ಬಿಜೆಪಿ ಎದುರಿಸಲು ಅಸಮರ್ಥವಾದ ಕಾಂಗ್ರೆಸ್ ಜೊತೆ ಸಮನ್ವತೆ ಬಯಸಲ್ಲ: ಟಿಎಂಸಿ
ನವದೆಹಲಿ, ನವೆಂಬರ್ 27: ಕಾಂಗ್ರೆಸ್ ಪಕ್ಷದೊಂದಿಗೆ ಮುಂಬರುವ ಸಂಸತ್ ಚಳಿಗಾಲ ಅಧಿವೇಶನದಲ್ಲಿ ಸಮನ್ವಯ ಸಾಧಿಸುವುದಕ್ಕೆ ನಮಗೆ ಅಷ್ಟೊಂದು ಆಸಕ್ತಿಯಿಲ್ಲ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಸ್ಪಷ್ಟಪಡಿಸಿದೆ. ಆದರೆ ಜನರ ಹಿತದೃಷ್ಟಿಯಿಂದಾಗಿ ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳಿಗೆ ಟಿಎಂಸಿ ಸಹಕಾರ ನೀಡಲಿದೆ ಎಂದು ಪಕ್ಷದ ನಾಯಕರೊಬ್ಬರು ತಿಳಿಸಿದ್ದಾರೆ.
ನವೆಂಬರ್ 29ರಂದು ಚಳಿಗಾಲ ಅಧಿವೇಶನ ಆರಂಭಕ್ಕೂ ಮೊದಲು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕರೆದಿರುವ ವಿರೋಧಪಕ್ಷಗಳ ಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಪಾರ್ಟಿಯು ಬಹುಶಃ ಭಾಗವಹಿಸುವುದಿಲ್ಲ ಎಂದಿದ್ದಾರೆ.
ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ದೇಶದ ಹಳೆಯ ಪಕ್ಷವು ಟಿಎಂಸಿ ಸೇರಿದಂತೆ ಎಲ್ಲಾ ಪ್ರತಿಪಕ್ಷಗಳನ್ನು ಸೇರಿಸಿಕೊಂಡು ಮಹಾ ಪಾಳಯದೊಂದಿಗೆ ಸಮನ್ವಯ ಸಾಧಿಸಲಿದೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ ಕೆಲವೇ ದಿನಗಳಲ್ಲಿ ಟಿಎಂಸಿ ಈ ರೀತಿ ತಿರುಗೇಟು ನೀಡಿದೆ.
ಮೊದಲು ಆಂತರಿಕ ಸಮನ್ವಯ ಸಾಧಿಸಲು ಸೂಚನೆ:
ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷದೊಂದಿಗೆ ಜಿದ್ದಾಜಿದ್ದಿ ನಡೆಯುತ್ತಿರುವುದರ ನಡುವೆ ಕಾಂಗ್ರೆಸ್ ಪಕ್ಷಕ್ಕೆ ಟಿಎಂಸಿ ಸರಿಯಾಗಿ ತಿರುಗೇಟು ಕೊಡುತ್ತಿದೆ. ಕಾಂಗ್ರೆಸ್ ಪಕ್ಷವು ಮೊದಲು ತನ್ನ ಮನೆಯನ್ನು ಸರಿಯಾಗಿ ಕಟ್ಟಿಕೊಳ್ಳಲಿ, ಆಂತರಿಕ ಸಮನ್ವಯವನ್ನು ಸಾಧಿಸಿಕೊಳ್ಳಿರಿ ಎಂದು ಟಿಎಂಸಿ ಸಲಹೆ ನೀಡಿದೆ.
ಚಳಿಗಾಲ ಅಧಿವೇಶನದ ಸಂದರ್ಭದಲ್ಲಿ ಕಾಂಗ್ರೆಸ್ ಜೊತೆಗೆ ಸಮನ್ವಯ ಸಾಧಿಸುವುದಕ್ಕೆ ನಮಗೆ ಆಸಕ್ತಿ ಇಲ್ಲ. ಕಾಂಗ್ರೆಸ್ ಮುಖಂಡರು ಮೊದಲು ತಮ್ಮೊಳಗೆ ಸಮನ್ವಯತೆಯನ್ನು ಸಾಧಿಸಲಿ. ಅವರು ಮೊದಲು ತಮ್ಮ ಮನೆಯನ್ನು ಸರಿಯಾಗಿ ಕಟ್ಟುಕೊಂಡು ಆನಂತರದಲ್ಲಿ ಬೇರೆ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುವ ಬಗ್ಗೆ ಚಿಂತಿಸಲಿ ಎಂದು ಟಿಎಂಸಿ ಮುಖಂಡರೊಬ್ಬರು ತಮ್ಮ ಪಕ್ಷದ ನಿರ್ಧಾರದ ಬಗ್ಗೆ ಹೇಳಿಕೊಂಡಿದ್ದಾರೆ.
ಇತರೆ ಪಕ್ಷಗಳೊಂದಿಗೆ ಟಿಎಂಸಿ ಹೊಂದಾಣಿಕೆ:
ಟಿಎಂಸಿ ಇತರ ವಿರೋಧ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ. "ನಾವು ಜನರ ಹಿತಾಸಕ್ತಿಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇವೆ ಹಾಗೂ ಇತರೆ ಪಕ್ಷಗಳೊಂದಿಗೆ ಸಮನ್ವಯ ಸಾಧಿಸುತ್ತೇವೆ. ನಾವು ಬಹುಶಃ ಕಾಂಗ್ರೆಸ್ ಕರೆದಿರುವ ವಿರೋಧ ಪಕ್ಷಗಳ ಸಭೆಗೆ ಹಾಜರಾಗುವುದಿಲ್ಲ" ಎಂದು ಹೇಳಿದ್ದಾರೆ. ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಒಲವು ತೋರಿದ ಬಗ್ಗೆ ಮಾತನಾಡಿದ ಅವರು, ಕೇಸರಿ ಪಾಳಯವನ್ನು ಎದುರಿಸುವ ನಿಟ್ಟಿನಲ್ಲಿ ದೃಢಸಂಕಲ್ಪ ತೆಗೆದುಕೊಳ್ಳುವ ಸಾಮರ್ಥ್ಯ ಕಾಂಗ್ರೆಸ್ ನಾಯಕರಲ್ಲಿ ಇಲ್ಲ ಎಂದಿದ್ದಾರೆ.
ಬಿಜೆಪಿ ವಿರುದ್ಧ ಹೋರಾಡುವಲ್ಲಿ ಕಾಂಗ್ರೆಸ್ ವಿಫಲ:
ಬಿಜೆಪಿ ವಿರುದ್ಧ ಸಮರ್ಥವಾಗಿ ಹೋರಾಡುವುದರಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ದೂಷಿಸಿದ್ದರು. ಕಾಂಗ್ರೆಸ್ ಪಕ್ಷವು ನಾಯಕರ ಜಿಗಿಯುವ ಹಡಗಿನಂತೆ ಆಗಿದೆ. ಈ ಪರಿಸ್ಥಿತಿಗೆ ನಾನು ನಾಯಕರನ್ನು ದೂರುವುದಿಲ್ಲ. ಅದರ ಬದಲಿಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಅಸಮರ್ಥವಾಗಿರುವುದೇ ಇಷ್ಟಕ್ಕೆಲ್ಲ ಕಾರಣ ಎಂದು ಅವರು ಆರೋಪಿಸಿದ್ದರು.
ಮಮತಾ ಬ್ಯಾನರ್ಜಿ ನಿವಾಸದಲ್ಲಿ ಸಮನ್ವಯ ಸಮಿತಿ ಸಭೆ:
ತೃಣಮೂಲ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಸಮನ್ವಯ ಸಮಿತಿ ಸಭೆಯನ್ನು ನವೆಂಬರ್ 29ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥರೂ ಆಗಿರುವ ಮಮತಾ ಬ್ಯಾನರ್ಜಿ ನಿವಾಸದಲ್ಲಿ ನಡೆಸಲಿದೆ. ಈ ವೇಳೆ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತನ್ನ ಕಾರ್ಯತಂತ್ರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಪಕ್ಷ ಚರ್ಚಿಸಲಿದೆ ಎಂದು ಟಿಎಂಸಿ ನಾಯಕ ಹೇಳಿದ್ದಾರೆ.
ಟಿಎಂಸಿ ಪ್ರಸ್ತಾಪಿಸಲು ಯೋಚಿಸಿರುವ ವಿಷಯಗಳು:
"ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ತೆಗೆದುಕೊಳ್ಳಬೇಕಾದ ವಿಷಯಗಳು ತಮ್ಮನ್ನು ತಾವೇ ಆಯ್ಕೆ ಮಾಡಿಕೊಳ್ಳುತ್ತವೆ. ಉದಾಹರಣೆಗೆ, ನಾವು ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದು, ಎಂಎಸ್ಪಿ ಖಚಿತಪಡಿಸಿಕೊಳ್ಳಲು ಕಾನೂನು, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ನಿರ್ದೇಶಕರ ಅಧಿಕಾರಾವಧಿ ವಿಸ್ತರಣೆ, ಬಿಎಸ್ಎಫ್ನ ಕಾರ್ಯವ್ಯಾಪ್ತಿ ವಿಸ್ತರಣೆ ಸೇರಿದಂತೆ ಇತರೆ ಸಮಸ್ಯೆಗಳ ಜೊತೆಗೆ ಇಂಧನ ಬೆಲೆ ಏರಿಕೆ ಮತ್ತು ಬ್ಯಾಂಕ್ ಖಾಸಗೀಕರಣದ ಕುರಿತು ಪ್ರಸ್ತಾಪಿಸುತ್ತೇವೆ," ಎಂದು ಅವರು ಹೇಳಿದ್ದಾರೆ.