ಮೋದಿ ಸಂಪುಟಕ್ಕೆ ಅಮಿತ್, ಅಧ್ಯಕ್ಷ ಸ್ಥಾನಕ್ಕೆ ಯಾರು ಸೂಕ್ತ?
Recommended Video
ನವದೆಹಲಿ ಮೇ 28: ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರವು ತನ್ನ ಎರಡನೇ ಅವಧಿಯ ಅಧಿಕಾರವನ್ನು ಸ್ಥಾಪಿಸಲು ಮುಂದಾಗಿದೆ. ಈ ನಡುವೆ ಮೋದಿ 2.0 ಸಚಿವ ಸಂಪುಟಕ್ಕೆ ಯಾರು ಸೇರಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಸಚಿವ ಸಂಪುಟ ವಿಸ್ತರಣೆ ಜೊತೆಗೆ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೂ ಹೊಸಬರನ್ನು ನೇಮಿಸುವ ಸಾಧ್ಯತೆ ಕಂಡು ಬಂದಿದೆ.
ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಗಾಂಧಿನಗರ ಕ್ಷೇತ್ರದಿಂದ ಸ್ಪರ್ಧಿಸಿ ಭಾರಿ ಅಂತರದಿಂದ ಗೆಲುವು ದಾಖಲಿಸಿ ಸಂಸದರಾಗಿದ್ದಾರೆ. ಮೋದಿ ಸಂಪುಟಕ್ಕೆ ಸೇರ್ಪಡೆಗೊಂಡು ಮೋದಿ ಕನಸಿನ ಯೋಜನೆಗಳನ್ನು ಸಾಕಾರಗೊಳಿಸುವ ಹೊಣೆ ಹೊರಲಿದ್ದಾರೆ ಎಂಬ ಮಾಹಿತಿಯಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ ಬದಲಾವಣೆ: ಅಮಿತ್ ಶಾ ನಂತರ ಯಾರು?
ಮೋದಿ ಸಂಪುಟ ಸೇರಿದರೆ, ಪಕ್ಷದ ಅಧ್ಯಕ್ಷ ಹುದ್ದೆ ತೊರೆಯಬೇಕಾಗುತ್ತದೆ. ಒಬ್ಬ ವ್ಯಕ್ತಿ ಒಂದು ಹುದ್ದೆ ಎಂಬ ಪಕ್ಷದ ಸಿದ್ಧಾಂತ ಎಲ್ಲರಿಗೂ ಅನ್ವಯವಾಗಲಿದೆ. ಹೀಗಾಗಿ, ಅಧ್ಯಕ್ಷ ಹುದ್ದೆಗೆ ಹೊಸ ಅಭ್ಯರ್ಥಿಯನ್ನು ಹುಡುಕಬೇಕಾಗುತ್ತದೆ. ಆದರೆ, ಅಮಿತ್ ಶಾ ಅವರಿಗೆ ಬದಲಿ ಅಭ್ಯರ್ಥಿ ಹುಡುಕಾಟ ಅಷ್ಟು ಸುಲಭವಲ್ಲ. ಪಕ್ಷ ಸಂಘಟನೆ, ದಕ್ಷಿಣ ಭಾರತದಲ್ಲಿ ಬಿಜೆಪಿ ಬೆಳವಣಿಗೆ, ಮಿತ್ರ ಪಕ್ಷಗಳ ಜೊತೆ ಹೊಂದಾಣಿಕೆ ಸೇರಿದಂತೆ ಅನೇಕ ಗುರುತರ ಜವಾಬ್ದಾರಿಯನ್ನು ಹೊರಬಲ್ಲ ಸಮರ್ಥರನ್ನು ಆಯ್ಕೆ ಮಾಡಬೇಕಾಗುತ್ತದೆ.
ಸದ್ಯಕ್ಕೆ ಅಧ್ಯಕ್ಷ ಸ್ಥಾನವನ್ನು ತುಂಬಬಲ್ಲ ಸಮರ್ಥರಲ್ಲಿ ಕೇಂದ್ರ ಆರೋಗ್ಯ ಸಚಿವ ಜಗತ್ ಪಿ .ನಡ್ಡಾ ಹಾಗೂ ಧರ್ಮೇಂದ್ರ ಪ್ರಧಾನ್ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ ಶಾ ಅವರ ಪಾತ್ರವನ್ನು ತುಂಬುವುದು ಸುಲಭವಲ್ಲ ಎಂಬ ವಿಶ್ಲೇಷಣೆಗಳೂ ಪಕ್ಷದ ವಲಯದಲ್ಲಿ ನಡೆಯುತ್ತಿವೆ.
ಜಗತ್ ಪಿ ನಡ್ಡಾ ಹೆಸರು ಕೇಳಿ ಬಂದಿದೆ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಸಭಾ ಸಂಸದ(ಹಿಮಾಚಲ ಪ್ರದೇಶ)ಜಗತ್ ಪಿ ನಡ್ಡಾ ಅವರ ಹೆಸರು ಕೇಳಿ ಬಂದಿದೆ. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶ ರಾಜ್ಯದ ಉಸ್ತುವಾರಿ ವಹಿಸಿಕೊಂಡಿದ್ದ ಜೆಪಿ ನಡ್ಡಾ ಅವರು 80 ಸ್ಥಾನಗಳ ಪೈಕಿ 62 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿದೆ. ರಾಜಕೀಯ ತಂತ್ರಗಾರಿಕೆಯಲ್ಲಿ ನಿಪುಣರಾದ ನಡ್ಡಾ ಅವರು ಅಮಿತ್ ಅವರ ಸ್ಥಾನ ತುಂಬಲು ಸಮರ್ಥರು ಎನ್ನಬಹುದು.
ಧರ್ಮೇಂದ್ರ ಪ್ರಧಾನ್
ಸಂಘಟನಾ ಚತುರರಾಗಿ ಗುರುತಿಸಿಕೊಂಡಿರುವ ಧರ್ಮೇಂದ್ರ ಪ್ರಧಾನ್ ಅವರು 2014ರ ಬಿಹಾರ ಲೋಕಸಭೆ ಚುನಾವಣೆ, ಈ ಬಾರಿಯ ಒಡಿಶಾ ಚುನಾವಣೆಯಲ್ಲಿ ಬಿಜೆಪಿ ಪ್ರಾಬಲ್ಯ ಮೆರೆಯಲು ಕಾರಣವಾಗಿದ್ದಾರೆ. ಒಡಿಶಾ ಲೋಕಸಭೆಯಲ್ಲಿ ಶೇ 21.9ರಿಂದ ಶೇ 38.37ರಷ್ಟು ಮತಗಳಿಕೆ ಪಡೆಯಲು ಕಾರಣರಾದವರು. ಬಿಜೆಡಿ ಮತಗಳಿಕೆ 2014ರಲ್ಲಿ 44.1% ರಿಂದ 42.76%ಗೆ ಕುಸಿದಿದೆ. ಒಡಿಶಾ ವಿಧಾನಸಭೆಯಲ್ಲಿ 2014ರಲ್ಲಿ ಬಿಜೆಪಿ 18.2% ಮತ ಗಳಿಕೆ ಕಂಡಿತ್ತು. 2019ರಲ್ಲಿ 32.5%ಗೇರಿದೆ. ಇದೆಲ್ಲವೂ ಪ್ರಧಾನ್ ಪ್ರಯತ್ನದಿಂದ ಸಾಧ್ಯವಾಗಿದೆ. ಆರೆಸ್ಸೆಸ್, ಮೋದಿ, ಅಮಿತ್ ಶಾ ಎಲ್ಲರಿಗೂ ಆಪ್ತರಾಗಿರುವುದರಿಂದ ಧರ್ಮೇಂದ್ರ ಅವರಿಗೆ ಅಧ್ಯಕ್ಷ ಪಟ್ಟ ಒಲಿಯಬಹುದು.
ಬಿಎಲ್ ಸಂತೋಷ್ ಗೆ ಅವಕಾಶ
ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರಿಗೂ ಅವಕಾಶ ಇಲ್ಲದೇ ಇಲ್ಲ. ರಾಜ್ಯದಲ್ಲಿ 25 ಲೋಕಸಭಾ ಸ್ಥಾನಗಳು ಬರುವಲ್ಲಿ ಅವರ ಪಾತ್ರ ಇದೆ. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನ ಗೆಲ್ಲುವಲ್ಲಿಯೂ ಅವರ ಶ್ರಮ ಮಹತ್ವವಾದುದು. ಅವರನ್ನು ಬಿಜೆಪಿ ರಾಷ್ಟ್ರ ಮಟ್ಟದ ಸಂಘಟನೆಗೆ ಕರೆಸಿಕೊಳ್ಳಬೇಕೆಂದು ಈ ಮೊದಲೇ ಚರ್ಚೆ ಎದ್ದಿತ್ತು. ಈಗ ಅಮಿತ್ ಶಾ ನಿರ್ಗಮನದಿಂದ ಉಂಟಾಗುವ ನಿರ್ವಾತವನ್ನು ಸಂತೋಷ್ ಅವರು ತುಂಬಿದರೆ ಆಶ್ಚರ್ಯವೇನೂ ಇಲ್ಲ. ಆದರೆ ಸಂತೋಷ್ ಉಸ್ತುವಾರಿಯ ಉಳಿದ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿಲ್ಲ.
ಇನ್ನು ಯಾರು ಯಾರಿಗೆ ಅವಕಾಶ
ಪ್ರಸ್ತುತ ಕೇಳಿಬರುತ್ತಿರುವ ಹೆಸರುಗಳೆಂದರೆ, ಶಿವರಾಜ್ ಸಿಂಗ್ ಚೌಹಾಣ್, ಸ್ಮೃತಿ ಇರಾನಿ, ರಾಜನಾಥ್ ಸಿಂಗ್ ಈ ಮೂವರ ಹೆಸರುಗಳು ಕೇಳಿಬರುತ್ತಿದೆ. ಇದರಲ್ಲಿ ರಾಜನಾಥ್ ಸಿಂಗ್ ಅವರು ಈಗಾಗಲೇ ಒಮ್ಮೆ ಪಕ್ಷದ ಅಧ್ಯಕ್ಷರಾಗಿದ್ದರು. ಸ್ಮೃತಿ ಅವರಿಗೆ ಕೇಂದ್ರ ಮಂತ್ರಿ ಮಂಡಲದಲ್ಲಿ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಿದೆ. ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ವಯಸ್ಸಿನ ಕಾರಣಕ್ಕೆ ಹುದ್ದೆ ನಿರಾಕರಿಸುವ ಸಾಧ್ಯತೆಯೂ ಇದೆ. ಇನ್ನು ಸಾಮಾನ್ಯವಾಗಿ ಉತ್ತರ ಭಾರತದವರೇ ಬಿಜೆಪಿಯ ಅಧ್ಯಕ್ಷ ಸ್ಥಾನವನ್ನು ನಿಭಾಯಿಸಿದ್ದಾರೆ. ಹಾಗಾಗಿ ಈ ಬಾರಿ ಸಹ ಉತ್ತರ ಭಾರತದವರೇ ಬಿಜೆಪಿ ಅಧ್ಯಕ್ಷರಾಗುವ ಸಾಧ್ಯತೆ ಇದೆ.