ಲಾಕ್ಡೌನ್ ಜಾರಿಯಾಗುವುದು ಯಾವಾಗ?; ಇಲ್ಲಿದೆ ಸಿಎಂ ಕೊಟ್ಟ ಉತ್ತರ
ನವದೆಹಲಿ, ಏಪ್ರಿಲ್ 11: ಕೊರೊನಾವೈರಸ್ ಸೋಂಕಿನ ನಾಲ್ಕನೇ ಅಲೆಯು ರಾಷ್ಟ್ರ ರಾಜಧಾನಿಯಲ್ಲಿ ಹೊಸ ಆತಂಕ ಸೃಷ್ಟಿಸಿದೆ. ಕಳೆದ 24 ಗಂಟೆಗಳಲ್ಲಿ 10,732 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ಪರಿಸ್ಥಿತಿ ಗಂಭೀರತೆಯನ್ನು ತೋರಿಸುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಚ್ಚರಿಕೆ ನೀಡಿದ್ದಾರೆ.
ಅನಗತ್ಯವಾಗಿ ಮತ್ತು ತುರ್ತು ಇಲ್ಲದ ಸಂದರ್ಭಗಳಲ್ಲಿ ಸಾರ್ವಜನಿಕರು ಯಾವುದೇ ಕಾರಣಕ್ಕೂ ಹೊರಗಡೆ ಸಂಚಾರ ಮಾಡಬೇಡಿ. ಹೊರಗೆ ಹೋಗಬೇಕಾದ ಅನಿವಾರ್ಯತೆಯಿದ್ದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸ್ಯಾನಿಟೈಸರ್ ಬಳಸಬೇಕು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಲಾಕ್ಡೌನ್ ಒಂದೇ ಆಯ್ಕೆಯಲ್ಲ, ಕಠಿಣ ನಿರ್ಬಂಧಗಳು ಜಾರಿ: ಕೇಜ್ರಿವಾಲ್
ನವದೆಹಲಿಯಲ್ಲಿ ಲಾಕ್ಡೌನ್ ಜಾರಿಗೊಳಿಸುವುದು ಸರ್ಕಾರಕ್ಕೆ ಇಷ್ಟವಿಲ್ಲ. ಕೊವಿಡ್-19 ವಿರುದ್ಧ ಹೋರಾಡುವುದಕ್ಕೆ ಲಾಕ್ಡೌನ್ ಒಂದೇ ಆಯ್ಕೆಯಲ್ಲ. ವೈದ್ಯಕೀಯ ವ್ಯವಸ್ಥೆಯು ಕುಸಿದ ಸಂದರ್ಭದಲ್ಲಿ ಲಾಕ್ಡೌನ್ ಜಾರಿಗೊಳಿಸುವುದು ಅನಿವಾರ್ಯವಾಗಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗೃಹ ದಿಗ್ಬಂಧನದಲ್ಲೇ ಕೊರೊನಾವೈರಸ್ ಸೋಂಕಿಗೆ ಚಿಕಿತ್ಸೆ
ಒಂದು ವೇಳೆ ನಿಮಗೆ ಕೊರೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟರೆ ಆತಂಕಪಡುವ ಅಗತ್ಯವಿಲ್ಲ. ಸೋಂಕು ಪತ್ತೆಯಾದಾಕ್ಷಣ ಆಸ್ಪತ್ರೆಗೆ ದಾಖಲಾಗಬೇಕು ಎಂದೇನಿಲ್ಲ. ಗೃಹ ದಿಗ್ಬಂಧನ(ಹೋಮ್ ಐಸೋಲೇಷನ್)ದಲ್ಲಿ ಇದ್ದುಕೊಂಡು ಕೊರೊನಾವೈರಸ್ ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.
ನವದೆಹಲಿಯಲ್ಲಿ ಯಾವಾಗ ಲಾಕ್ಡೌನ್ ಜಾರಿಯಾಗುತ್ತೆ?
ಕೊರೊನಾವೈರಸ್ ಸೋಂಕಿನಿಂದ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ನೀಡಲಾಗುತ್ತದೆ. ಸಾಮಾನ್ಯ ಸಮಸ್ಯೆ ಹೊಂದಿರುವವರು ಆದಷ್ಟು ಬೇಗ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಬೇಕು. ಮುಂದಿನ ಹಂತದಲ್ಲಿ ಕೊವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಹಾಸಿಗೆ ಅಭಾವ ಎದುರಾದಂತಾ ಸಂದರ್ಭದಲ್ಲಿ ಲಾಕ್ಡೌನ್ ಜಾರಿಗೊಳಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
"ನವದೆಹಲಿಯಲ್ಲಿ ಶೇ.65 ಸೋಂಕಿತರ ವಯಸ್ಸು 45ಕ್ಕಿಂತ ಕಡಿಮೆ"
ದೇಶದಲ್ಲಿ ಸೃಷ್ಟಿಯಾಗಿರುವ ಕೊರೊನಾವೈರಸ್ ಎರಡನೇ ಅಲೆಯು ಮಕ್ಕಳು ಮತ್ತು ಯುವಕರಿಗೆ ಹೆಚ್ಚು ಅಪಾಯವನ್ನು ಉಂಟು ಮಾಡಲಿದೆ. ದೆಹಲಿಯಲ್ಲಿ ಶೇ.65ರಷ್ಟು ಸೋಂಕಿತರ ವಯಸ್ಸು 45ಕ್ಕಿಂತ ಕಡಿಮೆಯಾಗಿದೆ. ಈ ಹಿನ್ನೆಲೆ ಕೊವಿಡ್-19 ಲಸಿಕೆ ಪಡೆದುಕೊಳ್ಳುವ ವಯಸ್ಸಿನ ಮಿತಿಯನ್ನು 35ಕ್ಕೆ ಇಳಿಕೆ ಮಾಡಬೇಕು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವುದಕ್ಕೆ ರಾಜಕಾರಣವನ್ನು ಬಿಟ್ಟು ಎಲ್ಲ ಪಕ್ಷಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಕೊರೊನಾವೈರಸ್ 2ನೇ ಅಲೆಯ ಸ್ಫೋಟದಿಂದ ದಾಖಲೆ
ದೇಶದಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಮಿತಿ ಮೀರಿದೆ. ಒಂದೇ ದಿನ 1,52,879 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದ್ದು, ಹೊಸ ದಾಖಲೆಯಾಗಿದೆ. ಕಳೆದ 24 ಗಂಟೆಗಳಲ್ಲಿ 839 ಜನರು ಮಹಾಮಾರಿಗೆ ಬಲಿಯಾಗಿದ್ದರೆ, 90,584 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,33,58,805ಕ್ಕೆ ಏರಿಕೆಯಾಗಿದೆ. ಈವರೆಗೂ 1,20,81,443 ಸೋಂಕಿತರು ಗುಣಮುಖರಾಗಿದ್ದು, 1,69,275 ಮಂದಿ ಪ್ರಾಣ ಬಿಟ್ಟಿದ್ದಾರೆ. 11,08,087 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.