ಜೈರಾಮ್ ರಮೇಶ್, ನಿರ್ಮಲಾ ಸೀತಾರಾಮನ್ "ಯು ಟರ್ನ್" ವಾಗ್ಯುದ್ಧ
ನವದೆಹಲಿ, ಫೆಬ್ರುವರಿ 13: ಕೇಂದ್ರ ಪರಿಚಯಿಸಿರುವ ಮೂರು ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಯು ಟರ್ನ್ ತೆಗೆದುಕೊಂಡಿದೆ. ತನ್ನ ಹಿಂದಿನ ಚುನಾವಣಾ ಪ್ರಣಾಳಿಕೆಯಲ್ಲಿ ಇಂಥ ಕೃಷಿ ಕಾಯ್ದೆಯ ಅಗತ್ಯವನ್ನು ಉಲ್ಲೇಖಿಸಿದ್ದ ಕಾಂಗ್ರೆಸ್ ಇಂದು ತನ್ನ ಲಾಭಕ್ಕಾಗಿ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದು, ಇದನ್ನು ಪ್ರಶ್ನಿಸಿರುವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅದೇ ಪ್ರಶ್ನೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ತಿರುಗಿ ಕೇಳಿದ್ದಾರೆ.
ನೀವೇಕೆ ಯು ಟರ್ನ್ ತೆಗೆದುಕೊಂಡಿದ್ದೀರಿ ಎಂದು ಮರು ಪ್ರಶ್ನೆ ಮಾಡಿದ್ದಾರೆ.
"ಶ್ರೀಮಂತರ ಬಜೆಟ್" ಆರೋಪ ಅಲ್ಲಗಳೆದ ನಿರ್ಮಲಾ ಸೀತಾರಾಮನ್
ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಅಗತ್ಯದ ಕುರಿತು ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಜೈರಾಮ್ ರಮೇಶ್, ಈ ಯು ಟರ್ನ್ ಬಗ್ಗೆ ಏನು ಹೇಳುತ್ತೀರಾ ಮೇಡಂ? ಎಂದು ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ಹೊಸ ಕೃಷಿ ಕಾಯ್ದೆಗಳ ಕುರಿತು ವಿರೋಧ ವ್ಯಕ್ತಪಡಿಸಿ ರೈತರಿಗೆ ಬೆಂಬಲ ಸೂಚಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಡೆಗೆ ನಿರ್ಮಲಾ ಸೀತಾರಾಮನ್ ವಿರೋಧ ವ್ಯಕ್ತಪಡಿಸಿದ್ದು, ಈ ಹಿಂದೆ ಈ ಕಾಯ್ದೆಗಳ ಅವಶ್ಯಕತೆ ಇದೆ ಎಂದಿದ್ದ ಕಾಂಗ್ರೆಸ್ ಇದ್ದಕ್ಕಿದ್ದಂತೆ ಈ ಕಾಯ್ದೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಏಕೆ? ಏಕೆ ಯು ಟರ್ನ್ ತೆಗೆದುಕೊಂಡಿದೆ? ಈ ಬಗ್ಗೆ ಪಕ್ಷದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಆರೋಪಿಸಿದ್ದರು. ಈ ಕೃಷಿ ಕಾಯ್ದೆಗಳ ಕುರಿತು ಏನೂ ತಿಳಿಯದೇ ರಾಹುಲ್ ಮಾತನಾಡಿದ್ದಾರೆ ಎಂದು ಟೀಕಿಸಿದ್ದರು.
ಇದಕ್ಕೆ ಉತ್ತರವಾಗಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.