ಸಂಸತ್ತಿನ ಚಳಿಗಾಲದ ಅಧಿವೇಶನ: ಸರ್ಕಾರ ಕರೆದ ಸರ್ವಪಕ್ಷ ಸಭೆಗೆ ಮೋದಿ ಗೈರು
ನವದೆಹಲಿ, ನವೆಂಬರ್ 28: ನಾಳೆಯಿಂದ ಅಂದರೆ ನವೆಂಬರ್ 29 ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ಕಾರವು ಇಂದು ಸರ್ವ ಪಕ್ಷ ಸಭೆಯನ್ನು ಕರೆದಿತ್ತು. ಈ ಸರ್ವ ಪಕ್ಷ ಸಭೆಯ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಹಿಸಿಕೊಳ್ಳಲಿದ್ದಾರೆ ಎಂದು ವರದಿಯೂ ಆಗಿತ್ತು. ಆದರೆ ಸರ್ಕಾರ ಕರೆದ ಈ ಸರ್ವ ಪಕ್ಷ ಸಭೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಾರೆ.
ಚಳಿಗಾಲದ ಸಂಸತ್ತು ಅಧಿವೇಶನದ ಅಜೆಂಡಾ ಬಗ್ಗೆ ಚರ್ಚೆ ನಡೆಸುವ ಉದ್ದೇಶದಿಂದಾಗಿ ಈ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು. ಈ ಸಭೆಗೆ ವಿರೋಧ ಪಕ್ಷದ ನಾಯಕರುಗಳು ಹಾಜರಾಗಿದ್ದಾರೆ. ಸಭೆಯಲ್ಲಿ ಕಾಂಗ್ರೆಸ್ನಿಂದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ಆರ್ ಚೌಧರಿ ಹಾಗೂ ಆನಂದ್ ಶರ್ಮಾ ಹಾಜರಾಗಿದ್ದು, ಟಿಎಂಸಿಯಿಂದ ಸುದೀಪ್ ಬ್ಯಾನರ್ಜಿ ಹಾಗೂ ಡೆರೆಕ್ ಓಬ್ರಿಯಾನ್ ಹಾಜರಾಗಿದ್ದಾರೆ. ಇನ್ನು ಉಳಿದಂತೆ ಟಿಆರ್ ಬಾಲು ಹಾಗೂ ಟಿ ಶಿವ ಡಿಎಂಕೆ ಪಕ್ಷದ ಪರವಾಗಿ ಹಾಗೂ ಶರದ್ ಪವಾರ್ ಎನ್ಸಿಪಿ ಪಕ್ಷದ ಪರವಾಗಿ ಹಾಜರಾಗಿದ್ದಾರೆ.
ಸಂಸತ್ತು ಅಧಿವೇಶನದಲ್ಲಿ ಈ ವಿಚಾರಗಳನ್ನು ಎತ್ತಲಿದೆ ಕಾಂಗ್ರೆಸ್
ಇನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಭೆಗೆ ಹಾಜರು ಆಗದ ಬಗ್ಗೆ ಮಾತನಾಡಿದ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ, "ಇಂದು ನಡೆ ಸಭೆಗೆ ಪ್ರಧಾನಿ ಮೋದಿ ಹಾಜರಾಗುತ್ತಾರೆ ಎಂದು ನಾವು ನಿರೀಕ್ಷೆ ಹೊಂದಿದ್ದೆವು. ಆದರೆ ಕೆಲವು ಕಾರಣದಿಂದಾಗಿ ಪ್ರಧಾನಿ ಮೋದಿಯು ಈ ಸಭೆಗೆ ಹಾಜರಾಗಿಲ್ಲ," ಎಂದು ತಿಳಿಸಿದ್ದಾರೆ.
ಕೃಷಿ ಕಾನೂನನ್ನು ಬೇರೆ ಹೆಸರಲ್ಲಿ ತರಬಹುದೇ?
"ಸರ್ಕಾರವು ಕೃಷಿ ಕಾಯ್ದೆಯನ್ನು ಹಿಂದಕ್ಕೆ ಪಡೆದಿದೆ. ಆದರೆ ಈ ಘೋಷಣೆಯನ್ನು ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾವು ರೈತರಿಗೆ ಈ ಕೃಷಿ ಕಾಯ್ದೆಯನ್ನು ವಿವರಿಸುವಲ್ಲಿ ವಿಫಲವಾಗಿದ್ದೇವೆ ಎಂದು ಹೇಳಿದ್ದಾರೆ. ಅಂದರೆ ಈ ಕೃಷಿ ಕಾನೂನನ್ನು ಸರ್ಕಾರ ಬೇರೆಯೇ ಹೆಸರಲ್ಲಿ ಭವಿಷ್ಯದಲ್ಲಿ ಜಾರಿಗೆ ತರುವ ಸಾಧ್ಯತೆ ಇದೆ," ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ನಿಂದ ಸಾವನ್ನಪ್ಪಿದವರ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹ
ಈ ಸರ್ವ ಪಕ್ಷ ಸಭೆಯಲ್ಲಿ ವಿರೋಧ ಪಕ್ಷಗಳು ಕೊರೊನಾ ವೈರಸ್ ಸೋಂಕಿನಿಂದ ಸಾವನ್ನಪ್ಪಿದ ವ್ಯಕ್ತಿಗಳ ಕಟುಂಬಕ್ಕೆ ನಾಲ್ಕು ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಆಗ್ರಹ ಮಾಡಿದೆ. ರಾಜ್ಯ ಸಭೆಯ ವಿರೋಧ ಪಕ್ಷಗಳ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆದ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರಿಗೂ ಕೂಡಾ ಸರ್ಕಾರವು ಪರಿಹಾರವನ್ನು ನೀಡಬೇಕು," ಎಂದು ಒತ್ತಾಯ ಮಾಡಿದ್ದಾರೆ.
ಇನ್ನು ಸಂಸದೀಯ ವ್ಯವಹಾರಗಳ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, "ಈ ಸರ್ವ ಪಕ್ಷ ಸಭೆಯಲ್ಲಿ ಒಟ್ಟು 31 ಪಕ್ಷಗಳು ಭಾಗಿಯಾಗಿದ್ದಾರೆ. ಬೇರೆ ಬೇರೆ ಪಕ್ಷಗಳ 42 ನಾಯಕರುಗಳು ಈ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಸಭಾಧ್ಯಕ್ಷರು ಅನುಮತಿ ನೀಡಿದ ಯಾವುದೇ ಚರ್ಚೆಯನ್ನು ನಡೆಸಲು ಸರ್ಕಾರವು ಸಿದ್ಧವಾಗಿದೆ," ಎಂದು ತಿಳಿಸಿದರು.
ಸಂಸತ್ ಚಲೋ ಮುಂದೂಡಿಕೆ: ಕೇಂದ್ರ ಸರ್ಕಾರಕ್ಕೆ ಡಿಸೆಂಬರ್ 4ರ ಗಡುವು ವಿಧಿಸಿದ ರೈತರು
ಕಾಂಗ್ರೆಸ್ನಿಂದ ವಿಪ್ ಜಾರಿ
ಕಾಂಗ್ರೆಸ್ ಸಂಸದರಿಗೆ ಮೂರು ಸಾಲಿನ ವಿಪ್ ಅನ್ನು ಕಾಂಗ್ರೆಸ್ ಜಾರಿ ಮಾಡಿದೆ. ಸೋಮವಾರ ಸಂಸತ್ತಿಗೆ ಎಲ್ಲಾ ಕಾಂಗ್ರೆಸ್ ಸಂಸದರು ಹಾಜರು ಆಗಬೇಕು ಎಂದು ಕಾಂಗ್ರೆಸ್ ವಿಪ್ ಮೂಲಕ ಆದೇಶಿಸಿದೆ. ಪಕ್ಷದ ಸಂಸದರು ಕಾಂಗ್ರೆಸ್ ಪಕ್ಷದ ಎಲ್ಲಾ ನಿಲುವುಗಳಿಗೆ ಬದ್ಧವಾಗಿರಬೇಕು. ಕೃಷಿ ಕಾಯ್ದೆಯನ್ನು ರದ್ದು ಮಾಡುವ ಮಸೂದೆಯನ್ನು ಮಂಡನೆ ಮಾಡುವ ವೇಳೆ ಎಲ್ಲ ಕಾಂಗ್ರೆಸ್ ಸಂಸದರು ಇರಬೇಕು ಎಂದು ವಿಪ್ನಲ್ಲಿ ತಿಳಿಸಲಾಗಿದೆ.