ವಾರಣಾಸಿಯಲ್ಲಿ ಸ್ಪರ್ಧಿಸಲ್ಲ ಎಂದು ಪ್ರಿಯಾಂಕಾ ಬಹಿರಂಗವಾಗಿ ಹೇಳಿಲ್ಲವೇಕೆ?
Recommended Video
ನವದೆಹಲಿ, ಏಪ್ರಿಲ್ 26 : ಕಾಂಗ್ರೆಸ್ ಹೈಕಮಾಂಡ್ ಮತ್ತು ಅಣ್ಣ ರಾಹುಲ್ ಗಾಂಧಿ ಇಚ್ಛಿಸಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದ ಪ್ರಿಯಾಂಕಾ ವಾದ್ರಾ ಅವರು ಇದ್ದಕ್ಕಿದ್ದಂತೆ ಸ್ಪರ್ಧೆಯಿಂದ ಹಿಂದೆಗೆಯಲು ಕಾರಣವೇನು? ಇದು ಅವರ ಸ್ವಂತ ನಿರ್ಧಾರವೆ?
ಇದು ಪ್ರಿಯಾಂಕಾ ವಾದ್ರಾ ಅವರ ಸ್ವಂತ ನಿರ್ಧಾರವೇ ಆಗಿದ್ದರೆ, ಉತ್ತರ ಪ್ರದೇಶದ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಂತೆ ಇದನ್ನು ಅವರು ಬಹಿರಂಗವಾಗಿ ಎಲ್ಲಿಯೂ ಏಕೆ ಹೇಳಿಲ್ಲ?
ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಅಜಯ್ ರೈ ಕಣಕ್ಕೆ
ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಲು ನಾಲ್ಕು ದಿನ ಇದೆಯೆನ್ನುವಾಗ, ಪ್ರಧಾನಿ ನರೇಂದ್ರ ಮೋದಿಯವರು ವಾರಣಾಸಿಯಲ್ಲಿ ಭರ್ಜರಿ ರೋಡ್ ಶೋ ಮಾಡುತ್ತಿರುವ ಸಂದರ್ಭದಲ್ಲಿಯೇ, ಪ್ರಿಯಾಂಕಾ ಗಾಂಧಿ ಅವರು ಸ್ಪರ್ಧಿಸುವುದಿಲ್ಲ ಎಂದು ಹೇಳುವ ಬದಲು, ಬದಲಿ ಅಭ್ಯರ್ಥಿಯನ್ನು (ಅಜಯ್ ರೈ) ಕಾಂಗ್ರೆಸ್ ಕಣಕ್ಕಿಳಿಸಿದೆ.
ಆದರೆ, ಪ್ರಿಯಾಂಕಾ ಅವರು ಈ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕಾಂಗ್ರೆಸ್ ಹೈಕಮಾಂಡ್ ಎಲ್ಲಿಯೂ ಬಹಿರಂಗ ಹೇಳಿಕೆ ನೀಡಿಲ್ಲ. ವಿದೇಶದಲ್ಲಿ ಕಾಂಗ್ರೆಸ್ ಪ್ರತಿನಿಧಿಯಾಗಿರುವ ಸ್ಯಾಮ್ ಪಿತ್ರೋಡಾ ಅವರು, ಪ್ರಿಯಾಂಕಾ ಅವರು ಪಕ್ಷವನ್ನು ಗೆಲ್ಲಿಸಲು ಶ್ರಮಿಸಲಿದ್ದಾರೆ ಎಂದು ಹೇಳಿದ್ದಾರಷ್ಟೆ.
ತಮ್ಮ ಮೊದಲ ಚುನಾವಣೆಯಲ್ಲಿ ಪ್ರಿಯಾಂಕಾ ವಾದ್ರಾ ಅವರು ಸೋಲಬಾರದು, ಅದೂ ಕುಟುಂಬದ ಬದ್ಧವೈರಿ ಪ್ರಧಾನಿ ನರೇಂದ್ರ ಮೋದಿ ಎದುರಿನಲ್ಲಿ, ಎಂದು ಕಾಂಗ್ರೆಸ್ ಹೈಕಮಾಂಡ್ ಈ ನಿರ್ಧಾರಕ್ಕೆ ಬಂದಿತೆ? ಮೇಲ್ನೋಟಕ್ಕೆ ಇದೇ ಸರಿಯಾದ ಕಾರಣ ಎಂದು ಕಾಣಿಸುತ್ತಿದೆ.
ವಾರಣಾಸಿಯಿಂದ ಪ್ರಿಯಾಂಕಾ ವಾದ್ರಾ ಸ್ಪರ್ಧಿಸದಿರಲು ಕಾರಣವೇನು?
ಜೊತೆಗೆ, ಪ್ರಿಯಾಂಕಾ ಅವರುನ್ನು ಬೇರೆ ಯಾವುದಾದರೂ, ಸುಲಭವಾಗಿ ಗೆಲ್ಲಬಹುದಾದ ಕ್ಷೇತ್ರದಿಂದ ನಿಲ್ಲಿಸಬಹುದು ಎಂದೂ ಕಾಂಗ್ರೆಸ್ ಯೋಚಿಸುತ್ತಿದೆ. ಹಾಗೆ ನೋಡಿದರೆ, ಸೋನಿಯಾ ಅವರು ಸ್ಪರ್ಧಿಸುತ್ತಿರುವ ರಾಯ್ ಬರೇಲಿಯಿಂದಲೇ ಪ್ರಿಯಾಂಕಾ ವಾದ್ರಾ ಅವರು ಸ್ಪರ್ಧಿಸಿದ್ದರೆ ಸುಲಭವಾಗಿ ಗೆಲ್ಲಬಹುದಿತ್ತು.
ಈ ಎಲ್ಲ ವಿಷಯಗಳ ಜೊತೆಗೆ ಮತ್ತೊಂದು ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ರಾಹುಲ್ ಗಾಂಧಿ ಅವರು ಎರಡು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಒಂದು ಉತ್ತರ ಪ್ರದೇಶದ ಅಮೇಥಿ. ಇಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಟಕ್ಕರ್ ನೀಡಿದ್ದಾರೆ. ಮತ್ತೊಂದು, ಕೇರಳದ ವಯನಾಡು. ಇಲ್ಲಿ ಸುಲಭವಾಗಿ ಗೆಲ್ಲುವ ಸಾಧ್ಯತೆ ಹೆಚ್ಚು.
ಒಂದು ವೇಳೆ ರಾಹುಲ್ ಗಾಂಧಿ ಅವರು ಅಮೇಥಿ ಮತ್ತು ವಯನಾಡಿನೆರಡರಿಂದಲೂ ಗೆದ್ದು, ಅಮೇಥಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿದರೆ ಮತ್ತೊಮ್ಮೆ ಚುನಾವಣೆ ನಡೆಯಲೇಬೇಕಲ್ಲ. ಆಗ, ಆ ಕ್ಷೇತ್ರದಿಂದ ಪ್ರಿಯಾಂಕಾ ವಾದ್ರಾ ಅವರನ್ನು ನಿಲ್ಲಿಸಬಹುದು ಎಂಬ ಲೆಕ್ಕಾಚಾರವೇ ಅದು.
ಆದರೆ, ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರು 'ಮಾತಿನ ರಾಣಿ' ಸ್ಮೃತಿ ಇರಾನಿ ವಿರುದ್ಧ ಸುಲಭವಾಗಿ ಗೆಲ್ಲುತ್ತಾರಾ? ಗೆಲ್ಲುವುದು ಕಷ್ಟವೆನ್ನಿಸದಿದ್ದರೆ ಅವರು ವಯನಾಡನ್ನು ಏಕೆ ಆಯ್ದುಕೊಂಡರು? ಅಥವಾ ಅಮೇಥಿಯಲ್ಲಿ ಸ್ಮೃತಿ ಇರಾನಿ ವಿರುದ್ಧ ಸೋಲನನುಭವಿಸಿದರೆ ಮುಂದೇನು?
ವಾರಣಾಸಿಯಲ್ಲಿ ಮೋದಿ ವಿರುದ್ಧ ಸೋಲುವ ಭಯದಿಂದ ಪ್ರಿಯಾಂಕಾ ವಾದ್ರಾ ಪಲಾಯನ ಮಾಡಿದರೆ? ಅಥವಾ ಬೇರೊಂದು ಕ್ಷೇತ್ರದಿಂದ ಸ್ಪರ್ಧಿಸುವ ಇರಾದೆಯಿದೆಯೆ? ಅಥವಾ ಚುನಾವಣಾ ರಹಿತ ರಾಜಕಾರಣಕ್ಕೆ ಸೀಮಿತವಾಗುತ್ತಾರಾ? ಇತ್ಯಾದಿ ಉತ್ತರವಿಲ್ಲದ ಪ್ರಶ್ನೆಗಳು ಕಾಡುತ್ತಿವೆ.