ಗಣೇಶನನ್ನೂ ಚೀನಾದಿಂದ ಆಮದು ಮಾಡಿಕೊಳ್ಳುವುದು ಏಕೆ?
ನವ ದೆಹಲಿ, ಜೂನ್ 26: ಗಣೇಶನ ಮೂರ್ತಿಗಳನ್ನು ಚೀನಾದಿಂದ ಆಮದು ಮಾಡಿಕೊಳ್ಳುವುದು ಏಕೆ? ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಶ್ನೆ ಮಾಡಿದ್ದಾರೆ. ಚೀನಾ ವಸ್ತುಗಳ ನಿಷೇಧದ ಬಗ್ಗೆ ಮಾತನಾಡಿರುವ ಅವರು ಜನರಿಗೆ ಈ ಪ್ರಶ್ನೆ ಕೇಳಿದ್ದಾರೆ.
ನಾನು ಚೀನಾ ವಸ್ತುಗಳ ಮೇಲೆ ದಾಸರಾದರೆ ಹೇಗೆ? ಗಣೇಶನ ಮೂರ್ತಿಗಳನ್ನು ಸಹ ನಾವು ಅಲ್ಲಿಂದಲೇ ಆಮದು ಮಾಡಿಕೊಳ್ಳಬೇಕೆ?. ಇದು ನಾವು ಯೋಚನೆ ಮಾಡಬೇಕಿರುವ ಸಮಯ. ಕೈಗಾರಿಕೆಗಳಿಗೆ ಬೇಕಾಗುವ ಹಾಗೂ ದೇಶದಲ್ಲಿ ಲಭ್ಯವಿಲ್ಲದ ಕಚ್ವಾ ವಸ್ತುಗಳನ್ನು ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಗಣೇಶನ ವಿಗ್ರಹಗಳನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚೀನಾಗೆ ತಕ್ಕ ಪಾಠ: ಭಾರತೀಯರಿಗೆ ಸುಳ್ಳು ಹೇಳಿದರಾ ಪ್ರಧಾನಿ ಮೋದಿ?
ಪರಸ್ಪರ ವಸ್ತುಗಳನ್ನು ರಫ್ತು ಹಾಗೂ ಆಮದು ಮಾಡಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಇದು ಆರ್ಥಿಕ ಅಭಿವೃದ್ದಿಗೆ ಹಾಗೂ ಉದ್ಯೋಗ ಅವಕಾಶಗಳಿಗೆ ಅಗತ್ಯವಾಗಿದೆ. ಆದರೆ, ಎಲ್ಲದಕ್ಕೂ ಚೀನಾ ಮೇಲೆ ಅವಲಂಬನೆ ಆಗುವುದು ತಪ್ಪು ಎಂದಿದ್ದಾರೆ.
ನಮ್ಮ ದೇಶದಲ್ಲಿ ತಯಾರು ಮಾಡಿದ ವಸ್ತುಗಳನ್ನು ಬಳಕೆ ಮಾಡುವುದರ ಮೂಲಕ ಚೀನಾದಿಂದ ಆಗುವ ಆಮದು ಪ್ರಮಾಣವನ್ನು ಕಡಿಮೆ ಮಾಡಬಹುದು. ಚೀನಾ ವಸ್ತುಗಳ ಆಮದು ಕಡಿಮೆ ಮಾಡಲು ಸರ್ಕಾರ ಹಾಗೂ ಜನರು ಇಬ್ಬರು ಪ್ರಯತ್ನ ಮಾಡಬೇಕು ಎಂದಿದ್ದಾರೆ.
ಚೀನಾ ವಸ್ತುಗಳ ಆಮದು ಕಡಿಮೆ ಮಾಡಿ, ದೇಶೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೊಳಿಸಲು ನಿರ್ಧರಿಸಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.