಂದೆ ನನ್ನನ್ನು ರಾಜ್ಯ ಸಭೆಯಿಂದ ಅಮಾನತು ಮಾಡಲಾಗಿತ್ತು. ಸರ್ಕಾರ ಕೃಷಿ ಕಾಯ್ದೆಯನ್ನು ಜಾರಿ ಮಾಡಲು ಮುಂದಾದ ಸಂದರ್ಭದಲ್ಲಿ ನನ್ನನ್ನು ಅಮಾನತು ಮಾಡಲಾಗಿತ್ತು. ಆ ಬಳಿಕ ಏನು ನಡೆದಿದೆ ಎಂಬುವುದು ಎಲ್ಲರಿಗೂ ತಿಳಿದಿದೆ. ಇಂದು ಬಿಜೆಪಿಯು ಸಂಸತ್ತಿನ ಅಪಹಾಸ್ಯ ಮಾಡುತ್ತಿರುವಾಗ ಹಾಗೂ ಚುನಾವಣಾ ಕಾನೂನು (ತಿದ್ದುಪಡಿ) ಮಸೂದೆ ಜಾರಿ ಮಾಡಲು ಮುಂದಾಗಿರುವಾಗ ನನ್ನನ್ನು ಅಮಾನತು ಮಾಡಲಾಗಿದೆ. ಈ ಕಾಯ್ದೆ ಶೀಘ್ರವೇ ರದ್ದಾಗುತ್ತದೆ ಎಂದು ಭಾವಿಸುತ್ತೇನೆ," ಎಂದು ದೂರಿದ್ದಾರೆ. (ಒನ್ಇಂಡಿಯಾ ಸುದ್ದಿ)