'ಶೀಘ್ರದಲ್ಲೇ ಹಂಗಾಮಿ ಕುಂದುಕೊರತೆ ಅಧಿಕಾರಿ ನೇಮಕ': ಹೈಕೋರ್ಟ್ಗೆ ಟ್ವಿಟ್ಟರ್
ನವದೆಹಲಿ, ಜು. 03: ಭಾರತದಲ್ಲಿ ಶೀಘ್ರದಲ್ಲೇ ಭಾರತ ಮೂಲದ ಹಂಗಾಮಿ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟ್ಟರ್ ಇಂಡಿಯಾ ದೆಹಲಿ ಹೈಕೋರ್ಟ್ಗೆ ತಿಳಿಸಿದೆ. ಅಲ್ಲಿಯವರೆಗೆ, ಇತರ ಸಿಬ್ಬಂದಿಗಳು ದೂರುಗಳನ್ನು ಪರಿಹರಿಸುತ್ತಾರೆ ಎಂದು ಹೇಳಿದೆ.
ಸಾಮಾಜಿಕ ಜಾಲತಾಣ ದೈತ್ಯವಾದ ಟ್ವಿಟ್ಟರ್ ಈಗ ದೇಶದ ಐಟಿ ನಿಯಮಗಳ ಉಲ್ಲಂಘನೆಗೆ ಗುರಿಯಾಗಿದೆ. ಟ್ವಿಟ್ಟರ್ ವಿರುದ್ದ ದೂರನ್ನು ಟ್ಟಿಟ್ಟರ್ ಸಂಸ್ಥೆ ತ್ವರಿತವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿ ಬಳಕೆದಾರರು ಹೈಕೋರ್ಟ್ನಲ್ಲಿ ದಾಖಲಿಸಿದ್ದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಟ್ವಿಟ್ಟರ್ ಈ ಹೇಳಿಕೆ ನೀಡಿದೆ.
ಕ್ಯಾಲಿಫೋರ್ನಿಯಾದ ವ್ಯಕ್ತಿ ಟ್ವಿಟ್ಟರ್ನ ನೂತನ ಕುಂದುಕೊರತೆ ಅಧಿಕಾರಿ
"ಹೊಸ ಐಟಿ ನಿಯಮಗಳ ಪ್ರಕಾರ ಹಂಗಾಮಿ ಕುಂದುಕೊರತೆ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆದರೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಔಪಚಾರಿಕಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಮೊದಲೇ, ಅಧಿಕಾರಿ ತಮ್ಮ ಹುದ್ದೆಯನ್ನು ಜೂನ್ 21 ರಂದು ತೊರೆದಿದ್ದಾರೆ," ಎಂದು ಟ್ವಿಟ್ಟರ್ ಹೈಕೋರ್ಟ್ಗೆ ತಿಳಿಸಿದೆ.
"ನಾವು ಬದಲಿಯನ್ನು ನೇಮಿಸುವ ಅಂತಿಮ ಹಂತದಲ್ಲಿದ್ದೇವೆ. ಈ ಮಧ್ಯೆ, ಭಾರತೀಯ ಬಳಕೆದಾರರ ಕುಂದುಕೊರತೆಗಳನ್ನು ಸದ್ಯ ಇರುವ ಕುಂದುಕೊರತೆ ಅಧಿಕಾರಿ ತಿಳಿಸುತ್ತಿದ್ದಾರೆ," ಎಂದು ಹಿರಿಯ ವಕೀಲ ಮತ್ತು ಟ್ವಿಟ್ಟರ್ ಇಂಕ್ನ ದಾವೆದಾರರಾದ ಮೈಕಾ ಎಲ್ ರುಬ್ಬೊ ಸಲ್ಲಿಸಿದ ಅಫಿಡವಿಟ್ನಲ್ಲಿ ತಿಳಿಸಲಾಗಿದೆ.
"ಟ್ವಿಟ್ಟರ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿರುವುದರಿಂದ ಅರ್ಜಿಯನ್ನು ನಿರ್ವಹಿಸಲಾಗುವುದಿಲ್ಲ," ಎಂದು ಕೂಡಾ ಟ್ವಿಟ್ಟರ್ ಹೈಕೋರ್ಟ್ಗೆ ಹೇಳಿದೆ.
ತುಳುವನ್ನು ರಾಜ್ಯಭಾಷೆಯಾಗಿ ಘೋಷಿಸುವಂತೆ ಟ್ವಿಟರ್ ಅಭಿಯಾನ
ಭಾರತದಲ್ಲಿ ಮೇ 25 ರಿಂದ ಜಾರಿಗೆ ಬಂದ ಹೊಸ ನಿಯಮದ ಪ್ರಕಾರ ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಅಧಿಕಾರಿ ಮತ್ತು ಕುಂದುಕೊರತೆ ಅಧಿಕಾರಿ ಎಂಬ ಮೂರು ಪ್ರಮುಖ ಸಿಬ್ಬಂದಿಯನ್ನು ನೇಮಕ ಮಾಡಬೇಕಾಗಿದೆ. ಈ ಮೂವರೂ ಅಧಿಕಾರಿಗಳು ಭಾರತದ ನಿವಾಸಿಗಳಾಗಿರಬೇಕಾಗಿದೆ.
ಆದರೆ ಈ ಹೊಸ ಐಟಿ ನಿಯಮಗಳನ್ನು ಪಾಲಿಸುವಲ್ಲಿ ದೇಶದಲ್ಲಿ 1.75 ಕೋಟಿ ಬಳಕೆದಾರರನ್ನು ಹೊಂದಿರುವ ಟ್ವಿಟ್ಟರ್ ವಿಫಲವಾಗಿದೆ. ಈ ಹಿಂದೆ ಸರ್ಕಾರ ಟ್ವಿಟ್ಟರ್ ಉದ್ದೇಶಪೂರ್ವಕವಾಗಿ ನಿಯಮವನ್ನು ಧಿಕ್ಕರಿಸುತ್ತಿದೆ, ಐಟಿ ನಿಯಮಗಳನ್ನು ಪಾಲಿಸಲು ವಿಫಲವಾಗಿದೆ ಎಂದು ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿತ್ತು. ಬಳಿಕ ನೂತನ ಐಟಿ ನಿಯಮಗಳನ್ನು ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಕ ಮಾಡಲು ವಿಫಲವಾದ ಕಾರಣ ಟ್ವಿಟ್ಟರ್ ಭಾರತದಲ್ಲಿ ತನ್ನ ಕಾನೂನಾತ್ಮಕ ರಕ್ಷಣೆ ಕಳೆದುಕೊಂಡಿದೆ.
(ಒನ್ಇಂಡಿಯಾ ಸುದ್ದಿ)