ಅಯೋಧ್ಯೆ ತೀರ್ಪು ಇಂದೇ ಪ್ರಕಟವಾಗುತ್ತಿರುವುದೇಕೆ?
ನವದೆಹಲಿ, ನವೆಂಬರ್ 09: ಅಯೋಧ್ಯೆಯ ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದ ತೀರ್ಪು ಶನಿವಾರ ಪ್ರಕಟಗೊಳ್ಳುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಆದ್ರೆ ಇದ್ದಕ್ಕಿದ್ದಂತೆ ನಿನ್ನೆ ರಾತ್ರಿ ಅಯೋಧ್ಯೆ ತೀರ್ಪು ನವೆಂಬರ್ 09 ರ ಬೆಳಿಗ್ಗೆ 10:30 ಕ್ಕೆ ಪ್ರಕಟವಾಗಲಿದೆ ಎಂದು ಸುಪ್ರೀಂ ಕೋರ್ಟ್ ಘೋಷಿಸಿತು.
ಅಷ್ಟಕ್ಕೂ ಎಲ್ಲ ದಿನ ಬಿಟ್ಟು, ಕೋರ್ಟಿಗೆ ರಜಾ ಇರುವ ಶನಿವಾರವೇ ಈ ಐತಿಹಾಸಿಕ ತೀರ್ಪು ಪ್ರಕಟ ಯಾಕೆ ಎಂಬ ಕುತೂಹಲ ಎದ್ದಿತ್ತು. ಅದಕ್ಕೆ ಹಿರಿಯ ವಕೀಲರೊಬ್ಬರು ಉತ್ತರಿಸಿದ್ದಾರೆ.
ಶನಿವಾರ ಬಹುತೇಕ ಶಾಲಾ-ಕಾಲೇಜುಗಳಿಗೆ, ಕಂಪಎನಿಗಳಿಗೆ ರಜೆ ಇರುತ್ತದೆ. ಸಾರ್ವಜನಿಕರೂ ಕಚೇರಿಗೆ ಎಂದು ಮನೆಯಿಂದ ಆಚೆ ಬರುವ ಅಗತ್ಯವಿರುವುದಿಲ್ಲ. ಜೊತೆಗೆ ಮರುವಿನ ಭಾನುವಾರವಾಗಿರುವುದರಿಂದ ಎಲ್ಲೆಡೆ ರಜೆ ಇರುತ್ತದೆ. ಕಾನೂನು, ಸುವ್ಯವಸ್ಥೆಯನ್ನು ಕಾಪಾಡಲು ಇದು ಸುಲಭ ಎಂಬ ಕಾರಣಕ್ಕೆ ಈ ದಿನವನ್ನು ಆಯ್ದುಕೊಳ್ಳಲಾಗಿದೆ.
ಮಾತ್ರವಲ್ಲ, ಶನಿವಾರ ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಯೋದಿಲ್ಲ, ಅಂದು ಕೋರ್ಟ್ ಹಾಲ್ ಬಲಿ ಸಾರ್ವಜನಿಕರು ಇರುವುದಿಲ್ಲ. ಆದ್ದರಿಂದ ಯಾವುದೇ ಅಹಿತಕರ ಘಟನೆ ಸಂಭವಿಸುವುದಕ್ಕೆ ಅವಕಾಶ ಸಿಗುವುದಿಲ್ಲ ಎಂಬ ಕಾರಣಕ್ಕೆ ಇದೇ ದಿನ ಆಯ್ದುಕೊಳ್ಳಲಾಗಿದೆ ಎಂದು ಹಿರಿಯ ವಕೀಲರೊಬ್ಬರು ವಿವರಣೆ ನೀಡಿದ್ದಾರೆ.