ಗುಡುಗು + ಮಿಂಚು + ಬಿರುಗಾಳಿ + ಭಾರೀ ಮಳೆ = ದೆಹಲಿಯಲ್ಲಿ ಏನಾಗ್ತಿದೆ?
ನವದೆಹಲಿ, ಮೇ 23: ಬಿಸಿಲಿನ ಶಾಖಕ್ಕೆ ಹೈರಾಣಾಗಿದ್ದ ದೆಹಲಿ ಜನತೆಗೆ ವರುಣದೇವ ತಂಪು ಎರೆದಿದ್ದಾನೆ. ಸೋಮವಾರ ಶುರುವಾದ ಬಿರುಗಾಳಿ ಸಹಿತ ಮಳೆಗೆ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ರಸ್ತೆಗಳು ಜಲಾವೃತಗೊಂಡಿವೆ.
ದೆಹಲಿ ಮತ್ತು ಎನ್ ಸಿಆರ್ ಪ್ರದೇಶಗಳಲ್ಲಿ ಇನ್ನೂ ಹೆಚ್ಚಿನ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 80 ನಿಮಿಷಗಳಲ್ಲಿ ವಾತಾವರಣದಲ್ಲಿ 11 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗಿದೆ. ಬೆಳಗ್ಗೆ 5.40ರ ಹೊತ್ತಿಗೆ 29 ಡಿಗ್ರಿ ಸೆಲ್ಸಿಯಸ್ ಇದ್ದ ತಾಪಮಾನವು 7 ಗಂಟೆ ಹೊತ್ತಿಗೆ 18 ಡಿಗ್ರಿ ಸೆಲ್ಸಿಯಸ್ ಆಗಿದೆ.
Breaking; ದೆಹಲಿಯಲ್ಲಿ ಮಳೆ, ಗಾಳಿ; ವಿಮಾನ ಹಾರಾಟ ವಿಳಂಬ
ಗುಡುಗು ಮತ್ತು ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ದೆಹಲಿಯ ಮೂರು ಕಡೆಗಳಲ್ಲಿ ಕಾಂಪೌಂಡ್ ಕುಸಿತ ಸಂಭವಿಸಿದೆ. ಹವಾಮಾನ ಇಲಾಖೆ ಪ್ರಕಾರ, ಧೂಳಿನ ಬಿರುಗಾಳಿ ಮತ್ತು ಗುಡುಗು ಸಹಿತ ಲಘುವಾಗಿ ಮಧ್ಯಮ ತೀವ್ರತೆಯ ಮಳೆ ಆಗಲಿದೆ. ಮುಂದಿನ ಎರಡು ಗಂಟೆಯಲ್ಲಿ ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ 50-80 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.
ಬಿರುಗಾಳಿ ಸಹಿತ ಮಳೆ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ
ದೆಹಲಿ ಮತ್ತು ಎನ್ ಸಿಆರ್ ಪ್ರದೇಶದಲ್ಲಿ ಧೂಳು ಹಾಗೂ ಬಿರುಗಾಳಿ ಸಹಿತ ಮಳೆ ಆಗಲಿದೆ. ಈ ಹಿನ್ನೆಲೆ ಸಾರ್ವಜನಿಕರು ಸಾಧ್ಯವಾದಷ್ಟು ಮಟ್ಟಿಗೆ ಮನೆಗಳ ಬಾಗಿಲು, ಕಿಟಕಿಗಳನ್ನು ಮುಚ್ಚಿಕೊಂಡಿರಬೇಕು. ಅನಗತ್ಯ ಪ್ರಯಾಣದಿಂದ ದೂರ ಉಳಿಯಬೇಕು ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಿರುಗಾಳಿ ಸಹಿತ ಮಳೆಯ ಪರಿಣಾಮಗಳ ಬಗ್ಗೆ ಎಚ್ಚರಿಕೆ
* ದುರ್ಬಲ ರಚನೆಗಳಿಗೆ ಹಾನಿ
* ಕಚ್ಚಾಮನೆ, ಗೋಡೆಗಳು ಮತ್ತು ಗುಡಿಸಲುಗಳಿಗೆ ಹಾನಿ
* ರಸ್ತೆ ಸಂಚಾರ ಅಡಚಣೆಯಿಂದ ವಾಹನ ಸವಾರರ ಪರದಾಟ
* ಧೂಳು, ಗಾಳಿ, ಮೋಡ ಮುಸುಕುವುದರಿಂದ ಕತ್ತಲು ಆವರಿಸುವ ಸಾಧ್ಯತೆ
* ಕಾಂಕ್ರೀಟ್ ಮಹಡಿಗಳ ಮೇಲೆ ಮಲಗುವುದು, ಕಾಂಕ್ರೀಟ್ ಗೋಡೆಗಳಿಗೆ ಒರಗಿಕೊಂಡು ಕೂರುವುದು ಅಪಾಯಕಾರಿ
* ವಿದ್ಯುತ್ / ಎಲೆಕ್ಟ್ರಾನಿಕ್ ಉಪಕರಣಗಳ ಸ್ವಿಚ್ ಆಫ್ ಮಾಡಿರಿ
* ಹೆಚ್ಚು ನೀರು ಸಂಗ್ರಹವಾಗುವ ಪ್ರದೇಶಗಳಿಂದ ಅಂತರ ಕಾಯ್ದುಕೊಳ್ಳಿರಿ
* ವಿದ್ಯುಚ್ಛಕ್ತಿಯಿಂದ ನಡೆಯುವ ಎಲ್ಲಾ ವಸ್ತುಗಳಿಂದ ದೂರವಿರಿ
* ಯುವುದೇ ರೀತಿ ಅನಗತ್ಯ ಪ್ರಯಾಣ ಮಾಡಬೇಡಿ
ರಾಷ್ಟ್ರ ರಾಜಧಾನಿಯಲ್ಲಿ ವಿಮಾನಗಳ ಸಂಚಾರ ರದ್ದು
ದೆಹಲಿ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ವಿಮಾನಗಳ ಹಾರಾಟದ ಮೇಲೆ ಪರಿಣಾಮ ಬೀರಿದೆ. "ಕೆಟ್ಟ ಹವಾಮಾನದಿಂದಾಗಿ ದೆಹಲಿ ವಿಮಾನ ನಿಲ್ದಾಣದಲ್ಲಿ ಹಲವು ವಿಮಾನಗಳ ಕಾರ್ಯಾಚರಣೆ ಅನ್ನು ರದ್ದುರೊಳಿಸಲಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಸಂಬಂಧಿಸಿದ ವಿಮಾನಯಾನ ಸಂಸ್ಥೆಯನ್ನು ಸಂಪರ್ಕಿಸುವಂತೆ ಪ್ರಯಾಣಿಕರಿಗೆ ವಿನಂತಿಸಲಾಗಿದೆ." ದೆಹಲಿಯಲ್ಲಿ ಸೋಮವಾರ ಮೋಡ ಕವಿದ ವಾತಾವರಣವಿರಬಹುದು. ಕನಿಷ್ಠ 27 ರಿಂದ ಗರಿಷ್ಠ 37 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.
ವರ್ಕ್ ಫ್ರಾಮ್ ಹೋಮ್ ಮಾಡುವಂತೆ ಸಲಹೆ
ಸೋಮವಾರ ಚಂಡೀಗಢದಲ್ಲೂ ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಹಿನ್ನಲೆ ದೆಹಲಿಯ ರಸ್ತೆಗಳಲ್ಲಿ ವಾಹನ ಸಂಚಾರವನ್ನು ತಗ್ಗಿಸುವ ಉದ್ದೇಶದಿಂದ ಗುರುಗ್ರಾಮ್ ಆಡಳಿತ ಮಂಡಳಿಯು ಖಾಸಗಿ ಕಂಪನಿ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ(ವರ್ಕ್ ಫ್ರಾಮ್ ಹೋಮ್) ಸಲಹೆ ನೀಡಿದೆ. ಬೆಳಗ್ಗೆ ಗುಡುಗು ಸಹಿತ ಧಾರಾಕಾರ ಮಳೆಯಿಂದ ನಗರ ಹಲವು ಪ್ರದೇಶಗಳಲ್ಲಿ ಸುದೀರ್ಘ ಕಾಲದವರೆಗೂ ವಿದ್ಯುತ್ ಕಡಿತಗೊಳಿಸಲಾಗಿದ್ದು, ಟ್ರಾಫಿಕ್ ಜಾಮ್ ಹೆಚ್ಚಾಗಿತ್ತು. ಬಿರುಗಾಳಿಗೆ ಹಲವೆಡೆ ಮರಗಳು ಧರೆಗುರುಳಿದ್ದು, ರಸ್ತೆಗಳು ಜಲಾವೃತಗೊಂಡಿದ್ದವು. ಇದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು.
Recommended Video