3 ರಾಜ್ಯಗಳ ಮುಂದಿನ ಮುಖ್ಯಮಂತ್ರಿ ಯಾರು? ರಾಹುಲ್ ಹೊಸ ಐಡಿಯಾ!
Recommended Video
ನವದೆಹಲಿ, ಡಿಸೆಂಬರ್ 13: ಚುನಾವಣೆ ಮುಗಿದು, ಗೆಲುವೂ ಸಿಕ್ಕಿದ್ದಾಯ್ತು. ಬಹುಮತಕ್ಕೆ ಅಗತ್ಯವಿರುವ ಸಂಖ್ಯೆ ಪಡೆದ ಮೇಲೂ ಕಾಂಗ್ರೆಸ್ಸಿನ ತಲೆನೋವು ಕಡಿಮೆಯಾಗಿಲ್ಲ. ಹಾಗೆ ಹೇಳೊಕೆ ಹೋದರೆ ಅಸಲಿ ಸಮಸ್ಯೆ ಶುರುವಾಗಿದ್ದೇ ಈಗ!
ಹೌದು, ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಆಯ್ಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನಲ್ಲೇ ತಲೆನೋವು ಆರಂಭವಾಗಿದೆ. ಆದರೆ ಇದು ಗೆದ್ದ ಖುಷಿಯನ್ನು ಮರೆಮಾಚಬಾರದು, ಮತ್ತು ಚುನಾವಣೆಯ ಫಲಿತಾಂಶದ ನಂತರ ಹೆಚ್ಚಾದ ಪಕ್ಷದ ವರ್ಚಸ್ಸು ಕುಸಿಯುವಂತೆ ಮಾಡಬಾರದು ಎಂಬ ಎಚ್ಚರಿಕೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಗೊತ್ತಾ? ಪ್ರಧಾನಿ ಮೋದಿ ರಾಹುಲ್ ಗಾಂಧಿಗೆ ಮೇಷ್ಟ್ರಂತೆ!
ಅದಕ್ಕೆಂದೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೊಸ ಉಪಾಯವೊಂದನ್ನು ಹೂಡಿದ್ದಾರೆ. ಮುಖ್ಯಮಂತ್ರಿಯ ಆಯ್ಕೆಗೂ ಪ್ರಜಾಪ್ರಭುತ್ವ ತತ್ತ್ವದ ತಳಹದಿಯಲ್ಲೇ ಮುಂದುವರಿಯುವ ಯೋಚನೆಯಲ್ಲಿ ಅವರಿದ್ದಾರೆ. ಇದೀಗ ಕಾಂಗ್ರೆಸ್ ಕಾರ್ಯಕರ್ತರ ನಡುವಲ್ಲೇ ಅನೌಪಚಾರಿಕವಾದ ಚುನಾವಣೆಯೊಂದನ್ನು ನಡೆಸಿ, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ನಿರ್ಧಾರಕ್ಕೆ ರಾಹುಲ್ ಬಂದಿದ್ದಾರೆ ಎನ್ನಲಾಗಿದೆ.
ಏನಿದು ಉಪಾಯ?
ರಾಹುಲ್ ಗಾಂಧಿ ಅವರು ಈಗಾಗಲೇ ಛತ್ತೀಸ್ ಗಢ, ಮಧ್ಯಪ್ರದೇಶ ಮತ್ತು ರಾಜಸ್ಥಾನ ಈ ಮೂರು ರಾಜ್ಯಗಳ 7.3 ಲಕ್ಷ ಕಾಂಗ್ರೆಸ್ ಕಾರ್ಯಕರ್ತರಿಗೆ ವಾಯ್ಸ್ ಮೆಸೇಜ್ ಕಳಿಸಿದ್ದಾರೆ. ಮೂರು ರಾಜ್ಯಗಳ ಕಾಂಗ್ರೆಸ್ ಕಾರ್ಯಕರ್ತರೇ ತಮಗೆ ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಬಗ್ಗೆ ಪ್ರತಿಕ್ರಿಯೆ ನೀಡಲು ರಾಹುಲ್ ಮನವಿ ಮಾಡಿದ್ದಾರೆ. ಹೆಚ್ಚಿನ ಜನರು ಯಾರನ್ನು ಆಯ್ಕೆ ಮಾಡುತ್ತಾರೋ ಅವರೇ ಮುಖ್ಯಮಂತ್ರಿ!
ಈ ಗೆಲುವು ನರೇಂದ್ರ ಮೋದಿಗೆ ಸ್ಪಷ್ಟ ಎಚ್ಚರಿಕೆ: ರಾಹುಲ್ ಗಾಂಧಿ
ವಾಯ್ಸ್ ಮೆಸೇಜ್ ನಲ್ಲೇನಿದೆ?
"ನಾನು ಈಗ ನಿಮ್ಮಲ್ಲಿ ಒಂದು ಬಹುಮುಖ್ಯ ಪ್ರಶ್ನೆ ಕೇಳುತ್ತೇನೆ? ಯಾರು ಮುಖ್ಯಮಂತ್ರಿಯಾಗಬೇಕು? ದಯವಿಟ್ಟು ಒಂದೇ ಹೆಸರನ್ನು ಸೂಚಿಸಿ. ನೀವು ಯಾರ ಹೆಸರನ್ನು ಹೇಳುತ್ತೀರಿ ಎಂಬುದು ನನ್ನೊಬ್ಬನಿಗೆ ಮಾತ್ರ ತಿಳಿಯುತ್ತದೆ. ಪಕ್ಷದ ಇನ್ಯಾರಿಗೂ ಇದು ಗೊತ್ತಿರುವುದಿಲ್ಲ, ದಯವಿಟ್ಟು ಪ್ರತಿಕ್ರಿಯಿಸಿ" ಎಂಬ ವಾಯ್ಸ್ ಮೆಸೇಜ್ ಅನ್ನು ರಾಹುಲ್ ಗಾಂಧಿ ಅವರು ಕಾರ್ಯಕರ್ತರಿಗೆ ಕಳಿಸಿದ್ದಾರೆ.
ರಾಹುಲ್ ಗಾಂಧಿ 'ಪಪ್ಪು' ಅಲ್ಲ ಈಗ 'ಪರಮ ಪೂಜ್ಯ': ರಾಜ್ ಠಾಕ್ರೆ
ಗೌಪ್ಯ ಪ್ರಕ್ರಿಯೆ
7.3 ಲಕ್ಷ ಕಾರ್ಯಕರ್ತರಲ್ಲಿ ಎಷ್ಟು ಜನ ಪ್ರತಿಕ್ರಿಯೆ ನೀಡುತ್ತಾರೋ, ಆ ಎಲ್ಲ ವಾಯ್ಸ್ ಮೆಸೇಜ್ ಗಳನ್ನೂ ಕೇವಲ ರಾಹುಲ್ ಗಾಂಧಿ ಅವರೊಬ್ಬರೇ ಕೇಳಿಸಿಕೊಳ್ಳಲಿದ್ದು, ಕಾರ್ಯಕರ್ತರ ಗುರುತನ್ನು ಗೌಪ್ಯವಾಗಿಡಲಾಗುತ್ತದೆ ಎಂಬ ಅಭಯವನ್ನು ರಾಹುಲ್ ಗಾಂಧಿ ನೀಡಿದ್ದಾರೆ.
ಕಾಂಗ್ರೆಸ್ ನಾಯಕರಿಗೆ ಇದು ಸವಾಲಿನ ಚುನಾವಣೆ!
ಅಬ್ಬಾ, ಒಂದು ಚುನಾವಣೆ ಮುಗೀತು ಎಂದು ಕಾಂಗ್ರೆಸ್ ನಾಯಕರು ನಿಟ್ಟುಸಿರು ಬಿಡುತ್ತಿರುವ ಹೊತ್ತಲ್ಲೇ, ಗೆಲುವಿನ ಖುಷಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗದಂತೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳಿಗೆ ಮತ್ತೊಂದು ಚುನಾವಣೆ ಎದುರಾಗಿದೆ! ಆದರಿದು ಅನೌಪಚಾರಿಕ ಚುನಾವಣೆಯಷ್ಟೆ! ಪ್ರಚಾರವಿಲ್ಲ, ಆಮಿಷವಿಲ್ಲ, ಆಶ್ವಾಸನೆಯಿಲ್ಲ... ನೀತಿ ಸಂಹಿತೆಯೂ ಇಲ್ಲ. ಒಟ್ಟಿನಲ್ಲಿ ಮುಖ್ಯಮಂತ್ರಿ ಆಕಾಂಕ್ಷಿಗಳಿಗೆ ಇದೊಂದು ಅಗ್ನಿಪರೀಕ್ಷೆ ಎನ್ನಿಸಿರುವುದು ಸುಳ್ಳಲ್ಲ.