ಯುಯು ಲಲಿತ್ ಪ್ರಕರಣದಿಂದ ಹಿಂದೆ ಸರಿದಿದ್ದಕ್ಕೆ ವಿಹಿಂಪ ಹೇಳಿದ್ದೇನು?
ನವದೆಹಲಿ, ಜನವರಿ 10: ಅಯೋಧ್ಯಾ ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆಯಲ್ಲಿ ಐವರು ನ್ಯಾಯಮೂರ್ತಿಗಳ ಪೈಕಿ ಒಬ್ಬರಾಗಿದ್ದ ಉದಯ್ ಯು.ಲಲಿತ್ ಹಿಂದಕ್ಕೆ ಸರಿದಿರುವುದು ಸದ್ಯಕ್ಕಂತೂ ಸುದ್ದಿಯಾಗಿದೆ. ಇದಕ್ಕೆ ಕಾರಣ ಆಗಿರುವುದು ಹಿತಾಸಕ್ತಿ ಸಂಘರ್ಷದ ಆರೋಪ. ಈ ಬಗ್ಗೆ ವಿಶ್ವಹಿಂದೂ ಪರಿಷದ್ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಅಯೋಧ್ಯೆ ವಿಚಾರಣೆ ಜ.29 ಕ್ಕೆ ಮುಂದೂಡಿದ ಸುಪ್ರೀಂ ಕೋರ್ಟ್
ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದಲ್ಲಿ ಒಬ್ಬರಾದ ನ್ಯಾಯಮೂರ್ತಿ ಉದಯ್ ಯು.ಲಲಿತ್ ಅವರ ಮೇಲೆ ಬಂದಿರುವ ಆಕ್ಷೇಪ ಬಹಳ 'ನೋವಿನ' ಸಂಗತಿ ಹಾಗೂ ಸತ್ಯಕ್ಕೆ ದೂರವಾದದ್ದು. ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆ ಹಂತದಲ್ಲಿ ಇರಬಹುದು ಅಥವಾ ಅರ್ಜಿ ಸಲ್ಲಿಕೆಯಲ್ಲಿ ಇರಬಹುದು ಅವರೆಂದೂ ವಕೀಲಿಕೆ ಮಾಡಿಲ್ಲ ಎನ್ನಲಾಗಿದೆ.
1997ರಲ್ಲಿ ಲಲಿತ್ ಅವರು ಕಲ್ಯಾಣ್ ಸಿಂಗ್ ಗೆ ವಕೀಲರಾಗಿದ್ದರು. ಅದು ನ್ಯಾಯಾಂಗ ನಿಂದನೆ ಪ್ರಕರಣ. ಅದಕ್ಕೂ ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆಗೂ ಯಾವುದೇ ಸಂಬಂಧ ಇಲ್ಲ. ಈ ಪ್ರಕರಣವನ್ನು ಇನ್ನಷ್ಟು ಮುಂದಕ್ಕೆ ತಳ್ಳುವ ಉದ್ದೇಶದಿಂದ ಹೀಗೆ ಮಾಡಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆಲಸಕ್ಕೆ ಬಾರದ ವಿಚಾರವೊಂದನ್ನು ಮುಂದು ಮಾಡಿ, ರಾಮ ಜನ್ಮಭೂಮಿ ವಿಚಾರಣೆಯನ್ನು ಎದುರು ಪಕ್ಷದವರು ಮುಂದಕ್ಕೆ ಹಾಕಿಸುತ್ತಾರೆ ಎಂಬ ಆತಂಕ ನಿಜವಾಯಿತು. ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠದ ಆದೇಶಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದು ಮೇಲ್ನೋಟಕ್ಕೆ ನಿಷ್ಪ್ರಯೋಜಕ. ಈ ವಿಚಾರದಲ್ಲಿ ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಯೇ ಅಂತಿಮ. ಆ ಪೀಠದ ಬಗ್ಗೆ ನಿರ್ಧಾರ ಹಾಗೂ ಯಾರು ಅಲ್ಲಿ ಕೂರಬೇಕು ಎಂಬುದನ್ನು ಅವರೇ ತೀರ್ಮಾನ ಮಾಡುತ್ತಾರೆ ಎಂದು ವಿಎಚ್ ಪಿ ಹೇಳಿದೆ.