ರಫೇಲ್, ನೋಟು ನಿಷೇಧದ ಆಡಿಟ್ ವರದಿ ತಡ, ರಾಷ್ಟ್ರಪತಿಗೆ ನಿವೃತ್ತ ಅಧಿಕಾರಿಗಳಿಂದ ಪತ್ರ
ನವದೆಹಲಿ, ನವೆಂಬರ್ 13: 2016ರ ಅಪನಗದೀಕರಣ ಹಾಗೂ ರಫೇಲ್ ವ್ಯವಹಾರದ ಬಗ್ಗೆ ಆಡಿಟ್ ವರದಿ ನೀಡಲು ಸಿಎಜಿ ಏಕೆ 'ಅನಗತ್ಯ ಹಾಗೂ ಅನಿರೀಕ್ಷಿತ' ತಡ ಮಾಡುತ್ತಿದೆ ಎಂದು ಪ್ರಶ್ನಿಸಿ, ಅರವತ್ತು ಮಂದಿ ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಗೆ ಬರೆದ ಪತ್ರದಲ್ಲಿ ಪ್ರಶ್ನೆ ಮಾಡಿದ್ದಾರೆ.
ರಾಮ್ ನಾಥ್ ಕೋವಿಂದ್ ಗೆ ಬಹಿರಂಗ ಪತ್ರ ಬರೆದಿದ್ದು, ಸದ್ಯದ ಕೇಂದ್ರ ಸರಕಾರಕ್ಕೆ ಮುಂದಿನ ಲೋಕಸಭಾ ಚುನಾವಣೆ ವೇಳೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ಆಡಿಟ್ ವರದಿ ನೀಡಲು ಸಿಎಜಿ ಅನಗತ್ಯವಾಗಿ ತಡ ಮಾಡುತ್ತಿದೆ ಎಂಬ ಭಾವ ಮೂಡುತ್ತದೆ ಎಂದು ಅಧಿಕಾರಿಗಳು ಪತ್ರದಲ್ಲಿ ತಿಳಿಸಿದ್ದಾರೆ.
ಅಪನಗದೀಕರಣ ವ್ಯವಸ್ಥಿತ ಹಣಕಾಸು ಅಪರಾಧ ಹಗರಣ: ರಾಹುಲ್ ಗಾಂಧಿ
2G ಹಗರಣ, ಕಲ್ಲಿದ್ದಲು ಹಗರಣ, ಆದರ್ಶ್ ಹಾಗೂ ಕಾಮನ್ ವೆಲ್ತ್ ಹಗರಣಗಳ ಬಗ್ಗೆ ಆಡಿಟ್ ವರದಿಯಿಂದ ಆಗಿನ ಸರಕಾರದ ಬಗ್ಗೆ ಜನರ ಗ್ರಹಿಕೆ ಬದಲಾಯಿತು. ವಿವಿಧ ವಲಯಗಳಿಂದ ಆ ಬಗ್ಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು ಎಂದಿದ್ದಾರೆ.
ನೋಟು ನಿಷೇಧ ಹಾಗೂ ರಫೇಲ್ ವ್ಯವಹಾರದ ಬಗ್ಗೆ ಆಡಿಟ್ ವರದಿ ನೀಡಲು ವಿಫಲ ಆಗಿರುವ ಸಿಎಜಿ ನಡೆಯು ಅನುಮಾನ ಮೂಡಿಸುವಂತಿದೆ. ವಿವಿಧ ಪಕ್ಷಗಳು ಮಾಧ್ಯಮಗಳಲ್ಲಿ ಕೆಸರೆರಚಾಟ ನಡೆಸುತ್ತಿವೆಯೇ ಹೊರತು ವಾಸ್ತವ ಏನು ಎಂಬುದು ಜನರಿಗೆ ಗೊತ್ತಿಲ್ಲ. ಸಿಎಜಿಯಿಂದ ಸರಿಯಾದ ಸಮಯಕ್ಕೆ ಆಡಿಟ್ ವರದಿ ಸಲ್ಲಿಕೆ ಆಗಬೇಕು ಎಂದು ಕೇಳುವ ಹಕ್ಕು ಜನರಿಗಿದೆ. ಅದನ್ನು ನೋಡಿ, ಯಾರಿಗೆ ಮತ ಹಾಕಬೇಕು ಎಂದು ನಿರ್ಧರಿಸಬಹುದು ಎಂದು ಪತ್ರದಲ್ಲಿ ಹೇಳಲಾಗಿದೆ.
ರಫೇಲ್ ವ್ಯವಹಾರಕ್ಕೆ 2015ರ ಏಪ್ರಿಲ್ ನಲ್ಲಿ, ಅಪನಗದೀಕರಣವನ್ನು 2016ರ ನವೆಂಬರ್ ನಲ್ಲಿ ಮಾಡಲಾಗಿದೆ. ಆದರೆ ಆಡಿಟರ್ ಈ ವರೆಗೆ ಇವೆರಡರ ಬಗ್ಗೆ ವರದಿ ನೀಡಿಲ್ಲ. ಆದಷ್ಟು ಬೇಗ ವರದಿ ಪೂರ್ಣಗೊಳಿಸಿ, ಚಳಿಗಾಲದ ಅಧಿವೇಶನದ ವೇಳೆ ಸಂಸತ್ ನ ಮುಂದಿಡಬೇಕು ಎಂದು ನಿವೃತ್ತ ಅಧಿಕಾರಿಗಳು ಆಗ್ರಹಿಸಿದ್ದಾರೆ.
ಥಗ್ಸ್ ಆಫ್ ಹಿಂದೂಸ್ತಾನ್, ಅಪನಗದೀಕರಣಕ್ಕೆ ಎರಡು ವರ್ಷ, ಕಾಲೆಳೆವ ಟ್ವೀಟ್ಸ್
ಈ ಹಿಂದೆ ಯಾವಾಗಲೂ ಸಿಎಜಿಯು ಸರಕಾರದಿಂದ ಪ್ರಭಾವಕ್ಕೆ ಒಳಗಾಗಿದೆ ಎಂಬ ಆರೋಪ ಬಂದಿಲ್ಲ. ಅಥವಾ ಅದರ ಸಾಂವಿಧಾನಿಕ ಕರ್ತವ್ಯವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಿ ಎಂದು ನೆನಪಿಸುವ ಪ್ರಮೇಯ ಕೂಡ ಇರಲಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಎಸ್.ಪಿ.ಆಂಬ್ರೋಸ್, ಎನ್.ಬಾಲಭಾಸ್ಕರ್, ಎನ್.ಸಿ.ಸಕ್ಸೇನಾ, ಜಿ.ಬಾಲಚಂದ್ರನ್, ಗೋಪಾಲನ್ ಬಾಲಗೋಪಾಲ್ ಮತ್ತು ಜವಹರ್ ಸಿರ್ಕಾರ್ ಮತ್ತಿತರರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.