ದೆಹಲಿ ಗಲಭೆಗೂ ಮುನ್ನ ವಾಟ್ಸಾಪ್ ಗ್ರೂಪ್ಗಳಲ್ಲಿ ನಡೆದಿತ್ತು ಸಂಚು!
ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರೋಧವಾಗಿ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಇದುವರೆಗೂ 47 ಜನರ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 436 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದೆ ಹಾಗೂ 1427 ಮಂದಿಯನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಫೆಬ್ರವರಿ 23, 24, 25 ರಂದು ನಡೆದ ಗಲಭೆ ಬಳಿಕ ಈಶಾನ್ಯ ದೆಹಲಿ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಎಸ್ ಎನ್ ಶ್ರೀವಾಸ್ತವರನ್ನು ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
ದೆಹಲಿ ಹಿಂಸಾಚಾರ ಒಂದು ಪ್ರಾಯೋಜಿತ ನರಮೇಧ: ದೀದಿ
ಈಗಾಗಲೇ ದೆಹಲಿ ಗಲಭೆ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಕೆಲವು ಆಘಾತಕಾರಿ ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ. ದೆಹಲಿ ಹಿಂಸಾಚಾರ ನಡೆಯುವುದಕ್ಕೂ ಮೊದಲು ಪೂರ್ವ ನಿಯೋಜಿತ ಸಂಚು ನಡೆದಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ....
ವಾಟ್ಸಾಪ್ ಗ್ರೂಪ್ನಲ್ಲಿ ವಿಡಿಯೋ ಪ್ರಚಾರ
ಸಿಎಎ ಪರ ಮತ್ತು ಸಿಎಎ ವಿರೋಧದ ಪ್ರತಿಭಟನೆಕಾರರು ವಾಟ್ಸಾಪ್ ಗ್ರೂಪ್ಗಳನ್ನು ಕ್ರಿಯೇಟ್ ಮಾಡಿಕೊಂಡಿದ್ದರು ಎಂಬ ಮಾಹಿತಿಯನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಗ್ರೂಪ್ಗಳ ಮೂಲಕ ಪ್ರಚೋದನಕಾರಿ ವಿಡಿಯೋ, ಆಡಿಯೋ, ಸಂದೇಶಗಳನ್ನು ರವಾನಿಸಿದ್ದಾರೆ ಎಂದು ತಿಳಿಸಿದ್ದಾರೆ. ಎಲ್ಲೋ ಯಾವಾಗಲೋ ನಡೆದ ಕೆಲವು ಗಲಭೆ ವಿಡಿಯೋಗಳನ್ನು, ಫೋಟೋಗಳನ್ನು ಸಂಗ್ರಹಿಸಿ ಗ್ರೂಪ್ನಲ್ಲಿ ಪ್ರಚಾರ ಮಾಡಿದ್ದಾರೆ, ಇದು ದೆಹಲಿ ಹಿಂಸಾಚಾರದಲ್ಲೂ ಪರಿಣಾಮ ಬೀರಿದೆ ಎಂದು ಪೊಲೀಸ್ ಮಾಹಿತಿ ನೀಡಿದೆ.
ವರ್ಷದ ಹಳೆ ವಿಡಿಯೋಗಳನ್ನು ಮತ್ತೆ ಪ್ರಚಾರ
ಪೊಲೀಸರು ವಾಟ್ಸಾಪ್ ಗ್ರೂಪ್ಗಳಲ್ಲಿ ಗುರುತಿಸಿರುವ ವಿಡಿಯೋದಲ್ಲಿ ಪ್ರತಿಭಟನೆಗಾಗಿ ಗನ್ ಮತ್ತು ಇತರೆ ಆಯುಧಗಳನ್ನು ತರುತ್ತಿರುವಂತಹ ವಿಡಿಯೋ ಇದೆ. ಈ ವಿಡಿಯೋ ಬಳಸಿ ದೆಹಲಿಯಲ್ಲಿ ಗಲಭೆ ಮಾಡಲು ಇಂತಹ ಆಯುಧಗಳನ್ನು ತರುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ಇದು ಬಹಳ ಹಳೆ ವಿಡಿಯೋ ಎಂದು ಪೊಲೀಸರು ತಿಳಿಸಿದ್ದಾರೆ. ವರ್ಷಗಳ ಹಿಂದೆ ಗ್ಯಾಂಗ್ ವೊಂದನ್ನು ಬಂಧಿಸಿದ ದೆಹಲಿ ಪೊಲೀಸರು ಆರೋಪಿಗಳು ಬಂಧಿಸಿದ್ದರು. ಈ ಕುರಿತು ಪ್ರೆಸ್ ಮೀಟ್ ಮಾಡುವ ಸಂದರ್ಭದಲ್ಲಿ ಆಯುಧಗಳನ್ನು ತೆಗೆದು ತೋರಿಸಿದ್ದರು. ಆ ವಿಡಿಯೋ ಎಡಿಟ್ ಮಾಡಿ ವಾಟ್ಸಾಪ್ ನಲ್ಲಿ ಪ್ರಚಾರ ಮಾಡಿದ್ದಾರೆ ಎನ್ನಲಾಗಿದೆ.
ವಾಟ್ಸಾಪ್ ನಲ್ಲಿ ಪೂರ್ತಿ ಪ್ಲಾನ್
ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬಹುತೇಕ ಯೋಜನೆಯನ್ನು ವಾಟ್ಸಾಪ್ ಗ್ರೂಪ್ನಲ್ಲಿ ಮಾಡಲಾಗಿದೆ. ಎಲ್ಲಿಗೆ ಬರಬೇಕು, ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎನ್ನುವುದು ಇದೇ ವಾಟ್ಸಾಪ್ ಗ್ರೂಪ್ಗಳಲ್ಲಿ ಚರ್ಚೆಯಾಗಿದೆ. ದೆಹಲಿಯಲ್ಲಿ ಹಿಂಸೆ ನಡೆದ ಸಂದರ್ಭದಲ್ಲಿ ಅವರ ಫೋನ್ ಸಿಗ್ನಲ್ ಗಳು ಎಲ್ಲಿ ಇದ್ದವು ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಮ್ಮ ಪ್ರಾಣಗಳನ್ನು ಕಾಪಾಡಿಕೊಳ್ಳಬೇಕು ಎಂದರೆ ರಸ್ತೆಗೆ ಬರಬೇಕು ಎಂದು ವಾಟ್ಸಾಪ್ ಗ್ರೂಪ್ ಗಳಲ್ಲಿ ಮೆಸೆಜ್ ಮಾಡಿರುವುದನ್ನು ಪೊಲೀಸರ ಗಮನಕ್ಕೆ ಬಂದಿದೆ.
ತನಿಖೆ ಮುಂದುವರಿದಿದೆ
ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಎರಡು ವಿಶೇಷ ತನಿಖಾ ತಂಡ ರಚನೆಯಾಗಿದೆ. 'ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಾವು ಈವರೆಗೆ 436 ಎಫ್ ಐ ಆರ್ ದಾಖಲಿಸಿದ್ದೇವೆ, ಶಸ್ತ್ರಾಸ್ತ್ರ ಕಾಯ್ದೆಯಡಿ 46 ಪ್ರಕರಣಗಳು ದಾಖಲಾಗಿವೆ. 34 ಜನರನ್ನು ಬಂಧಿಸಿದ್ದೇವೆ ಮತ್ತು ಇನ್ನೂ 1427 ಜನರನ್ನು ವಶಕ್ಕೆ ಪಡೆದಿದ್ದೇವೆ' ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.