ಕೃಷಿ ಕಾಯ್ದೆ: ವಿರೋಧ ಪಕ್ಷಗಳ ವಿರೋಧಕ್ಕೆ ಸಚಿವರ ಹೊಸ ಅರ್ಥ!
ನವದೆಹಲಿ, ಮಾರ್ಚ್.07: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಾದಿತ ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವುದಕ್ಕೆ ನಾವು ಸಿದ್ಧರಿದ್ದೇವೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕೃಷಿ ಕಾಯ್ದೆಗಳನ್ನು ತಿದ್ದುಪಡಿ ಮಾಡುವುದಕ್ಕೆ ಸಿದ್ಧವಿದೆ. ಆದರೆ ಇಡೀ ಕಾಯ್ದೆಗಳೇ ದೋಷಪೂರಿತವಾಗಿವೆ ಎನ್ನುವ ವಾದವನ್ನು ಒಪ್ಪಿಕೊಳ್ಳುವುದಕ್ಕೆ ಆಗುವುದಿಲ್ಲ ಎಂದು ಹೇಳಿದ್ದಾರೆ.
Explained: ಕೇಂದ್ರದ ಚಳಿ ಬಿಡಿಸಿತಾ ರೈತರ ಒಂದೇ ಒಂದು ನಿರ್ಧಾರ!?
ನವದೆಹಲಿ ಗಡಿ ಪ್ರದೇಶಗಳಲ್ಲಿ 2020ರ ನವೆಂಬರ್.26ರಿಂದ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆಗೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಹಲವು ಸುತ್ತಿನ ಸಂಧಾನ ಮಾತುಕತೆಗಳನ್ನು ನಡೆಸಿದ್ದರು. ರೈತರ ಪ್ರತಿಭಟನೆಗೆ 100ನೇ ದಿನಕ್ಕೆ ಕಾಲಿಟ್ಟ ಹಿನ್ನೆಲೆ ಶನಿವಾರ ದೆಹಲಿಯ ಹಲವೆಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಾಗಿತ್ತು. ರೈತರ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವರು ಹೇಳಿದ್ದೇನು. ರೈತರ ಪ್ರತಿಭಟನೆ ಹೇಗಿತ್ತು ಎನ್ನುವುದರ ಕುರಿತು ಒಂದು ವರದಿ ಇಲ್ಲಿದೆ.
ತಿದ್ದುಪಡಿ ಒಪ್ಪಿದಾಕ್ಷಣಕ್ಕೆ ದೋಷವಿದೆ ಎಂದು ಅರ್ಥವಲ್ಲ
"ಕೇಂದ್ರ ಸರ್ಕಾರವು ರೈತರ ಆದಾಯ ಅಭಿವೃದ್ಧಿ ಮತ್ತು ಹಿಸಾಸಕ್ತಿಗೆ ಬದ್ಧವಾಗಿದೆ. ಕೃಷಿ ಕಾಯ್ದೆಗಳ ಬಗ್ಗೆ ರೈತರ ಜೊತೆಗೆ ಹಲವು ಸುತ್ತಿನಲ್ಲಿ ಮಾತುಕತೆ ನಡೆಸಿದ್ದೇನೆ. ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತರುವುದಕ್ಕೆ ಚಿಂತಿಸಲಾಗುತ್ತದೆ ಎಂದು ಪ್ರಸ್ತಾಪ ಮಂಡಿಸಲಾಗಿದೆ. ಆಗೆಂದ ಮಾತ್ರಕ್ಕೆ ಕಾಯ್ದೆಗಳಲ್ಲಿ ದೋಷವಿದೆ ಎಂದು ಹೇಳುವುದಕ್ಕೆ ಆಗುವುದಿಲ್ಲ" ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.
ವಿರೋಧ ಪಕ್ಷಗಳ ವಿರುದ್ಧ ಬೊಟ್ಟು ಮಾಡಿದ ಸಚಿವರು
ಕೃಷಿ ಸಂಬಂಧಿತ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೂ ಮೊದಲು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಮಸೂದೆ ಮಂಡಿಸಲಾಗಿತ್ತು. ವಿರೋಧ ಪಕ್ಷಗಳಿಗೆ ಈ ಮಸೂದೆಗಳ ಬಗ್ಗೆ ಚರ್ಚಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಅಂದು ವಿರೋಧ ಪಕ್ಷದ ನಾಯಕರು ಮಸೂದೆ ಮತ್ತು ಅದರ ಅಂಶಗಳ ಬಗ್ಗೆ ಚರ್ಚೆ ಮಾಡಲಿಲ್ಲ. ಬದಲಿಗೆ ರೈತರ ಪ್ರತಿಭಟನೆ ಮತ್ತು ಹೋರಾಟದ ಬಗ್ಗೆ ಮಾತನಾಡಿದರು ಎಂದು ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಆರೋಪಿಸಿದ್ದಾರೆ.
"ವಿರೋಧ ಪಕ್ಷದ ನಾಯಕರ ವಿರೋಧ ಕೇವಲ ವಿರೋಧಕ್ಕಾಗಿ"
ಕೇಂದ್ರ ಸರ್ಕಾರ ಜಾರಿಗೊಳಿಸುವ ಕಾಯ್ದೆಗಳ ಕುರಿತು ವಿರೋಧ ಪಕ್ಷದ ನಾಯಕರ ನಡೆಯು ತೀರಾ ಬೇಸರ ತರಿಸುವಂತಿರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಯೊಬ್ಬರೂ ತಮ್ಮ ಅಭಿಪ್ರಾಯ ಮಂಡಿಸುವುದಕ್ಕೆ ಸ್ವತಂತ್ರರಾಗಿರುತ್ತಾರೆ. ಆದರೆ, ಅವರು ಕಾಯ್ದೆಗಳ ಬಗ್ಗೆ ಚರ್ಚೆ ಮಾಡುವುದನ್ನು ಹೊರತುಪಡಿಸಿ ಕೇವಲ ವಿರೋಧಿಸಬೇಕು ಎಂಬ ಉದ್ದೇಶಕ್ಕಾಗಿಯೇ ಮಸೂದೆಗಳನ್ನು ಕೇಂದ್ರ ಸರ್ಕಾರದ ಕಾನೂನುಗಳನ್ನು ವಿರೋಧಿಸುತ್ತಾರೆ. ರೈತರ ಹಿತಾಸಕ್ತಿ ಮತ್ತು ರಾಷ್ಟ್ರೀಯ ಆರ್ಥಿಕತೆ ವಿಚಾರದಲ್ಲೂ ಅದನ್ನು ಮುಂದುವರಿಸಬೇಕೇ ಎಂದು ಸಚಿವ ನರೇಂದ್ರ ಸಿಂಗ್ ತೋಮರ್ ಪ್ರಶ್ನೆ ಮಾಡಿದ್ದಾರೆ.
ರೈತರ ಪ್ರತಿಭಟನೆಗೆ ಬರೋಬ್ಬರಿ 101 ದಿನ
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 101 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ರೈತ ಹೋರಾಟದಲ್ಲಿ ಪಂಜಾಬ್, ಹರಿಯಾಣ, ಪಶ್ಚಿಮ ಉತ್ತರ ಪ್ರದೇಶದ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.