ಬ್ರಿಟನ್ನಿಂದ ಮರಳಿದವರ ಪತ್ತೆ ಯಾಕಿಷ್ಟು ತಲೆನೋವಾಗಿದೆ ಗೊತ್ತಾ...
ನವದೆಹಲಿ, ಡಿಸೆಂಬರ್ 30: ಬ್ರಿಟನ್ ನಲ್ಲಿ ಈಚೆಗೆ ಕೊರೊನಾ ರೂಪಾಂತರ ಸೋಂಕು ಪತ್ತೆಯಾಗಿದ್ದು, ಅತಿ ವೇಗಿಯಾಗಿರುವ ಈ ಸೋಂಕಿನ ಹರಡುವಿಕೆ ತಡೆಗಟ್ಟಲು ಹಲವು ದೇಶಗಳು ಕಟ್ಟೆಚ್ಚರ ವಹಿಸಿವೆ.
ರೂಪಾಂತರ ಸೋಂಕು ಪತ್ತೆಯಾಗುತ್ತಿದ್ದಂತೆ ಹಲವು ದೇಶಗಳು ಬ್ರಿಟನ್ ನಿಂದ ವಿಮಾನ ಯಾನವನ್ನು ರದ್ದುಗೊಳಿಸಿದವು. ಡಿ.23ರಿಂದ ವಿಮಾನಗಳನ್ನು ರದ್ದುಗೊಳಿಸಿದ್ದು, ಹದಿನಾಲ್ಕು ದಿನಗಳ ಹಿಂದೆ ಬ್ರಿಟನ್ ನಿಂದ ಹಿಂದಿರುಗಿದವರ ಪತ್ತೆ ಮಾಡಿ ಪರೀಕ್ಷೆ ನಡೆಸಲು ಭಾರತ ಸರ್ಕಾರ ಮುಂದಾಯಿತು. ಆದರೆ ಬ್ರಿಟನ್ ನಿಂದ ಮರಳಿದವರಲ್ಲಿ ಎಷ್ಟೋ ಮಂದಿಯ ಪತ್ತೆ ಇನ್ನೂ ಸಾಧ್ಯವಾಗಿಲ್ಲ. ಪತ್ತೆಯಾದವರು ಕೂಡ ಆರೋಗ್ಯ ಅಧಿಕಾರಿಗಳೊಂದಿಗೆ ಸಹಕರಿಸುತ್ತಿಲ್ಲ ಎಂದು ತಿಳಿದುಬಂದಿದೆ. ಬುಧವಾರ ಭಾರತದಲ್ಲಿ 20 ಮಂದಿಯಲ್ಲಿ ಈ ರೂಪಾಂತರ ಸೋಂಕು ಪತ್ತೆಯಾಗಿರುವುದು ಆತಂಕವನ್ನು ಇನ್ನಷ್ಟು ಹೆಚ್ಚಿಸಿದೆ. ಮುಂದೆ ಓದಿ...
ತಲೆನೋವಾದ ಪತ್ತೆ ಕೆಲಸ
ಬ್ರಿಟನ್ ನಿಂದ ಹಿಂದಿರುಗಿದ ಕೆಲವರಿಗೆ ಈ ಕೊರೊನಾ ರೂಪಾಂತರ ಸೋಂಕು ತಗುಲಿರಬಹುದಾದ ಸಾಧ್ಯತೆ ಇರುವುದರಿಂದ ಅವರ ಪತ್ತೆಗೆ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ. ಆದರೆ ಸೂಕ್ತ ಮಾಹಿತಿ ಸಿಗದೇ ಇರುವುದು ತಲೆ ನೋವಾಗಿದೆ. ಅತಿ ವೇಗವಾಗಿ ಈ ಸೋಂಕು ಹರಡಬಲ್ಲದ್ದರಿಂದ ಶೀಘ್ರವೇ ಪತ್ತೆ ಕಾರ್ಯವೂ ನಡೆಯುವುದು ಅವಶ್ಯಕವಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ವೈರಸ್ ರೂಪಾಂತರ ಪರೀಕ್ಷೆ
ಟ್ರ್ಯಾಕ್ ಮಾಡುವುದು ಕಷ್ಟವಾಗುತ್ತಿದೆ ಏಕೆ?
ಬ್ರಿಟನ್ ನಿಂದ ಹಿಂದಿರುಗಿದವರನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರಗಳು ಹೆಚ್ಚು ಸಮಯ ತೆಗೆದುಕೊಳ್ಳುತ್ತಿವೆ. ಇದಕ್ಕೆ ಮುಖ್ಯ ಕಾರಣ, ಬ್ರಿಟನ್ ನಿಂದ ಬಂದಿರುವವರು ಸರಿಯಾದ ವಿಳಾಸ ಹಾಗು ಮೊಬೈಲ್ ನಂಬರ್ ನೀಡದೇ ಇರುವುದು. ಹಲವು ಪ್ರಕರಣಗಳಲ್ಲಿ, ಬ್ರಿಟನ್ ನಲ್ಲಿ ಬಳಸುತ್ತಿದ್ದ ನಂಬರ್ ಗಳು ದೊರೆತಿವೆ. ಆದರೆ ಭಾರತದಲ್ಲಿ ಬೇರೆ ನಂಬರ್ ಬಳಸುತ್ತಿದ್ದಾರೆ ಎಂಬುದು ಅಧಿಕಾರಿಗಳಿಗೆ ತಿಳಿದುಬಂದಿದೆ.
ಅರ್ಧಂಬರ್ಧ ವಿಳಾಸ ನೀಡಿರುವ ಪ್ರಯಾಣಿಕರು
ಬ್ರಿಟನ್ ನಿಂದ ಬಂದವರು ವಿಳಾಸ ನೀಡಿರುವುದು ಹೌದಾದರೂ, ಅದರಲ್ಲಿ ಅರ್ಧಂಬರ್ಧ ಮಾಹಿತಿ ಕೊಟ್ಟಿದ್ದಾರೆ. ಮನೆಯ ನಂಬರ್, ಬೀದಿ, ನಗರ ಯಾವುದನ್ನೂ ಸರಿಯಾಗಿ ನಮೂದಿಸಿಲ್ಲ. ಹೋಟೆಲ್ ವಿಳಾಸ ನೀಡಿರುವ ಹಲವು ಪ್ರಕರಣಗಳೂ ಇವೆ. ಕೆಲವರು ಇಲ್ಲಿಗೆ ಬಂದು ವಾಪಸ್ ಬ್ರಿಟನ್ ಗೆ ಮರಳಿ ಹೋಗಿದ್ದಾರೆ. ಮೊದಲು ಡಿಸೆಂಬರ್ 7ರ ನಂತರ ಮರಳಿದವರಿಗೆ ಮಾತ್ರ ಪರೀಕ್ಷೆ ಕಡ್ಡಾಯಗೊಳಿಸಲಾಗಿತ್ತು. ಈಗ ನವೆಂಬರ್ 25ರಿಂದ ಡಿಸೆಂಬರ್ 6ರವರೆಗೆ ಪಯಣಿಸಿದವರ ಮೇಲೂ ನಿಗಾ ಇಡಲಾಗಿದೆ.
ರೂಪಾಂತರಿ ವೈರಸ್ ಇತರೆ ಸೋಂಕಿಗಿಂತ ತೀವ್ರ ಅನಾರೋಗ್ಯ ಸೃಷ್ಟಿಸದು: ಅಧ್ಯಯನ
ಕರ್ನಾಟಕದಲ್ಲಿ ಇನ್ನೂ 570 ಮಂದಿ ಪತ್ತೆಯಾಗಿಲ್ಲ
ನವೆಂಬರ್ ಕೊನೆ ವಾರದಲ್ಲಿ ಬ್ರಿಟನ್ ನಿಂದ ಮರಳಿದವರಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನವರು ಹೆಚ್ಚು ಮಂದಿ ಇದ್ದಾರೆ. ಕರ್ನಾಟಕದಲ್ಲಿ ಬ್ರಿಟನ್ ನಿಂದ ಒಟ್ಟು 2406 ಮಂದಿ ಬಂದಿದ್ದು, ಇದರಲ್ಲಿ 570 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಕರ್ನಾಟಕ ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ. ತೆಲಂಗಾಣದಲ್ಲಿ 1,100 ಮಂದಿಯಲ್ಲಿ 279 ಮಂದಿ ಪತ್ತೆಯಾಗಿಲ್ಲ. ತಮಿಳುನಾಡಿನಲ್ಲಿ ಈವರೆಗೆ 2,200 ಮಂದಿ ಪತ್ತೆ ಹಚ್ಚಲಾಗಿದೆ. ಒಡಿಶಾದಲ್ಲಿ 27 ಮಂದಿ ಹಾಗೂ ಉತ್ತರಾಖಂಡದಲ್ಲಿ 20 ಮಂದಿ ಪತ್ತೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ 1655 ರಲ್ಲಿ 568 ಮಂದಿ ಸುಳಿವು ಸಿಕ್ಕಿಲ್ಲ ಎನ್ನಲಾಗಿದೆ