ಕುಷ್ಠರೋಗಿಗಳ ಪಾಲಿನ ಜೀವಂತ ದೇವರು ಯೋಗ ಗುರು ಸ್ವಾಮಿ ಶಿವಾನಂದ
ಸೋಮವಾರದಂದು 125 ವರ್ಷ ವಯಸ್ಸಿನ ಸ್ವಾಮಿ ಶಿವಾನಂದ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಲು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಬಳಿಗೆ ಬರಿಗಾಲಿನಲ್ಲಿ ನಡೆದಾಗ ರಾಷ್ಟ್ರಪತಿ ಭವನದ ಅರಮನೆಯ ದರ್ಬಾರ್ ಹಾಲ್ನೊಳಗೆ ಚಪ್ಪಾಳೆಗಳು ಭಾರಿ ಮತ್ತು ಜೋರಾಗಿ ಮೊಳಗಿದವು. 125 ವರ್ಷ ವಯಸ್ಸಿನ ಯೋಗ ಸಾಧಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೌರವ ಸಲ್ಲಿಸುವ ಮೊದಲು ಸಾಷ್ಟಾಂಗ ನಮಸ್ಕಾರ ಮಾಡಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು ದೇಶದಾದ್ಯಂತ ಜನರ ಹೃದಯವನ್ನು ಗೆದ್ದಿವೆ. ಹಾಗಾದರೆ, ಅವರು ಯಾರು ಮತ್ತು ಅವರನ್ನು ಏಕೆ ಗೌರವಿಸಲು ಸರ್ಕಾರ ನಿರ್ಧರಿಸಿದೆ?
ಸ್ವಾಮಿ ಶಿವಾನಂದರು ಪ್ರತಿದಿನ ಯೋಗವನ್ನು ಅಭ್ಯಾಸ ಮಾಡುತ್ತಾರೆ. ಎಣ್ಣೆ ಹಾಗೂ ಮಸಾಲೆಗಳಿಲ್ಲದ ಆಹಾರವನ್ನು ಸೇವಿಸುತ್ತಾರೆ. ಕಳೆದ 50 ವರ್ಷಗಳಿಂದ 400-600 ಕುಷ್ಠರೋಗ ಪೀಡಿತ ಭಿಕ್ಷುಕರಿಗೆ ಪುರಿಯಲ್ಲಿ ಆಹಾರ, ಬಟ್ಟೆ ಮತ್ತು ಇತರ ಅಗತ್ಯ ವಸ್ತುಗಳನ್ನು ವ್ಯವಸ್ಥೆ ಮಾಡುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಮಾಜ ಸೇವೆಗೆ ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿ ನೀಡಲಾಗಿದೆ.
ಕರ್ನಾಟಕದ ಐವರು ಸಾಧಕರಿಗೆ ಪದ್ಮಶ್ರೀ ಪ್ರಶಸ್ತಿ
ಪ್ರಶಸ್ತಿ ಸ್ವೀಕರಿಸುವ ಮೊದಲು, ಸ್ವಾಮಿ ಶಿವಾನಂದ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರು. ಇದರಿಂದ ಸಮಾರಂಭದಲ್ಲಿ ನೆರೆದಿದ್ದ ಅತಿಥಿಗಳಿಂದ ಮತ್ತೊಂದು ಸುತ್ತಿನ ಚಪ್ಪಾಳೆ ಮೊಳಗಿದವು. ಶುಭಾಶಯವನ್ನು ಹಿಂದಿರುಗಿಸಿದ ಪ್ರಧಾನಿ ಮೋದಿ ತಕ್ಷಣವೇ ನಮಸ್ಕರಿಸಿದರು. ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದ ಯೋಗ ಗುರುಗಳು ವೇದಿಕೆಯ ಮೇಲೆ ಎರಡು ಬಾರಿ ಮೊಣಕಾಲು ನೆಲಕ್ಕೂರಿ ನಮಸ್ಕರಿಸಿದರು. ನಂತರ ಪ್ರಶಸ್ತಿಯನ್ನು ಸ್ವೀಕರಿಸಿದರು.
|
ಕಡುಬಡತನದಲ್ಲಿ ಜನಿಸಿದ ಸ್ವಾಮಿ ಶಿವಾನಂದರು
ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅತ್ಯಂತ ಹಿರಿಯ ವ್ಯಕ್ತಿ ಸ್ವಾಮಿ ಶಿವಾನಂದ ವಾರಾಣಸಿಯ ಸನ್ಯಾಸಿ. ಅವಿಭಜಿತ ಭಾರತದ ಸಿಲ್ಹೆಟ್ ಜಿಲ್ಲೆಯಲ್ಲಿ (ಈಗ ಬಾಂಗ್ಲಾದೇಶದಲ್ಲಿದೆ) 8 ಆಗಸ್ಟ್ 1896 ರಂದು ಜನಿಸಿದ ಸ್ವಾಮಿ ಶಿವಾನಂದರು ತಮ್ಮ ಆರನೇ ವಯಸ್ಸಿನಲ್ಲಿ ತಮ್ಮ ತಾಯಿ ಮತ್ತು ತಂದೆಯನ್ನು ಕಳೆದುಕೊಂಡರು. ಕಡು ಬಡತನದಿಂದಾಗಿ ಅವರ ಬಾಲ್ಯದ ದಿನಗಳಲ್ಲಿ ಬೇಯಿಸಿದ ಅಕ್ಕಿ ಗಂಜಿ ಮಾತ್ರ ಸೇವಿಸಬೇಕಿತ್ತು.
ಅವರ ಹೆತ್ತವರ ನಿಧನದ ನಂತರ ಸ್ವಾಮಿ ಶಿವಾನಂದರನ್ನು ಪಶ್ಚಿಮ ಬಂಗಾಳದ ನಬದ್ವೀಪ್ನಲ್ಲಿರುವ ಅವರ ಗುರೂಜಿ ಆಶ್ರಮಕ್ಕೆ ಕರೆತರಲಾಯಿತು. ಗುರು ಓಂಕಾರಾನಂದ ಗೋಸ್ವಾಮಿ ಅವರು ಶಿವಾನಂದರನ್ನು ಅವರನ್ನು ಬೆಳೆಸಿದರು. ಶಾಲಾ ಶಿಕ್ಷಣವಲ್ಲದೆ ಯೋಗ ಸೇರಿದಂತೆ ಎಲ್ಲಾ ಪ್ರಾಯೋಗಿಕ ಮತ್ತು ಆಧ್ಯಾತ್ಮಿಕ ಶಿಕ್ಷಣವನ್ನು ನೀಡಿದರು. ''ಜಗತ್ತೇ ನನ್ನ ಮನೆ, ಅದರ ಜನರು ನನ್ನ ತಂದೆ-ತಾಯಿಗಳು, ಅವರನ್ನು ಪ್ರೀತಿಸುವುದು ಮತ್ತು ಸೇವೆ ಮಾಡುವುದು ನನ್ನ ಧರ್ಮ'' ಎಂಬ ಸರಳ ನಂಬಿಕೆಯನ್ನು ಅವರು ಚಿಕ್ಕ ವಯಸ್ಸಿನಿಂದಲೂ ರೂಢಿಸಿಕೊಂಡಿದ್ದಾರೆ.
|
ಸರಳ ಜೀವನ
125 ವರ್ಷ ವಯಸ್ಸಿನವರಾದ ಅವರು ಮುಂಜಾನೆ ಯೋಗ, ಎಣ್ಣೆ ರಹಿತ ಬೇಯಿಸಿದ ಆಹಾರ ಮತ್ತು ಮನುಕುಲಕ್ಕೆ ನಿಸ್ವಾರ್ಥ ಸೇವೆಯೊಂದಿಗೆ ಶಿಸ್ತುಬದ್ಧ ಮತ್ತು ನಿಯಂತ್ರಿತ ಜೀವನವನ್ನು ನಡೆಸುತ್ತಿದ್ದಾರೆ. ಯೋಗ ಆರೋಗ್ಯಕರ ಜೀವನವನ್ನು ನಡೆಸಲು ಮಾರ್ಗವಾಗಿದೆ ಎಂದು ಅವರು ನಂಬುತ್ತಾರೆ. ಇದು ಇಂದ್ರಿಯಗಳು, ಮನಸ್ಸು ಮತ್ತು ಚಿತ್ತವನ್ನು ನಿಯಂತ್ರಿಸುತ್ತದೆ. ಮಾತ್ರವಲ್ಲ್ದೆ ಇದನ್ನು ಅವರು ದೇವರು ಮತ್ತು ದೈವತ್ವಕ್ಕೆ ಒಂದು ಮಾರ್ಗವಾಗಿದೆ ಎಂದು ನಂಬುತ್ತಾರೆ.
ರಾಷ್ಟ್ರಪತಿ ಭವನದ ಪ್ರಕಟಣೆಯ ಪ್ರಕಾರ, ಅವರು ಗಂಟೆಗಳ ಕಾಲ ಯೋಗ ಮಾಡುವಷ್ಟು ಬಲಶಾಲಿಯಾಗಿದ್ದಾರೆ. ಶಿವಾನಂದರು ನೆಲದ ಮೇಲೆ ಹಾಸಿದ ಚಾಪೆಯ ಮೇಲೆ ಮಲಗುತ್ತಾರೆ ಮತ್ತು ಮರದ ಚಪ್ಪಡಿಯನ್ನು ದಿಂಬಾಗಿ ಬಳಸುತ್ತಾರೆ. ಯಾವುದೇ ವೈದ್ಯಕೀಯ ತೊಡಕುಗಳಿಲ್ಲದೆ ಫಿಟ್ ಆಗಿರುವ ಇವರು ಪ್ರತಿದಿನ ಯೋಗಾಭ್ಯಾಸ ಮಾಡುತ್ತಾರೆ ಮತ್ತು ತಾವೇ ಎಲ್ಲಾ ವಿಧಿವಿಧಾನಗಳನ್ನು ಮಾಡುತ್ತಾರೆ.
|
'ಜೀವಂತ ದೇವರು'
ಸ್ವಾಮಿ ಶಿವಾನಂದರು ಕಳೆದ 50 ವರ್ಷಗಳಿಂದ ಪುರಿಯಲ್ಲಿ ಕುಷ್ಠರೋಗ ಪೀಡಿತರ ಸೇವೆ ಮಾಡುತ್ತಿದ್ದಾರೆ. ಅವರು ಕನಿಷ್ಠ 400-600 ಕುಷ್ಠರೋಗ ಪೀಡಿತ ಭಿಕ್ಷುಕರನ್ನು ಅವರ ಗುಡಿಸಲುಗಳಲ್ಲಿ ವೈಯಕ್ತಿಕವಾಗಿ ಭೇಟಿ ಮಾಡುವ ಮೂಲಕ ಪುರಿಯಲ್ಲಿ ಘನತೆಯಿಂದ ಸೇವೆ ಸಲ್ಲಿಸಿದ್ದಾರೆ.
ಸರ್ಕಾರ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಅವರ ಬಗ್ಗೆ ಹೀಗೆ ಬರೆದಿದೆ, "ಅವರನ್ನು ಜೀವಂತ ದೇವರೆಂದು ಹೇಳಲಾಗಿದೆ. ಲಭ್ಯವಿರುವ ಅತ್ಯುತ್ತಮ ವಸ್ತುಗಳೊಂದಿಗೆ ಅವರು ಸೇವೆ ಸಲ್ಲಿಸುತ್ತಾರೆ. ಜೊತೆಗೆ ಆಹಾರ ಪದಾರ್ಥಗಳು, ಹಣ್ಣುಗಳು, ಬಟ್ಟೆಗಳು, ಚಳಿಗಾಲದ ಉಡುಪುಗಳು, ಹೊದಿಕೆಗಳು, ಸೊಳ್ಳೆ ಪರದೆಗಳು, ಅಡುಗೆ ಪಾತ್ರೆಗಳಂತಹ ವಿವಿಧ ವಸ್ತುಗಳನ್ನು ಅಗತ್ಯಕ್ಕೆ ತಕ್ಕಂತೆ ಒದಗಿಸುತ್ತಾರೆ"
ಸಂತ್ರಸ್ತ ಜನರಿಗೆ ವಿವಿಧ ವಸ್ತುಗಳನ್ನು ಹಸ್ತಾಂತರಿಸಲು ಅವರು ಇತರರನ್ನು ಪ್ರೋತ್ಸಾಹಿಸುತ್ತಾರೆ. ಇದರೊಂದಿಗೆ ಅವರು ಸಂತೋಷವನ್ನು ಅನುಭವಿಸುತ್ತಾರೆ. ಜೊತೆಗೆ ತಮ್ಮ ಈ ಸೇವೆಯಿಂದ ಮತ್ತಿತರರಿಗೆ ಮಾನವೀಯ ಕೆಲಸ ಮಾಡಲು ಪ್ರೇರೇಪಿಸುತ್ತಾರೆ. ಸ್ವಾಮಿ ಶಿವಾನಂದ ಅವರು ಬೆಂಗಳೂರಿನಲ್ಲಿ 2019 ರಲ್ಲಿ ಯೋಗ ರತ್ನ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳನ್ನು ಸ್ವೀಕರಿಸಿದ್ದಾರೆ. 30 ನವೆಂಬರ್ 2019 ರಂದು ಸಮಾಜಕ್ಕೆ ಅವರ ಕೊಡುಗೆಗಾಗಿ ರೆಸ್ಪೆಕ್ಟ್ ಏಜ್ ಇಂಟರ್ನ್ಯಾಶನಲ್ನಿಂದ ಬಸುಂಧರ ರತನ್ ಪ್ರಶಸ್ತಿಯನ್ನು ಸಹ ಅವರಿಗೆ ನೀಡಲಾಯಿತು.
ಸರಳತೆಗೆ ಶ್ಲಾಘನೆ
ರಾಷ್ಟ್ರಪತಿ ಭವನದಲ್ಲಿ ಗೌರವ ಸ್ವೀಕರಿಸಿದ 125 ವರ್ಷ ವಯಸ್ಸಿನ ಅವರು ಸರಳವಾದ ಬಿಳಿ ಕುರ್ತಾ ಮತ್ತು ಧೋತಿಯನ್ನು ಧರಿಸಿದ್ದರು. ಇದು ಟ್ವಿಟರ್ನಲ್ಲಿ ಜನರ ಹೃದಯವನ್ನು ಗೆದ್ದಿದೆ. ಮಂತ್ರಿ, ಕೈಗಾರಿಕೋದ್ಯಮಿಗಳಿಂದ ಹಿಡಿದು ಸಾಮಾನ್ಯರವರೆಗೂ ಎಲ್ಲರೂ ಅವರನ್ನು ಶ್ಲಾಘಿಸಿ ಅವರ ಸರಳತೆಯನ್ನು ಕೊಂಡಾಡಿದ್ದಾರೆ.
ಈವರೆಗೆ ಪದ್ಮಶ್ರೀ ಪ್ರಶಸ್ತಿ ಪಡೆದವರಲ್ಲಿ ಮೊದಲಿಗರು ನನ್ನ ಹೃದಯ ಸ್ಪರ್ಶ ಮಾಡಿದ್ದಾರೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ. ಮಹೀಂದ್ರಾ ಗ್ರೂಪ್ನ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಕೂಡ ದಿಗ್ಭ್ರಮೆಗೊಂಡಿದ್ದಾರೆ. ಸ್ವಾಮಿ ಶಿವಾನಂದರ ಬಗ್ಗೆ ಅವರು ಮೆಚ್ಚುಗೆಯನ್ನು ಹಂಚಿಕೊಂಡಿದ್ದಾರೆ. ಅವರ ಘನತೆ ವಿನಮ್ರ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಕೂಡ 125 ವರ್ಷ ವಯಸ್ಸಿನ ಸ್ವಾಮಿ ಶಿವಾನಂದರ ನಮ್ರತೆಯನ್ನು ಶ್ಲಾಘಿಸಿದ್ದಾರೆ. ಸ್ವಾಮಿ ಶಿವಾನಂದ ಅವರು ಗೌರವವನ್ನು ಸ್ವೀಕರಿಸುವ ವಿಡಿಯೊ ಈಗಾಗಲೇ 300,000 ವೀಕ್ಷಣೆಗಳನ್ನು ಮತ್ತು ಮಿಲಿಯನ್ಗಿಂತಲೂ ಹೆಚ್ಚು ಲೈಕ್ಸ್ಗಳನ್ನು ಗಳಿಸಿದೆ.