ನಿರ್ಭಯಾ ಪ್ರಕರಣ: ಅಪರಾಧಿಗಳ ಗಲ್ಲು ಶಿಕ್ಷೆ ಜಾರಿ ವಿಳಂಬ ಏಕೆ?
ನವದೆಹಲಿ, ಜನವರಿ 16: ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ನೀಡಿದ ಆದೇಶದಂತೆ ಇನ್ನು ಆರು ದಿನಗಳಲ್ಲಿ (ಜ.22) ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಿಗೆ ಗಲ್ಲುಶಿಕ್ಷೆ ಜಾರಿಯಾಗಬೇಕು. ಅದಕ್ಕೆ ಸುಪ್ರೀಂಕೋರ್ಟ್ ಕೂಡ ಅನುಮತಿ ನೀಡಿದೆ. ಆದರೆ ಆ ದಿನದಂದು ಶಿಕ್ಷೆ ಜಾರಿಯಾಗುತ್ತಿಲ್ಲ.
ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್, ಕ್ಷಮಾದಾನದ ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿ ಇತ್ಯರ್ಥವಾಗುವವರೆಗೂ ಗಲ್ಲುಶಿಕ್ಷೆ ಜಾರಿಗೊಳಿಸುವುದು ಸಾಧ್ಯವಾಗುವುದಿಲ್ಲ. ಹೀಗೆಂದು ದೆಹಲಿ ಸರ್ಕಾರ, ದೆಹಲಿ ಹೈಕೋರ್ಟ್ಗೆ ಬುಧವಾರ ತಿಳಿಸಿದೆ. ಹೀಗಾಗಿ ನಾಲ್ವರು ಅಪರಾಧಿಗಳ ಮರಣದಂಡನೆ ಜಾರಿ ವಿಳಂಬವಾಗಲಿದೆ.
ನಿರ್ಭಯ ಪ್ರಕರಣದ ಅಪರಾಧಿಗಳು ಜೈಲಿನಲ್ಲಿ ಸಂಪಾದಿಸಿದ್ದೆಷ್ಟು?
ತಿಹಾರ್ ಕಾರಾಗೃಹದ ನಿಯಮ ಮತ್ತು ಸುಪ್ರೀಂಕೋರ್ಟ್ನ ಈ ಹಿಂದಿನ ಆದೇಶಗಳ ಅನ್ವಯ ಯಾವುದೇ ಕ್ಷಮಾದಾನದ ಅರ್ಜಿ ಬಾಕಿ ಉಳಿದಿದ್ದರೆ ಗಲ್ಲುಶಿಕ್ಷೆ ಜಾರಿಗೆ ಸ್ವಯಂಚಾಲಿತವಾಗಿಯೇ ತಡೆ ಬೀಳುತ್ತದೆ ಎಂದು ದೆಹಲಿ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್ನಲ್ಲಿ ಬುಧವಾರ ನಡೆದ ವಿಚಾರಣೆ ವೇಳೆ ಮಾಹಿತಿ ನೀಡಿವೆ.
ವ್ಯವಸ್ಥೆಗೆ ಕ್ಯಾನ್ಸರ್
ಈ ವ್ಯವಸ್ಥೆಯು ಕ್ಯಾನ್ಸರ್ನಿಂದ ಬಳಲುತ್ತಿದೆ. ಕಾರಾಗೃಹ ನಿಯಮದ ಪ್ರಕಾರ ಇತರೆ ಅಪರಾಧಿಗಳು ಕೂಡ ಕ್ಷಮಾದಾನ ಅರ್ಜಿ ಸಲ್ಲಿಸುವವರೆಗೂ ಕಾಯಬೇಕಾಗುತ್ತದೆ. ಇದು ವಿವೇಚನಾರಹಿತ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು. ಡೆತ್ ವಾರಂಟ್ ಪ್ರಶ್ನಿಸಿ ಮುಕೇಶ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಒಳಪಡಿಸಲು ನಿರಾಕರಿಸಿದ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಮನಮೋಹನ್ ಮತ್ತು ಸಂಗೀತಾ ದಿಂಗ್ರಾ ಸೆಹಗಲ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಹೇಳಿಕೆ ನೀಡಿದೆ.
ಉಳಿದವರಿಗೂ ಜಾರಿಯಾಗೊಲ್ಲ
ಕಾರಾಗೃಹ ನಿಯಮಾವಳಿಗಳ ಪ್ರಕಾರ ಒಬ್ಬನಿಗಿಂತ ಹೆಚ್ಚು ಅಪರಾಧಿಗಳಿದ್ದ ಸಂದರ್ಭದಲ್ಲಿ, ಅವರಲ್ಲಿ ಒಬ್ಬ ಅಪರಾಧಿ ಕ್ಷಮಾದಾನದ ಅರ್ಜಿ ಸಲ್ಲಿಸಿದ್ದರೂ ಅದು ಇತ್ಯರ್ಥವಾಗುವವರೆಗೂ ಉಳಿದ ಅಪರಾಧಿಗಳ ಗಲ್ಲುಶಿಕ್ಷೆ ಜಾರಿ ಕೂಡ ಮುಂದೂಡಬೇಕಾಗುತ್ತದೆ ಎಂದು ದೆಹಲಿ ಸರ್ಕಾರ ಹಾಗೂ ತಿಹಾರ್ ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ನಿರ್ಭಯ ಪ್ರಕರಣದ ಅಪರಾಧಿಗಳ ಗಲ್ಲು ಶಿಕ್ಷೆ ವಿಳಂಬ
ಹೈಕೋರ್ಟ್ ತರಾಟೆ
'ಇದರ ಅರ್ಥ, ಎಲ್ಲ ಅಪರಾಧಿಗಳು ಕ್ಷಮಾದಾನದ ಅರ್ಜಿ ಸಲ್ಲಿಸುವವರೆಗೂ ನೀವು ಕ್ರಮ ತೆಗದುಕೊಳ್ಳಲು ಸಾಧ್ಯವಿಲ್ಲ ಎನ್ನುವಷ್ಟು ನಿಮ್ಮ ನಿಯಮ ಕೆಟ್ಟದಾಗಿದೆ. ನಿಯಮಗಳನ್ನು ರಚಿಸುವಾಗ ಇದರ ಸಮಸ್ಯೆಗಳ ಕುರಿತು ವಿವೇಚನೆ ಇರಲಿಲ್ಲ ಎನಿಸುತ್ತಿದೆ. ಈ ವ್ಯವಸ್ಥೆಯು ಕ್ಯಾನ್ಸರ್ನಿಂದ ಬಳಲುತ್ತಿದೆ ಎಂದು ದೆಹಲಿ ಸರ್ಕಾರದ ಪರ ಹೇಳಿಕೆ ನೀಡಿದ ವಕೀಲ ರಾಹುಲ್ ಮೆಹ್ರಾ ಅವರ ಎದುರು ಪೀಠ ಅಸಮಾಧಾನ ವ್ಯಕ್ತಪಡಿಸಿತು.
ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ
'ನಿಮ್ಮ ಮನೆ (ನಿಯಮ) ಅವ್ಯವಸ್ಥೆಯಿಂದ ಕೂಡಿದೆ. ಸಮಸ್ಯೆ ಏನೆಂದರೆ ಜನರು ಈ ವ್ಯವಸ್ಥೆ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಯಾವ ವಿಚಾರವೂ ಸರಿಯಾದ ದಾರಿಯಲ್ಲಿ ಸಾಗುತ್ತಿಲ್ಲ. ಈ ವ್ಯವಸ್ಥೆಯನ್ನು ಮನಬಂದಂತೆ ಬಳಸಿಕೊಳ್ಳಬಹುದು. ಈ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುವ ಉಪಾಯವನ್ನು ನಾವು ನೋಡಿದ್ದೇವೆ. ಅದಕ್ಕೆ ಅದರ ಅರಿವೇ ಇಲ್ಲ' ಎಂದು ನ್ಯಾಯಪೀಠ ಕಿಡಿಕಾರಿತು.
ನಿರ್ಭಯ ಪ್ರಕರಣ; ಕ್ಷಮಾದಾನ ಅರ್ಜಿ ತಿರಸ್ಕರಿಸಲು ಮನವಿ
ಅರ್ಜಿ ಸಲ್ಲಿಸದ ಉಳಿದ ಅಪರಾಧಿಗಳು
ಡೆತ್ ವಾರಂಟ್ ವಿರುದ್ಧ ಮುಕೇಶ್ ಮಾತ್ರ ಅರ್ಜಿ ಸಲ್ಲಿಸಿದ್ದ. ಅದನ್ನು ವಿಚಾರಣೆ ನಡೆಸಲು ನಿರಾಕರಿಸಿದ ದೆಹಲಿ ಹೈಕೋರ್ಟ್, ಆತ ಸೆಷನ್ಸ್ ಕೋರ್ಟ್ ಅಥವಾ ಸುಪ್ರೀಂಕೋರ್ಟ್ಗೆ ಮಾತ್ರ ಮನವಿ ಮಾಡಬಹುದು ಎಂದು ಹೇಳಿತು. ಬಳಿಕ ಮುಕೇಶ್ ಪರ ವಕೀಲರು ಡೆತ್ ವಾರಂಟ್ ಪ್ರಶ್ನಿಸಿ ಸೆಷನ್ಸ್ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಅದು ಗುರುವಾರ ವಿಚಾರಣೆಗೆ ಬರಲಿದೆ. ಉಳಿದ ಮೂವರು ಅಪರಾಧಿಗಳು ಇದುವರೆಗೂ ಡೆತ್ ವಾರಂಟ್ ವಿರುದ್ಧ ಅಥವಾ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿಲ್ಲ.
ಉಪಾಯ ಬಳಸುತ್ತಿದ್ದೀರಿ
ಮುಕೇಶ್ನ ಕ್ರಿಮಿನಲ್ ಅರ್ಜಿ, ಪರಾಮರ್ಶನ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ಸುಪ್ರೀಂಕೋರ್ಟ್ ಒಮ್ಮೆ ತಿರಸ್ಕರಿಸಿ ಗಲ್ಲುಶಿಕ್ಷೆಯನ್ನು ಖಾತರಿಪಡಿಸಿದ ಬಳಿಕ ಆತನ ಜ.7ರಂದು ಹೊರಡಿಸಲಾದ ಡೆತ್ ವಾರಂಟ್ಅನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸುವಂತಿಲ್ಲ ಎಂದು ಪೀಠ ಹೇಳಿತು.
'ಈ ಪ್ರಕರಣವನ್ನು ಹೇಗೆ ದೀರ್ಘಾವಧಿ ಕಾಲ ಎಳೆಯಬಹುದು ಎಂಬ ಉಪಾಯವನ್ನು ಬಳಸಲಾಗುತ್ತಿದೆ ಎನಿಸುತ್ತಿದೆ. 2017ರ ಮೇ 5ರಂದು ಕ್ಷಮಾದಾನದ ಅರ್ಜಿ ಅಥವಾ ಪರಾಮರ್ಶನ ಅರ್ಜಿ ಅಥವಾ ಕ್ಯುರೇಟವ್ ಅರ್ಜಿ ಸಲ್ಲಿಸುವ ಅವರ ಮನವಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದ ಸಂದರ್ಭದಿಂದಲೂ ನಿಮಗೆ ಸಮಯವಿತ್ತು. ಇಲ್ಲಿಯವರೆಗೂ ನೀವು ಏಕೆ ಕಾದಿದ್ದೀರಿ? ಹಾಗೆ ಮಾಡುವುದುನ್ನು ನಿಮ್ಮನ್ನು ತಡೆದಿರುವುದು ಏನು?
ಇಷ್ಟು ಕಾಲ ಏಕೆ ಸುಮ್ಮನಿದ್ದೀರಿ?
ನೀವು ನ್ಯಾಯಾಲಯವನ್ನು ಸಂಪರ್ಕಿಸಲು ಒಂದಷ್ಟು ಸಮಯ ನೀಡಬೇಕು ಎನ್ನುವುದು ಕಾನೂನಿನ ಉದ್ದೇಶ. ನಿಮ್ಮ ಸಮಯ 2017ರ ಮೇ 5ರಿಂದಲೇ ಆರಂಭವಾಗಿತ್ತು. 2019ರ ಡಿ.29ರ ಬಳಿಕ ಕೂಡ (ಅಪರಾಧಿಗಳು ಕ್ಷಮಾದಾನದ ಅರ್ಜಿ ಸಲ್ಲಿಸಬಹುದು ಎಂದು ಮಾಹಿತಿ ನೀಡಿದ ನಂತರ) ನೀವು ಏನೂ ಮಾಡಲಿಲ್ಲ. ಇತರೆ ಅಪರಾಧಿಗಳು ನ್ಯಾಯಾಲಯಕ್ಕೆ ಕ್ಷಮಾದಾನದ ಅರ್ಜಿ ಸಲ್ಲಿಸುವವರೆಗೂ ನೀವು ಕಾಯುವಂತಿಲ್ಲ ಎಂದು ವಕೀಲರನ್ನು ಪೀಠ ತರಾಟೆಗೆ ತೆಗೆದುಕೊಂಡಿತು.
ತಿರಸ್ಕರಿಸಲು ಶಿಫಾರಸು
ಅಪರಾಧಿಗಳಲ್ಲಿ ಒಬ್ಬನಾದ ಮುಕೇಶ್ ಸಿಂಗ್ ಸಲ್ಲಿಸಿರುವ ಕ್ಷಮಾದಾನದ ಅರ್ಜಿಯನ್ನು ಲೆಫ್ಟಿನೆಂಟ್ ಗವರ್ನರ್ಗೆ ರವಾನಿಸಿರುವ ದೆಹಲಿ ಸರ್ಕಾರ ಅದನ್ನು ತಿರಸ್ಕರಿಸುವಂತೆ ಶಿಫಾರಸು ಮಾಡಿರುವುದಾಗಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. 32 ವರ್ಷದ ಮುಕೇಶ್ ಸಿಂಗ್ ಕ್ಷಮಾದಾನದ ಅರ್ಜಿಯ ಕುರಿತಾದ ಶಿಫಾರಸನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ.