ಭೂತಾನ್ನಂತಹ ಗೆಳೆಯ, ನೆರೆಹೊರೆಯ ಯಾರಿಗೆ ಬೇಡ?: ಪ್ರಧಾನಿ ಮೋದಿ
ಥಿಂಪು, ಆಗಸ್ಟ್ 17: ಎರಡು ದಿನಗಳ ಪ್ರವಾಸಕ್ಕಾಗಿ ಭೂತಾನ್ಗೆ ಶನಿವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭವ್ಯ ಸ್ವಾಗತ ದೊರಕಿತು. ಭೂತಾನ್ ಪ್ರಧಾನಿ ಲೋಟೇ ಶೆರಿಂಗ್ ಅವರು ಮೋದಿ ಅವರನ್ನು ಬರಮಾಡಿಕೊಂಡರು. ಬಳಿಕ ಅವರು ಸೇನಾಪಡೆಗಳಿಂದ ಗೌರವ ವಂದನೆ ಸ್ವೀಕರಿಸಿದರು.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಆಯ್ಕೆಯಾದಾಗ ಮೋದಿ ಅವರು ಮೊದಲು ಭೂತಾನ್ಗೆ ಭೇಟಿ ನೀಡಿದ್ದರು. ಇದು ಅವರ ಎರಡನೆಯ ಭೇಟಿಯಾಗಿದೆ.
'ಭೂತಾನ್ನಲ್ಲಿ ಸ್ಮರಣೀಯ ಸ್ವಾಗತ ಸಿಕ್ಕಿದೆ. ಇದು ನೈಸರ್ಗಿಕ ಸೌಂದರ್ಯ ಮತ್ತು ಅದ್ಭುತ ಜನರ ನಾಡು. ಇಲ್ಲಿನ ಜನರು ಭಾರತ-ಭೂತಾನ್ ಗೆಳೆತನವು ಉನ್ನತ ಮಟ್ಟಕ್ಕೆ ಏರುವುದನ್ನು ಬಯಸಿದ್ದಾರೆ' ಎಂದು ಮೋದಿ ಹೇಳಿದರು.
ಭೂತಾನ್ ಪ್ರಧಾನಿ ಅವರೊಂದಿಗೆ ಜಂಟಿ ಹೇಳಿಕೆ ನೀಡಿದ ಪ್ರಧಾನಿ ಮೋದಿ, 'ಭೂತಾನ್ನಂತಹ ಸ್ನೇಹಿತ ಮತ್ತು ನೆರೆಹೊರೆಯ ದೇಶವನ್ನು ಯಾರು ಬಯಸುವುದಿಲ್ಲ. ಭೂತಾನ್ನ ಅಭಿವೃದ್ಧಿಯಲ್ಲಿ ಭಾಗವಾಗಿರುವುದು ಭಾರತಕ್ಕೆ ಗೌರವದ ಸಂಗತಿ' ಎಂದು ಹೇಳಿದರು.
ಭಾರತ ಮತ್ತು ಭೂತಾನ್ ಗಾತ್ರದಲ್ಲಿ ಚಿಕ್ಕದಿರಬಹುದು. ಆದರೆ ನಮ್ಮ ನಂಬಿಕೆಗಳು, ಮೌಲ್ಯಗಳು ಮತ್ತು ಸ್ಫೂರ್ತಿ ಸಮಾನವಾಗಿವೆ. ಇಂದು ಎರಡೂ ದೇಶಗಳು ನೈಜ ಗೆಳೆತನದ ವ್ಯಾಖ್ಯಾನಕ್ಕೆ ಅನುಗುಣವಾಗಿ ಬದುಕುತ್ತಿರುವುದು ಸಂತಸ ತಂದಿದೆ ಎಂದರು.
ಲೋಟೇ ಶೆರಿಂಗ್ ಅವರೊಂದಿಗೆ ಪರಿಣಾಮಕಾರಿ ಮಾತುಕತೆ ನಡೆಸಲಾಯಿತು. ನಮ್ಮ ದೇಶಗಳ ನಡುವೆ ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಸುಧಾರಿಸಲು ಸಾಕಷ್ಟು ಅವಕಾಶವಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
ಸೆಮ್ಟೊಖಾ ದೊಂಗ್ನಲ್ಲಿ ಮೋದಿ ಮತ್ತು ಶೆರಿಂಗ್ ಅವರು ಬೌದ್ಧ ಸನ್ಯಾಸಿಗಳನ್ನು ಭೇಟಿ ಮಾಡಿದರು. ಬಳಿಕ ಉಭಯ ದೇಶಗಳ ನಾಯಕರು ಬಾಂಧವ್ಯ ವೃದ್ಧಿಯ 10 ಹೊಸ ಒಪ್ಪಂದಗಳಿಗೆ ಸಹಿ ಹಾಕಿದರು. ಬಾಹ್ಯಾಕಾಶ ಸಂಶೋಧನೆ, ವಿಮಾನಯಾನ, ಮಾಹಿತಿ ತಂತ್ರಜ್ಞಾನ, ಇಂಧನ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
ಇದೇ ಸಂದರ್ಭದಲ್ಲಿ ಮೋದಿ ಅವರು ಭೂತಾನ್ನಲ್ಲಿ ರುಪೇ ಕಾರ್ಡ್ಗಳನ್ನು ಬಿಡುಗಡೆ ಮಾಡಿದರು. 1629ರಲ್ಲಿ ಶಬ್ದ್ರುಂಗ್ ನಮ್ಗ್ಯಾಲ್ ಅವರು ನಿರ್ಮಿಸಿದ್ದ ಭೂತಾನ್ನ ಅತ್ಯಂತ ಪ್ರಾಚೀನ ಕಟ್ಟಡ ಹಾಗೂ ಆಡಳಿತ ಕೇಂದ್ರ ಸಿಮ್ಟೊಖಾ ದೊಂಗ್ನಲ್ಲಿ ಖರೀದಿ ಮಾಡುವ ಮೂಲಕ ರುಪೇ ಕಾರ್ಡ್ ಬಳಕೆಗೆ ಚಾಲನೆ ನೀಡಿದರು. ಮೋದಿ ಅವರು ಭಾನುವಾರ ಸಹ ಭೂತಾನ್ನಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.