"ರೈತರಿಗೆ ಹಣ, ಹೆಂಡ ನೀಡೋಣ" ಎಂಬ ಹೇಳಿಕೆಗೆ ರಾಕೇಶ್ ತಿಕೈಟ್ ತಿರುಗೇಟು
ನವದೆಹಲಿ, ಫೆಬ್ರವರಿ.15: ಕೇಂದ್ರ ಸರ್ಕಾರ ಜಾರಿಗೊಳಿಸಲಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಹಣ, ಎಣ್ಣೆ ಮತ್ತು ತರಕಾರಿಯನ್ನು ನೀಡೋಣ ಎಂಬ ಹರಿಯಾಣದ ಕಾಂಗ್ರೆಸ್ ನಾಯಕಿ ವಿದ್ಯಾ ರಾಣಿ ಹೇಳಿಕೆಗೆ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್ ತಿರುಗೇಟು ನೀಡಿದ್ದಾರೆ.
"ರೈತರ ಪ್ರತಿಭಟನಾ ಸ್ಥಳದಲ್ಲಿ ಎಣ್ಣೆಯ ಉಪಯೋಗವಾದರೂ ಏನಿದೆ. ಅವರು ಏಕೆ ಇಂಥ ಮಾತುಗಳನ್ನು ಆಡಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಅಂಥ ವ್ಯಕ್ತಿಗಳು ನಮ್ಮ ಹೋರಾಟಕ್ಕಾಗಿ ಏನನ್ನೂ ಮಾಡುವ ಅಗತ್ಯವಿಲ್ಲ. ಅದರಿಂದ ತಪ್ಪಾಗುವ ಸಾಧ್ಯತೆಗಳಿದ್ದು, ಹಾಗೆ ಆಗುವುದಕ್ಕೆ ಬಿಡುವುದಿಲ್ಲ ಎಂಗು ರಾಕೇಶ್ ತಿಕೈಟ್ ಎಂದಿದ್ದಾರೆ.
ರೈತರಿಗೆ ಬೇಡದ ಕೃಷಿ ಕಾಯ್ದೆ ರದ್ದುಗೊಳಿಸಬಾರದೇ ಎಂದ ಪ್ರಿಯಾಂಕಾ ಗಾಂಧಿ
"ಹಣ, ಹೆಂಡ ಮತ್ತು ತರಕಾರಿ ಸಾಮಗ್ರಿಗಳು ಸೇರಿದಂತೆ ಅವರಿಗೆ ಇಷ್ಟ ಬಂದಂತಾ ವಸ್ತುಗಳನ್ನು ಅವರು ತಮ್ಮ ಚಳವಳಿ ಮತ್ತು ಕಾರ್ಯಕ್ರಮಗಳಲ್ಲಿ ಬೇಕಿದ್ದಲ್ಲಿ ವಿತರಣೆ ಮಾಡಲಿ. ರೈತರ ಹೋರಾಟದಲ್ಲಿ ಇಂಥ ಪ್ರಯತ್ನಕ್ಕೆ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ರಾಕೇಶ್ ತಿಕೈಟ್ ಖಡಕ್ ಆಗಿ ಹೇಳಿದ್ದಾರೆ.
ಕಾಂಗ್ರೆಸ್ ನಾಯಕಿ ವಿದ್ಯಾರಾಣಿ ಹೇಳಿಕೆ:
ರೈತರೊಂದಿಗೆ ಕೃಷಿ ಕಾಯ್ದೆಗಳ ವಿರುದ್ಧದ ಹೋರಾಟದಲ್ಲಿ ನಾವೂ ಕೈಜೋಡಿಸೋಣ. ಇದರಿಂದ ಹೊಸ ಶಕ್ತಿ ಮತ್ತು ಗುರಿಯ ಜೊತೆಗೆ ಪಕ್ಷಕ್ಕೆ ಪುನರ್ಜನ್ಮ ಸಿಗಲಿದೆ ಎಂದು ಕಾಂಗ್ರೆಸ್ ನಾಯಕಿ ವಿದ್ಯಾರಾಣಿ ಹೇಳಿಕೆ ನೀಡಿದ್ದರು. ಅಷ್ಟಲ್ಲದೇ, ರೈತರೊಂದಿಗೆ ಪ್ರತಿಭಟನೆಯಲ್ಲಿ ನಾವೂ ಭಾಗಿಯಾಗೋಣ. ಪ್ರತಿಭಟನಾನಿರತ ರೈತರಿಗೆ ಅಗತ್ಯವಾಗಿರುವ ಹಣ, ಹೆಂಡ, ತರಕಾರಿ ಸೇರಿದಂತೆ ಸಾಧ್ಯವಾಗಿದ್ದನ್ನು ಕೊಟ್ಟು ನೆರವು ನೀಡೋಣ ಎಂದು ಕಾಂಗ್ರೆಸ್ ನಾಯಕಿ ವಿದ್ಯಾರಾಣಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು.
#WATCH: Haryana Congress leader Vidya Rani says, "...We'll take out a 'padyatra' in Jind. It'll give new direction & strength to Congress. It'll be reborn. Agitation has risen again as farmers are firm. Be it money, vegetables, liquor-we can contribute to them as we like.."(14.2) pic.twitter.com/FwX7aGNHo9
— ANI (@ANI) February 15, 2021
ದೆಹಲಿಯ ಮೂರು ಗಡಿಯಲ್ಲಿ ರೈತರ ಹೋರಾಟ:
ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ಕಳೆದ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ 82 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದಾರೆ. ರೈತರ ಹೋರಾಟವನ್ನು ಬೆಂಬಲಿಸುವ ನಿಟ್ಟಿನಲ್ಲಿ ಹರಿಯಾಣ, ಪಂಜಾಬ್, ಉತ್ತರ ಪ್ರದೇಶ, ರಾಜಸ್ಥಾನ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಿಸಾನ್ ಮಹಾ ಪಂಚಾಯತ್ ಸಭೆಗಳನ್ನು ನಡೆಸಲಾಗುತ್ತಿದೆ.