ಕೇಂದ್ರ ಸರ್ಕಾರಕ್ಕೂ ಈ ಸಿಎಂಗೂ ಎಣ್ಣೆ-ಸೀಗೆಕಾಯಿ ಸಂಬಂಧ!
ಕೋಲ್ಕತ್ತಾ, ನವೆಂಬರ್.20: ಕೇಂದ್ರ ಸರ್ಕಾರಕ್ಕೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಯಾಕೋ ಏನೋ ಎಣ್ಣೆ-ಸೀಗೆಕಾಯಿ ಸಂಬಂಧ. ಕೇಂದ್ರ ಸರ್ಕಾರ ಒಂದು ಹೇಳಿದ್ರೆ, ದೀದಿ ಮತ್ತೊಂದು ಹೇಳುತ್ತಾರೆ. ಬಿಜೆಪಿ ವಿರುದ್ಧ ಸದಾ ರೇಗುವ ಪಶ್ಚಿಮ ಬಂಗಾಳ ಸಿಎಂ ಮತ್ತೆ ಅದನ್ನೇ ಮುಂದುವರಿಸಿದ್ದಾರೆ.
ಹೌದು, ಕೇಂದ್ರ ಸರ್ಕಾರ ಹೊಸ ನೀತಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ನೀವು ಹೇಳಿದಂತೆ ನಮ್ಮ ರಾಜ್ಯದಲ್ಲಿ ನಡೆಯುವುದಿಲ್ಲ. ಇಲ್ಲಿ ಯಾರೂ ನಿಮ್ಮ ಮಾತನ್ನು ಕೇಳುವವರಿಲ್ಲ ಎಂಬ ಧಾಟಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ.
'ವಿಭಜನೀಯ ಮೂಲಭೂತವಾದಿಗಳು': ಓವೈಸಿ ವಿರುದ್ಧ ದೀದಿ ವಾಗ್ದಾಳಿ
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಾರಿ ಬಾರಿ ಕೇಂದ್ರ ಸರ್ಕಾರದ ವಿರುದ್ಧ ಛಾಟಿ ಬೀಸುತ್ತಲೇ ಇರುತ್ತಾರೆ. ಈಗ ದೀದಿ ಕೋಪಕ್ಕೆ ಕಾರಣವಾಗಿದ್ದು, ಇತ್ತೀಚಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೀಡಿದ ಹೇಳಿಕೆ. ಜೊತೆಗೆ ದೇಶದಲ್ಲಿ ಜಾರಿಗೆ ತರಲು ಹೊರಟಿರುವ ರಾಷ್ಟ್ರೀಯ ಪೌರತ್ವ ನೊಂದಣಿ.
ದೇಶದಲ್ಲಿ ಜಾರಿಗೆ ತರಲು ಹೊರಟಿರುವ ಒಂದೇ ರೀತಿಯ ಪೌರತ್ವ ನೀತಿಗೆ ಸಿಎಂ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಾತಿ ಆಧಾರದ ಮೇಲೆ ಜನರನ್ನು ವಿಂಗಡನೆ ಮಾಡಲು ನಾವು ಒಪ್ಪುವುದಿಲ್ಲ. ನಮ್ಮ ರಾಜ್ಯದಲ್ಲಿ ಯಾರಬ್ಬರಿಗೂ ಈ ನೀತಿ ಅನ್ವಯವಾಗುವುದಿಲ್ಲ ಎಂದು ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಪೌರತ್ವ ನೊಂದಣಿಯ ಅಗತ್ಯವಿಲ್ಲ. ಯಾರೂ ಕೂಡಾ ಈ ಬಗ್ಗೆ ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ದೀದಿ ಹೇಳಿದ್ದಾರೆ.
ಇತ್ತೀಚಿಗಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದಲ್ಲಿ ಒಂದೇ ರೀತಿಯ ಪೌರತ್ವ ಜಾರಿಗೊಳಿಸಲಾಗುತ್ತದೆ. ಪ್ರಜೆಗಳು ರಾಷ್ಟ್ರೀಯ ಪೌರತ್ವ ನೊಂದಣಿಗೆ ಹೆಸರು ನೊಂದಾಯಿಸಬೇಕು ಎಂದು ಮನವಿ ಮಾಡಿದ್ದರು. ಇದರಿಂದ ದೇಶದಲ್ಲಿ ಅಕ್ರಮ ವಲಸಿಗರನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ ಎಂದು ಹೇಳಿದ್ದರು.
ಪೌರತ್ವ ಕಾಯ್ದೆ ತಿದ್ದುಪಡಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದ್ದು, ಮಾರ್ಚ್.25, 1971ರ ನಂತರ ಬಾಂಗ್ಲಾದೇಶ ಗಡಿಯಿಂದ ಅಸ್ಸಾಂಗೆ ಸಾಕಷ್ಟು ಮಂದಿ ಅಕ್ರಮ ವಲಸಿಗರು ಆಗಮಿಸಿದ್ದು, ಅಲ್ಲಿಯೇ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ.