ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕೇಳಿ ಬಂತು ಅಚ್ಚರಿಯ ಹೆಸರು!
Recommended Video
ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನದ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ಎಲ್ಲವೂ ಸರಿಯಿಲ್ಲ. ಸೋಲಿನ ನೈತಿಕ ಹೊಣೆ ಹೊತ್ತು ಎಐಸಿಸಿ ಅಧ್ಯಕ್ಷ ಸ್ಥಾನ ತೊರೆಯಲು ರಾಹುಲ್ ಗಾಂಧಿ ಮುಂದಾದರೂ ಪಕ್ಷದ ಹಿರಿಯ ಮುಖಂಡರು ಒಪ್ಪುತ್ತಿಲ್ಲ. ಈ ನಡುವೆ ಹೊಸ ಅಧ್ಯಕ್ಷರ ನೇಮಕಾತಿ ಸಭೆಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ರಾಹುಲ್ ಘೋಷಿಸಿದ್ದಾರೆ.
ಈ ನಡುವೆ ಗಾಂಧಿ-ನೆಹರು ಮನೆತನಯೇತರ ಹಿರಿಯ ಮುಖಂಡರೊಬ್ಬರನ್ನು ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಲು ಸಿದ್ಧತೆ ಜೋರಾಗಿ ನಡೆದಿರುವ ಸುದ್ದಿ ಬಂದಿದೆ. ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರಿಂದ ಲೋಕಸಭಾ ನಾಯಕನ ಸ್ಥಾನಕ್ಕೆ ಅಧೀರ್ ರಂಜನ್ ಚೌಧುರಿ ಅವರನ್ನು ಆಯ್ಕೆ ಮಾಡಿ ಅಚ್ಚರಿ ಮೂಡಿಸಲಾಗಿದೆ.
ಇದರ ಜೊತೆಗೆ ಬಿಜೆಪಿಯಲ್ಲಿ ಕಾರ್ಯಾಧ್ಯಕ್ಷ ಸ್ಥಾನ ನೇಮಕವಾದಂತೆ ಕಾಂಗ್ರೆಸ್ ನಲ್ಲೂ ಈ ಹುದ್ದೆಯನ್ನು ಸೃಷ್ಟಿಸಲು ಒಂದು ತಿಂಗಳಿನಿಂದ ಚರ್ಚೆ ನಡೆದಿದೆ. ಈ ಮೂಲಕ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅವರನ್ನು ಮುಂದುವರೆಸಿದರೂ, ಕಾರ್ಯಾಧ್ಯಕ್ಷರಿಗೆ ಹೊಣೆ ನೀಡುವುದು ಹೈಕಮಾಂಡ್ ನ ನಿರ್ಧಾರವಾಗಿತ್ತು. ಆದರೆ, ಈ ಹುದ್ದೆ, ನೇಮಕಾತಿ ಬಗ್ಗೆ ಯಾರೂ ಆಸಕ್ತ ತೋರಲಿಲ್ಲ. ಹೀಗಾಗಿ, ಪೂರ್ಣಾವಧಿ ಹೊಸ ಅಧ್ಯಕ್ಷರನ್ನು ನೇಮಿಸುವುದು ಅನಿವಾರ್ಯವಾಗಿದೆ.
ಮುಂದಿನ ಮೂರು ಚುನಾವಣೆಯ ಮೇಲೆ ಗುರಿ
ಮಹಾರಾಷ್ಟ್ರ, ಹರ್ಯಾಣ, ಜಾರ್ಖಂಡ್, ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಕುರಿತಂತೆ ಪಕ್ಷದ ಕಾರ್ಯತಂತ್ರ ಕುರಿತು ಹಿರಿಯ ನಾಯಕ ಎಕೆ ಎಂಟನಿ ನೇತೃತ್ವದಲ್ಲಿ ಅನೌಪಚಾರಿಕ ಸಭೆ ನಡೆದ ಬಳಿಕ ರಾಹುಲ್ ಅವರ ಅಧ್ಯಕ್ಷ ಸ್ಥಾನದ ಬಗ್ಗೆ ಹಬ್ಬಿದ ಸುದ್ದಿಗೆ ರಣದೀಪ್ ಅವರು ಪ್ರತಿಕ್ರಿಯಿಸಿ, ರಾಹುಲ್ ಅವರೆ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ ಎಂದಿದ್ದರು. ಆದರೆ, ಈಗ ರಾಹುಲ್ ಸ್ಥಾನಕ್ಕೆ ಅಚ್ಚರಿಯ ಹೆಸರು ಕೇಳಿ ಬಂದಿದೆ. ಹೊಸ ಅಧ್ಯಕ್ಷ ಅಥವಾ ಕಾರ್ಯಾಧ್ಯಕ್ಷ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.
ಅಧ್ಯಕ್ಷ ಸ್ಥಾನ ತೊರೆಯಲು ಸಿದ್ಧವಾದ ರಾಹುಲ್
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲುಂಟಾದ ನಂತರ ಮೇ 25ರಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದ್ದರೂ, ಸಭೆ ಒಪ್ಪಿರಲಿಲ್ಲ. ಅಲ್ಲದೆ, ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ಅವರನ್ನು ಕೋರಿದ್ದರು. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ.ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದಾರೆ.
ಸೋಲಿನ ವಿಮರ್ಶೆ ಸಭೆಯಲ್ಲಿ ರಾಹುಲ್ ಗರಂ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕಿಂತ ತಮ್ಮ ಕುಟುಂಬಕ್ಕೇ ಹೆಚ್ಚಿನ ಪ್ರಾಶಸ್ತ್ಯ ನೀಡಿ, ತಮ್ಮ ಮಕ್ಕಳಿಗೆ ಟಿಕೆಟ್ ದೊರಕಿಸುವಲ್ಲಿ ಯಶಸ್ವಿಯಾಗಿದ್ದ ಮಧ್ಯ ಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್, ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರ ವಿರುದ್ಧ ರಾಹುಲ್ ಗಾಂಧಿ ಸಭೆಯಲ್ಲಿಯೇ ಗರಂ ಆಗಿದ್ದರು. ಈ ಸಮಯದಲ್ಲಿ ಪಿ ಚಿದಂಬರಂ ಅವರು ಭಾವುಕರಾಗಿದ್ದರು ಎಂದು ತಿಳಿದುಬಂದಿದೆ. ಆದರೆ, ಹಿರಿಯ ನಾಯಕರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಬದಲಿಗೆ ಅವರ ಅಭಿಪ್ರಾಯದಂತೆ ಪಕ್ಷ ಕಟ್ಟುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಸಂಘಟನಾ ಚತುರ ಅಶೋಕ್ ಗೆಹ್ಲೋಟ್
68 ವರ್ಷ ವಯಸ್ಸಿನ ಗೆಹ್ಲೋಟ್ ಅವರು ಅಧ್ಯಕ್ಷ ಸ್ಥಾನದ ರೇಸಿನಲ್ಲಿ 'ಡಾರ್ಕ್ ಹಾರ್ಸ್' ಎಂದು ಪರಿಗಣಿಸಲಾಗಿದೆ. ಸದ್ಯ ರಾಹುಲ್ ಅವರಿಗೆ ಗೆಹ್ಲೋಟ್ ಮೇಲೆ ಸಿಟ್ಟಿದ್ದರೂ, ಸಂಘಟನೆ ವಿಚಾರದಲ್ಲಿ ಗೆಹ್ಲೋಟ್ ಅಗ್ರಗಣ್ಯರಾಗಿದ್ದು, ಅನುಭವವೇ ಅವರಿಗೆ ಶ್ರೀರಕ್ಷೆಯಾಗಿ ಉನ್ನತ ಹುದ್ದೆಯತ್ತ ಕರೆದೊಯ್ಯಬಹುದು ಎಂದು ನಂಬಲಾಗಿದೆ.
ಎಐಸಿಸಿ ಅಧ್ಯಕ್ಷರಾದ ಬಲಿಕ ರಾಹುಲ್, ಗೆಹ್ಲೋಟ್ ಅವರಿಗೆ ಎಐಸ್ಸಿಸಿ ಕಾರ್ಯದರ್ಶಿ ಸ್ಥಾನ ನೀಡಿದ್ದರು. ಗುಜರಾತ್ ವಿಧಾನಸಭೆ ಚುನಾವಣೆ ಉಸ್ತುವಾರಿಯನ್ನು ನೀಡಲಾಗಿತ್ತು. ಐದು ಬಾರಿ ಸಂಸದ, ಮೂರು ಬಾರಿ ಕ್ಯಾಬಿನೆಟ್ ಸಚಿವ, ಮೂರು ಬಾರಿ ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ, ಮೂರು ಬಾರಿ ಸಿಎಂ ಆಗಿ ಅನುಭವ ಹೊಂದಿದ್ದು, ಗಾಂಧಿ ಮನೆತನಕ್ಕೆ ನಿಷ್ಠರಾಗಿದ್ದಾರೆ.