ಸಾವಿನ ಕೊನೆಯ ಕ್ಷಣದಲ್ಲೂ ವೃತ್ತಿಪರತೆ ಮೆರೆದ ಸುಷ್ಮಾ ಸ್ವರಾಜ್
ನವದೆಹಲಿ, ಆಗಸ್ಟ್ 7: ವಿದೇಶಗಳಲ್ಲಿ ಯಾವುದೋ ಮೂಲೆಯಲ್ಲಿ ಭಾರತೀಯರು ಸಮಸ್ಯೆಗೆ ಈಡಾಗಿದ್ದಾಗ ಹಗಲು ರಾತ್ರಿಯೆನ್ನದೆ ಸುಷ್ಮಾ ಸ್ವರಾಜ್ ಸ್ಪಂದಿಸುತ್ತಿದ್ದರು.
ಭಾರತದ ಇಲ್ಲಿಯವರೆಗೆ ಇಂತಹ ವಿದೇಶಾಂಗ ಸಚಿವರನ್ನೇ ನೋಡಿರಲಿಲ್ಲ. ವಿದೇಶಾಂಗ ಇಲಾಖೆಯ ಸಾಕಷ್ಟು ವಿಚಾರಗಳನ್ನು ಪ್ರಧಾನಿ ಕಚೇರಿ ನೇರವಾಗಿ ನಿಭಾಯಿಸುತ್ತಿದ್ದರೂ ಇಂತಹ ಸೂಕ್ಷ್ಮ ಹಾಗೂ ಭಾವನಾತ್ಮಕ ವಿಚಾರಗಳಲ್ಲಿ ಸುಷ್ಮಾ ಜನ ಮೆಚ್ಚುಗೆ ಪಡೆದಿದ್ದರು.
ಸುಷ್ಮಾ ಸ್ವರಾಜ್ ನೆನಪು ಹಸಿರಾಗಿಸುವ ಸುಂದರ ಚಿತ್ರಗಳು
ಪ್ರತಿ ಕ್ಷಣದಲ್ಲೂ ಕರ್ತವ್ಯ ನಿಷ್ಠೆ ಹಾಗೂ ರಾಷ್ಟ್ರೀಯತೆಯ ಪ್ರಜ್ಞೆ ಅವರಲ್ಲಿ ಕಾಣಿಸುತ್ತಿತ್ತು. ಇದು ಅವರ ಸಾವಿನ ಕೊನೆಯ ಕ್ಷಣದಲ್ಲಿಯೂ ಮತ್ತೊಮ್ಮೆ ಖಾತ್ರಿಯಾಯಿತು.
ಅಂಬಾಲ ಕಂಟೋನ್ಮೆಂಟ್ ನ ಗಟ್ಟಿಗಿತ್ತಿ ಹೆಣ್ಣುಮಗಳು ಸುಷ್ಮಾ ಸ್ವರಾಜ್
ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಇಂದು ರಾತ್ರಿ ತೀವ್ರ ಹೃದಯಾಘಾತಕ್ಕೆ ಒಳಪಟ್ಟು ಗಂಭೀರ ಸ್ಥಿತಿಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದವರು, ಅಲ್ಲಿಯೇ ಕೊನೆ ಉಸಿರೆಳೆದಿದ್ದಾರೆ.
ಹರೀಶ್ ಸಾಳ್ವೆ ಒಂದು ರೂಪಾಯಿ ಶುಲ್ಕ
ಪಾಕಿಸ್ತಾನದಲ್ಲಿ ಮರಣದಂಡನೆಗೆ ಒಳಗಾಗಿ ಈಗ ಶಿಕ್ಷೆಯ ಅಮಾನತಿನಲ್ಲಿರುವ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾದವ್ ಪರವಾಗಿ ಅಂತಾರಾಷ್ಟ್ರೀಯ ಕೋರ್ಟ್ನಲ್ಲಿ ವಾದ ಮಂಡಿಸಿದ ಖ್ಯಾತ ವಕೀಲ ಹರೀಶ್ ಸಾಳ್ವೆ ಕೇವಲ ಒಂದು ರೂಪಾಯಿ ಶುಲ್ಕ ಪಡೆಯುವುದಾಗಿ ಹೇಳಿದ್ದರು.
ಜಾಧವ್ ಗೆ ಜಯ ತಂದಿತ್ತ ವಕೀಲ ಹರೀಶ್ ಸಾಳ್ವೆ ಪರಿಚಯ
ಕೊನೆಯದಾಗಿ ಸುಷ್ಮಾ ಸ್ವರಾಜ್ ಜೊತೆ ಮಾತನಾಡಿದ್ದರು
ದೇಶದ ನಂಬರ್ ಒನ್ ವಕೀಲ ಎನಿಸಿಕೊಂಡಿರುವ ಹರೀಶ್ ಸಾಳ್ವೆ ಸುಷ್ಮಾ ಸ್ವರಾಜ್ಗೆ ಮಂಗಳವಾರ ರಾತ್ರಿ 8.50ರಷ್ಟೊತ್ತಿಗೆ ಕರೆ ಮಾಡಿದ್ದಾರೆ. ಆಗ ಹರೀಶ್ ಸಾಳ್ವೆಗೆ ಒಂದು ರೂಪಾಯಿ ಶುಲ್ಕದ ಬಗ್ಗೆ ಸುಷ್ಮಾ ಪ್ರಸ್ತಾಪಿಸಿದ್ದರಂತೆ ''ನಿಮ್ಮ ಒಂದು ರೂಪಾಯಿ ಶುಲ್ಕಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆ ಅಂತಿಮಗೊಂಡಿದೆ, ನಾಳೆ ಕಚೇರಿಗೆ ಬಂದು ಒಂದು ರೂಪಾಯಿಯನ್ನು ಪಡೆದುಕೊಳ್ಳಿ''ಎಂದು ಮನವಿ ಮಾಡಿದ್ದಂತೆ. ಈ ವಿಚಾರವನ್ನು ಖಾಸಗಿ ವಾಹಿನಿಯೊಂದಕ್ಕೆ ಖುದ್ದು ಸಾಳ್ವೆಯವರೇ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್ ವಿಧಿವಶ: ಅಂತಿಮಕಾರ್ಯದ ಸ್ಥಳ, ಸಮಯದ ಮಾಹಿತಿ
ಸುಷ್ಮಾ ವಿದೇಶಾಂಗ ಸಚಿವೆಯೂ ಅಲ್ಲ, ಆದರೂ ಕರ್ತವ್ಯ ಮರೆತಿಲ್ಲ
ಸುಷ್ಮಾ ಅವರಿಗೆ ಭಾರಿ ಹೃದಯಾಘಾತ ಆಗುವ ಕೆಲವೇ ಕೆಲವು ನಿಮಿಷಗಳ ಮುಂಚೆ ಈ ದೂರವಾಣಿ ಸಂಭಾಷಣೆ ನಡೆದಿದೆ. ಅಷ್ಟಕ್ಕೂ ಸುಷ್ಮಾ ಸ್ವರಾಜ್ ಈಗ ವಿದೇಶಾಂಗ ಸಚಿವರೂ ಅಲ್ಲ, ಆದಾಗ್ಯೂ ಹಾಲಿ ವಿದೇಶಾಂಗ ಸಚಿವ ಎಸ್ಜಿ ಶಂಕರ್ ಹಾಗೂ ವಿದೇಶಾಂಗ ಸಚಿವಾಲಯದ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸುಷ್ಮಾ ಶುಲ್ಕ ಒಂದು ರೂಪಾಯಿಯಾದರೂ ಅದರ ಪ್ರಕ್ರಿಯೆ ಬೇಗ ಮುಗಿಯುವಂತೆ ಖುದ್ದು ಆಸಕ್ತಿ ವಹಿಸಿದ್ದರು.ಇದು ಅವರ ಕೆಲಸದ ಮೇಲಿದ್ದ ಶ್ರದ್ಧೆ ಹಾಗೂ ಪ್ರೀತಿಯನ್ನು ಪ್ರದರ್ಶಿಸುತ್ತದೆ.
ಸುಷ್ಮಾ ಸ್ವರಾಜ್ ಅಂತಿಮ ಕಾರ್ಯ
ಸುಷ್ಮಾ ಸ್ವರಾಜ್ ಅವರ ಮೃತ ದೇಹವನ್ನು ಈಗಾಗಲೇ ದೆಹಲಿಯ ಅವರ ನಿವಾಸಕ್ಕೆ ತೆಗೆದುಕೊಂಡು ಹೋಗಲಾಗಿದ್ದು, ಇಂದು ರಾತ್ರಿ ಪೂರ್ತಿ ಅಲ್ಲಿಯೇ ದರ್ಶನಕ್ಕೆ ಇಡಲಾಗಿರುತ್ತದೆ. ಈಗಾಗಲೇ ಹಲವು ಬಿಜೆಪಿ ಮುಖಂಡರು ಸುಷ್ಮಾ ಸ್ವರಾಜ್ ಅವರ ದೆಹಲಿಯ ನಿವಾಸಕ್ಕೆ ಧಾವಿಸಿದ್ದಾರೆ.ಸುಷ್ಮಾ ಸ್ವರಾಜ್ ಅವರ ಮೃತ ದೇಹವನ್ನು ಬುಧವಾರ ಮಧ್ಯಾಹ್ನ 12 ಗಂಟೆ ವರೆಗೆ ಅವರ ದೆಹಲಿಯ ನಿವಾಸದಲ್ಲಿಯೇ ಇರಿಸಲಾಗುತ್ತದೆ. 12 ಗಂಟೆ ನಂತರ ಸುಷ್ಮಾ ಸ್ವರಾಜ್ ಅವರ ಮೃತದೇಹವನ್ನು ಮೆರವಣಿಗೆಯಲ್ಲಿ ಬಿಜೆಪಿ ರಾಷ್ಟ್ರೀಯ ಕೇಂದ್ರ ಕಚೇರಿಗೆ ತೆಗೆದುಕೊಂಡು ಬಂದು ಅಲ್ಲಿ ಕಾರ್ಯಕರ್ತರ ದರ್ಶನಕ್ಕೆ ಇಡಲಾಗುತ್ತದೆ.