ಚಳಿಗಾಲ ಅಧಿವೇಶನಕ್ಕೂ ಮೊದಲೇ 'ನಮೋ' ಸಂದೇಶ!
ನವದೆಹಲಿ, ನವೆಂಬರ್.18: ಕೇಂದ್ರ ಸರ್ಕಾರದ ಚಳಿಗಾಲ ಅಧಿವೇಶನದಲ್ಲಿ ಎಲ್ಲ ವಿಷಯಗಳ ಮುಕ್ತ ಚರ್ಚೆಗೆ ಸಿದ್ಧವೆಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಈ ಬಾರಿ ಅಧಿವೇಶನದ ಮಹತ್ವವೇನು ಎಂಬುದನ್ನು ವಿಪಕ್ಷ ಸದಸ್ಯರಿಗೂ ತಿಳಿಸಿದ್ದಾರೆ.
ನವೆಂಬರ್.18ರಿಂದ ಆರಂಭವಾಗಿರುವ ಚಳಿಗಾಲ ಅಧಿವೇಶನ ಡಿಸೆಂಬರ್.13ರವರೆಗೂ ನಡೆಯಲಿದೆ. 2019ರಲ್ಲಿ ನಡೆಯುತ್ತಿರುವ ಕೊನೆಯ ಅಧಿವೇಶನವಾಗಿದ್ದು, ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸಿ ಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲ ಸದಸ್ಯರಲ್ಲಿ ಮನವಿ ಮಾಡಿದ್ದಾರೆ.
ಇಂದಿನಿಂದ ಚಳಿಗಾಲದ ಅಧಿವೇಶನ: ಚರ್ಚೆಯಾಗಲಿರುವ ಪ್ರಮುಖ ಮಸೂದೆಗಳು
ಈ ಬಾರಿ ನಡೆಯುತ್ತಿರುವ ಅಧಿವೇಶನ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಇದು ರಾಜ್ಯಸಭೆಯಲ್ಲಿ ನಡೆಯುತ್ತಿರುವ 250ನೇ ಅಧಿವೇಶನವಾಗಿದೆ. ಇದೇ ನವೆಂಬರ್.26ರಂದು ನಾವು ಗಣರಾಜೋತ್ಸವವನ್ನು ಆಚರಿಸುತ್ತಿದ್ದೇವೆ. ಅಂದಿಗೆ ಭಾರತದ ಸಂವಿಧಾನ ರಚನೆಯಾಗಿ 70 ವರ್ಶಗಳು ಪೂರೈಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ ಸಂವಿಧಾನ ರಚನೆಯಾಗಿ 70 ವರ್ಷ ತುಂಬಲಿದ್ದು, ಅದರ ಬಗ್ಗೆ ದೇಶದ ಜನರಲ್ಲಿ ಅರಿವು ಮೂಡಿಸುವ ಕೆಲಸ ಆಗಬೇಕಿದೆ. ದೇಶದ ಅಭಿವೃದ್ಧಿಗೆ ಪೂರಕವಾಗಿರುವ ಸಂವಿಧಾನದ ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು.
ಕಳೆದ ಬಾರಿ ಸಂಸತ್ ಅಧಿವೇಶನ ಆರೋಗ್ಯಕರ ಚರ್ಚೆ ಮೂಲಕ ಸಂಪೂರ್ಣ ಯಶಸ್ವಿಯಾಗಿದ್ದು, ಅದಕ್ಕೆ ಎಲ್ಲ ಪಕ್ಷಗಳ ಸದಸ್ಯರು ಕಾರಣವಾಗಿದ್ದರು. ಕಳೆದ ಅಧಿವೇಶನದಲ್ಲಿ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ವಾಪಸ್ ಪಡೆಯುವ 370 ಕಾಯ್ದೆ, ತ್ರಿವಳಿ ತಲಾಖ್ ಸೇರಿದಂತೆ ಮಹತ್ವದ ಮಸೂದೆಗಳು ಪಾಸ್ ಆಗಿದ್ದವು.