ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟಿನಲ್ಲಾದ ಎರಡು ಆಘಾತ ಏನು?
ನವದೆಹಲಿ, ಆಗಸ್ಟ್ 26: ಈಗಾಗಲೇ ಆತಂಕದಲ್ಲಿರುವ ಅನರ್ಹ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ಸೋಮವಾರ ಎರಡು ಆಘಾತ ಎದುರಾಯಿತು.
ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ತುರ್ತು ವಿಚಾರಣೆ ನಡೆಸುವಂತೆ ಅನರ್ಹ ಶಾಸಕರು ಕೋರಿದ್ದರು. ಆದರೆ ಸುಪ್ರೀಂಕೋರ್ಟ್ ಅದನ್ನು ನಿರಾಕರಿಸಿತು. ಅಷ್ಟೇ ಅಲ್ಲದೆ ಹಿರಿಯ ವಕೀಲ ಮುಕುಲ್ ರೋಹ್ಟಗಿ ಮೆನ್ಷನ್ ಮಾಡಲು ನಿರಾಕರಿಸಿದ್ದು ಮತ್ತೊಂದು ಆತಂಕಕ್ಕೆ ಕಾರಣವಾಯಿತು.
Recommended Video
ಅತೃಪ್ತ ಶಾಸಕರಿಗೆ ಸುಪ್ರೀಂಕೋರ್ಟ್ನಲ್ಲಿ ಭಾರಿ ಹಿನ್ನಡೆ
ಶಾಸಕರ ಅರ್ಜಿ ತಿರಸ್ಕೃತವಾಗಲಿದೆ ಎನ್ನುವುದು ಅರಿವಿತ್ತು. ಹೀಗಾಗಿ ಅದನ್ನು ಮೆನ್ಷನ್ ಮಾಡಲು ಮುಂದಾಗಲಿಲ್ಲ. ಹೀಗಾಗಿ ಕಿರಿಯ ವಕೀಲರು ಅರ್ಜಿ ಸಲ್ಲಿಸಿದ್ದರು. ಎಂದು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ನ್ಯಾಯಾಲಯದ ರಿಜಿಸ್ಟ್ರಾರ್ ಅವರೇ ಅದನ್ನು ಲಿಸ್ಟ್ ಮಾಡಲಿ ಎಂದು ಪೀಠ ಹೇಳಿತ್ತು. ಇದರಿಂದ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲಿನಲ್ಲಿ ನಿಂತಿರುವ 17 ಅನರ್ಹ ಶಾಸಕರ ಸ್ಥಿತಿ ಅತಂತ್ರವಾಗಿಯೇ ಉಳಿದುಕೊಂಡಿದೆ.
ಅನರ್ಹ ಶಾಸಕರಿಗೆ ರಾಜಕೀಯ ಭವಿಷ್ಯ ಮಸುಕಾಗಬಹುದೆಂಬ ಆತಂಕ
ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ವಿಳಂಬವಾದರೆ ತಮ್ಮ ರಾಜಕೀಯ ಭವಿಷ್ಯ ಮುಸುಕಾಗಬಹುದು ಎಂದು ಆತಂಕಕ್ಕೊಳಗಾಗಿರುವ ಅನರ್ಹ ಶಾಸಕರು, 'ಪ್ರಕರಣವನ್ನು ಬೇಗ ಇತ್ಯರ್ಥ ಪಡಿಸಲು ಕಾನೂನು ಹೋರಾಟಕ್ಕೆ ಸಹಕಾರ ಕೊಡಿ' ಎಂದು ಕಳೆದ ವಾರ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಮೇಲೆ ಒತ್ತಡ ಹೇರಿದ್ದರು. ಇದೇ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ನಾಯಕರಿಂದಲೂ ಭರವಸೆಯ ನಿರೀಕ್ಷೆಯಲ್ಲಿದ್ದರು. ವಕೀಲರನ್ನೂ ಭೇಟಿಯಾಗಿ ಸಮಾಲೋಚನೆ ನಡೆಸಿದ್ದರು. ಹೀಗೆ ಒತ್ತಡ ನಿರ್ಮಾಣವಾದ ಹಿನ್ನೆಲೆಯಲ್ಲಿ ಸೋಮವಾರ ಮುಕುಲ್ ರೋಹ್ಟಗಿ ಸುಪ್ರೀಂ ಕೋರ್ಟಿನಲ್ಲಿ ಮತ್ತೊಮ್ಮೆ ಮನವಿ ಮಾಡುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಕಡೆ ಕ್ಷಣದಲ್ಲಿ ಮುಕುಲ್ ರೋಹ್ಟಗಿ ಮೆನ್ಷನ್ ಮಾಡಲು ನಿರಾಕರಿಸಿದ್ದಾರೆ.
ನ್ಯಾ. ರಮಣ್ ತುರ್ತು ವಿಚಾರಣೆಗೆ ನಿರಾಕರಣೆ
ಮುಕುಲ್ ರೋಹ್ಟಗಿ ಬದಲಾಗಿ ಅವರ ತಂಡದ ಕಿರಿಯ ವಕೀಲರು ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದಲ್ಲಿ ತುರ್ತು ಅರ್ಜಿ ವಿಚಾರಣೆ ನಡೆಸುವಂತೆ ಮನವಿ ಮಾಡಿಕೊಂಡರು. ಆದರೆ ನ್ಯಾಯಮೂರ್ತಿ ಎನ್.ವಿ. ರಮಣ ತುರ್ತು ವಿಚಾರಣೆಗೆ ನಿರಾಕರಿಸಿದರು. ಈ ಹಿಂದೆ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠದ ಮುಂದೆ ಕೂಡ ತುರ್ತು ವಿಚಾರಣೆಗೆ ಮನವಿ ಮಾಡಲಾಗಿತ್ತು. ಪೀಠವು ಅರ್ಜಿಯನ್ನು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಪರಿಶೀಲನೆ ನಡೆಸಿ ವಿಚಾರಣೆಗೆ ದಿನ ನಿಗದಿ ಪಡಿಸಲಿ ಎಂದು ಆದೇಶಿಸಿತ್ತು. ಇದಾದ ಬಳಿಕ ಅನರ್ಹ ಶಾಸಕರ ಪರ ವಕೀಲರು ಮೌಖಿಕವಾಗಿ ರಿಜಿಸ್ಟ್ರಾರ್ ಬಳಿ ತುರ್ತು ವಿಚಾರಣೆಗೆ ಮನವಿ ಮಾಡಿದ್ದರು. ಆದರೂ ಪ್ರಯೋಜನವಾಗದ ಹಿನ್ನೆಲೆಯಲ್ಲಿ ದೂರುದಾರರು ವಕೀಲರ ಮೇಲೆ ಒತ್ತಡ ಹೇರಲಾರಂಭಿಸಿದರು.
ಅತೃಪ್ತ ಶಾಸಕರಿಗೆ ಮಂತ್ರಿಗಿರಿ: ಯಾರಿಗೆ ಒಲಿಯಲಿದೆ ಅದೃಷ್ಟ?
ಬಾಬ್ರಿ ಮಸೀದಿ ರಾಮ ಮಂದಿರ ವಿವಾದ ವಿಚಾರಣೆ
ಅನರ್ಹ ಶಾಸಕರು ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಮೂಲ ಅರ್ಜಿಯು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದಿದೆ. ಆದರೀಗ ಮುಖ್ಯ ನ್ಯಾಯಮೂರ್ತಿಗಳ ಪೀಠವು ಸಂವಿಧಾನಿಕ ಪೀಠವಾಗಿ ಮಾರ್ಪಟ್ಟು ಮಹತ್ವದ ಬಾಬರಿ ಮಸೀದಿ/ರಾಮ ಮಂದಿರ ವಿವಾದದ ವಿಚಾರಣೆ ನಡೆಸುತ್ತಿರುವುದರಿಂದ ಸುಪ್ರೀಂ ಕೋರ್ಟಿನ ಎರಡನೇ ಹಿರಿಯ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ನೇತೃತ್ವದ ದ್ವಿಸದಸ್ಯ ಪೀಠದ ಮುಂದೆ ಮೆನ್ಷನ್ ಮಾಡಲಾಗಿತ್ತು. ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠವೂ ತುರ್ತು ವಿಚಾರಣೆಗೆ ನಿರಾಕಿಸಿರುವುದರಿಂದ ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ಅವರೀಗ ಮತ್ತೊಮ್ಮೆ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆಯೇ ಮನವಿ ಮಾಡಿಕೊಳ್ಳಬೇಕಾಗುತ್ತದೆ. ನಾಳೆ ಮುಕುಲ್ ರೋಹ್ಟಗಿ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆ ಮನವಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಅನರ್ಹ ಶಾಸಕರಿಗೆ ಎರಡೆರೆಡು ಶಾಕ್
ತಮ್ಮನ್ನು ಅನರ್ಹಗೊಳಿಸಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸಿದ್ದ ಅರ್ಜಿ ವಿಳಂಬವಾಗುತ್ತಿರುವುದರಿಂದ ಈಗಾಗಲೇ ಆತಂಕಗೊಂಡಿರುವ ಅನರ್ಹ ಶಾಸಕರಿಗೆ ಇಂದು ಸುಪ್ರೀಂ ಕೋರ್ಟಿನಲ್ಲಿ ಇವರ ಪರ ವಾದ ಮಾಡುತ್ತಿರುವ ಹಿರಿಯ ವಕೀಲ ಮುಕುಲ್ ರೋಹ್ಟಗಿ 'ಮೆನ್ಷನ್ ಮಾಡಲು' ನಿರಾಕರಿಸಿದ್ದು ಮೊದಲ ಆಘಾತವಾದರೆ, ನಂತರ ಕಿರಿಯ ವಕೀಲರು 'ತುರ್ತು ವಿಚಾರಣೆ ನಡೆಸಿ' ಎಂದು ಮಾಡಿಕೊಂಡ ಮನವಿಯನ್ನು ನಿರಾಕರಿಸಿದ್ದು ಎರಡನೇ ಆಘಾತವಾಗಿದೆ.