"17 ತಿಂಗಳ ಲೆಕ್ಕ ಕೇಳುವ ನೀವು, 70 ವರ್ಷದ ನಿಮ್ಮ ಲೆಕ್ಕ ಕೊಡುತ್ತೀರಾ?"
ನವದೆಹಲಿ, ಫೆಬ್ರುವರಿ 13: ಮೋದಿ ಸರ್ಕಾರದಿಂದ ಅಭಿವೃದ್ಧಿಯ ಲೆಕ್ಕ ಕೇಳುವ ಪಕ್ಷ ಮೊದಲು ಈ ಬೇಡಿಕೆ ಇಡಲು ತಾವು ಯೋಗ್ಯರೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ಮೇಲೆ ಹರಿಹಾಯ್ದಿದ್ದಾರೆ.
ಜಮ್ಮು ಹಾಗೂ ಕಾಶ್ಮೀರದಲ್ಲಿ ಹದಿನೇಳು ತಿಂಗಳಿನಿಂದ ಮೋದಿ ನೇತೃತ್ವದ ಅಭಿವೃದ್ಧಿ ಕೆಲಸಗಳ ಕುರಿತು ಪ್ರಶ್ನೆ ಕೇಳುವ ಮೊದಲು ತಲೆಮಾರುಗಳಿಂದ, 70 ವರ್ಷಗಳ ಆಡಳಿತ ನಡೆಸಿದ ಪಕ್ಷ ತನ್ನ ಲೆಕ್ಕವನ್ನು ಮೊದಲು ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಸರ್ಕಾರ ರಚಿಸುವವರೆಗೂ ಬಿಜೆಪಿಗೆ ವಿಶ್ರಾಂತಿ ಇಲ್ಲ: ಅಮಿತ್ ಶಾ
ಜಮ್ಮು ಹಾಗೂ ಕಾಶ್ಮೀರದಲ್ಲಿ 370 ವಿಧಿ ರದ್ದುಗೊಳಿಸಿದ ನಂತರ ಅಲ್ಲಿನ ಜನರಿಗೆ ನೀಡಿದ್ದ ಭರವಸೆಗಳ ಕುರಿತು ಪ್ರಶ್ನಿಸಿದ ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿಗೆ ಉತ್ತರ ನೀಡಿದ ಅಮಿತ್ ಶಾ, "ವಿಧಿ ರದ್ದುಗೊಳಿಸಿ ಹದಿನೇಳು ತಿಂಗಳು ಕಳೆದಿದೆ. ನೀವು ಆ ಹದಿನೇಳು ತಿಂಗಳುಗಳ ಲೆಕ್ಕ ಕೇಳುತ್ತಿದ್ದೀರಿ. ಆದರೆ ನೀವು 70 ವರ್ಷಗಳಲ್ಲಿ ಏನು ಮಾಡಿದಿರಿ ಎಂಬ ಲೆಕ್ಕವನ್ನು ನೀಡುತ್ತೀರಾ? ನೀವು ಸರಿಯಾಗಿ ಕೆಲಸ ಮಾಡಿದ್ದೀರಾ? ಎಂದು ಮರು ಪ್ರಶ್ನೆ ಮಾಡಿದ್ದಾರೆ.
"ನನಗೆ ನಿಮ್ಮ ಬೇಡಿಕೆಯಲ್ಲಿ ಯಾವುದೇ ಆಕ್ಷೇಪವಿಲ್ಲ. ನಾನು ಎಲ್ಲದರ ಲೆಕ್ಕವನ್ನೂ ನೀಡುತ್ತೇನೆ. ಆದರೆ ತಲೆಮಾರುಗಳ ಕಾಲ ಆಡಳಿತ ನಡೆಸಿದ ಪಕ್ಷ, ತಾವು ಏನು ಮಾಡಿದ್ದೇವೆ ಹಾಗೂ ಈ ಪ್ರಶ್ನೆ ಕೇಳಲು ನಾವು ಯೋಗ್ಯರೇ ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಕಾಶ್ಮೀರದ ಕುರಿತು ಮಾತನಾಡಿ, "ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಕಾಶ್ಮೀರದಲ್ಲಿ ಸಾವಿರಾರು ಜನರು ಸತ್ತರು. ಕಣಿವೆ ರಾಜ್ಯದಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಕಾಶ್ಮೀರದಲ್ಲಿ ಶಾಂತಿ ಎಂಬುದೇ ದೊಡ್ಡ ವಿಷಯ. ಆ ದಿನಗಳನ್ನು ನಾನು ನೆನಪಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ಆ ದಿನಗಳು ನಮ್ಮ ಸರ್ಕಾರದಲ್ಲಿ ಮರಳುವುದಿಲ್ಲ" ಎಂದು ತಿಳಿಸಿದರು.