ದೆಹಲಿ ಕೋರ್ಟ್ ಮುಂದೆ 13 ಗಿಳಿಗಳನ್ನು ಹಾಜರುಪಡಿಸಿದ್ದೇಕೆ?
ನವದೆಹಲಿ, ಅಕ್ಟೋಬರ್ 17: ದೆಹಲಿಯ ಕೋರ್ಟ್ ವೊಂದರಲ್ಲಿ ಬುಧವಾರ ಅಚ್ಚರಿ ಕಾದಿತ್ತು. ಆರೋಪಿ, ಅಪರಾಧಿಗಳು, ಸಾಕ್ಷಿದಾರರನ್ನು ಕಂಡಿದ್ದ ಕೋರ್ಟಿಗೆ ಅಂದು ಅಪರೂಪದ ಅತಿಥಿಗಳು ಆಗಮಿಸಿದ್ದರು!
ಹೌದು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಒಟ್ಟು 13 ಗಿಳಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಯ್ಯೋ, ಗಿಳಿಗಳು ಅಪರಾಧ ಮಾಡಿದ್ದವಾ ಎದು ಯೋಚಿಸಬೇಡಿ.
ಘಟನೆ ಬೇರೆ ಇದೆ! ಉಜ್ಬೇಕಿಸ್ತಾನದ ವ್ಯಕ್ತಿಯೊಬ್ಬ ಭಾರತದಿಂದ ಮರಳುವ ಸಂದರ್ಭದಲ್ಲಿ ಈ ಗಿಳಿಗಳನ್ನು ಶೂ ಬಾಕ್ಸಿನಲ್ಲಿ ಹಾಕಿ ವಿಮಾನದ ಮೂಲಕ ಕಳ್ಳಸಾಗಣೆ ಮಾಡಲು ಯತ್ನಿಸಿದ್ದ.
ಆದರೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನದಲ್ಲಿ ಆತ ಭದ್ರತಾ ತಪಾಸಣೆ ವೇಳೆ ಸಿಕ್ಕಿಬಿದ್ದ. ಅವನ ಶೂ ಬಾಕ್ಸ್ ನಲ್ಲಿದ್ದ 13 ಗಿಳಿಗಳನ್ನು ರಕ್ಷಿಸಲಾಯ್ತು. ಆದರೆ ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಲಾಯ್ತು.
ಬುಧವಾರ ಕೋರ್ಟಿನಲ್ಲಿ ಇದರ ವಿಚಾರಣೆಯಿದ್ದ ಕಾರಣ, ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿಗಳು ಕೋರ್ಟಿಗೆ ಹಾಜರಾಗಬೇಕು ಎಂದು ಆದೇಶಿಸಲಾಗಿತ್ತು. ಆದ್ದರಿಂದ ಪ್ರಕರಣಕ್ಕೆ ಸಂಬಂಧಪಟ್ಟಿದ್ದ ಕಾರಣ ಈ ಗಿಳಿಗಳನ್ನೂ ಕೋರ್ಟಿನ ಮುಂದೆ ಹಾಜರುಪಡಿಸಲಾಯ್ತು.
ವಿಚಾರಣೆ ನಡೆಸಿದ ನಂತರ ಕೋರ್ಟು ಉಜ್ಬೇಕಿಸ್ತಾನದ ಪ್ರಜೆಯನ್ನು ಅ.30 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಗಿಳಿಗಳನ್ನು ಒಖ್ಲಾ ಪಕ್ಷಿಧಾಮಕ್ಕೆ ಕಳಿಸುವಂತೆ ಆದೇಶ ನೀಡಿದೆ.
ವಿಚಾರಣೆಯ ವೇಳೆ, ಗಿಳಿಯನ್ನು ಕಳ್ಳಸಾಗಣೆ ಮಾಡಲು ಮುಂದಾಗಿದ್ದೇಕೆ ಎಂದು ಬಾಯ್ಬಿಟ್ಟ ಉಜ್ಬೇಕಿಸ್ತಾನದ ಪ್ರಜೆ, "ನಮ್ಮ ದೇಶದಲ್ಲಿ ಈ ಗಿಳಿಗಳಿಗೆ ಸಾಕಷ್ಟು ಬೇಡಿಕೆ ಇದೆ. ಆದ್ದರಿಂದ ಇವನ್ನು ಕೊಂಡೊಯ್ಯುವ ಸಲುವಾಗಿ ನಾನು ವ್ಯಾಪಾರಿಯೊಬ್ಬರಿಂದ ಇದನ್ನು ಖರೀದಿಸಿದ್ದೆ" ಎಂದಿದ್ದಾನೆ.