ಬಿಜೆಪಿ ದಿಗ್ವಿಜಯದ ನಡೆ ಕರ್ನಾಟಕದ ಕಡೆಗೆ : ಅಮಿತ್ ಶಾ
ನವದೆಹಲಿ, ಮಾರ್ಚ್ 03 : ತ್ರಿಪುರಾ ಮತ್ತು ನಾಗಾಲ್ಯಾಂಡ್ ನಲ್ಲಿ ಲಭಿಸಿರುವ ಅಭೂತಪೂರ್ವ ಜಯದೊಂದಿಗೆ ನಮ್ಮ ನಡೆ ಕರ್ನಾಟಕದ ಕಡೆಗೆ ಸಾಗಲಿದೆ. ಕರ್ನಾಟಕದಲ್ಲಿಯೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಶಾನ್ಯ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ತ್ರಿಪುರಾದಲ್ಲಿ ಭಾರತೀಯ ಜನತಾ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಸಿಪಿಐಎಂನಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ನಾಗಾಲ್ಯಾಂಡ್ ನಲ್ಲಿಯೂ ಬಿಜೆಪಿ ಮತ್ತು ಮೈತ್ರಿಕೂಟ ಜಯದ ಮಾಲೆ ತೊಟ್ಟಿದೆ.
ಈಶಾನ್ಯ ರಾಜ್ಯ ಚುನಾವಣೆ: ಟ್ವಿಟ್ಟರ್ ನಲ್ಲಿ ಕೃತಜ್ಞತೆ ಹೇಳಿದ ಮೋದಿ
ಈ ಜಯದ ಬಳಿಕ ಆತ್ಮವಿಶ್ವಾಸದಿಂದ ತುಂಬಿ ತುಳುಕುತ್ತಿರುವ ಅಮಿತ್ ಶಾ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ, ಎಲ್ಲಿಯವರೆಗೆ ಓರಿಸ್ಸಾ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ನಮ್ಮ ಅಧಿಪತ್ಯವನ್ನು ಸ್ಥಾಪಿಸುವುದಿಲ್ಲವೋ ಅಲ್ಲಿಯವರೆಗೆ ನಮ್ಮ ಸುವರ್ಣಯುಗ ಆರಂಭವಾಗುವುದಿಲ್ಲ ಎಂದು ಹೇಳಿದರು.
ಕರ್ನಾಟಕದಲ್ಲಿಯೂ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ಅವರು ಹೇಳಿದ್ದರೂ, ಅದು ಇತರ ರಾಜ್ಯಗಳಂತಲ್ಲ ಎಂಬ ಸತ್ಯಾಂಶವೂ ಅವರಿಗೆ ಗೊತ್ತು. ಕರ್ನಾಟಕದಲ್ಲಿ ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಭಾರತೀಯ ಜನತಾ ಪಕ್ಷದ ಪ್ರತಿಷ್ಠೆಯನ್ನು ಒರೆಗೆ ಹಚ್ಚಲಿದೆ.
ಈಶಾನ್ಯದ ಹೀನಾಯ ಸೋಲು : ರಾಹುಲ್ ಮೇಲೆ ನೆಟ್ ನೋಟ
ನನಗೆ ವಾಟ್ಸಾಪ್ ನಲ್ಲಿ ಸಂದೇಶ ಬಂದಿದ್ದು, ಇಟಲಿಯಲ್ಲಿ ಚುನಾವಣೆ ಇದೆಯಂತೆ ಎಂದು ಪರೋಕ್ಷವಾಗಿ ಅಮಿತ್ ಶಾ ಅವರು ರಾಹುಲ್ ಗಾಂಧಿ ಅವರಿಗೆ ಟಾಂಗ್ ನೀಡಿದರು. ರಾಹುಲ್ ಅವರು ಸದ್ಯಕ್ಕೆ ತಮ್ಮ ಅಜ್ಜಿಯನ್ನು ನೋಡಲು ಇಟಲಿಗೆ ಹೋಗಿದ್ದಾರೆ. ಮಾರ್ಚ್ 4ರಂದು ಚುನಾವಣೆಯೂ ನಡೆಯಲಿದೆ.
2014ರ ಚುನಾವಣೆಯ ನಂತರ ಮೋದಿಜಿ ಹೇಳಿದ್ದರು, ಭಾರತದ ಪಶ್ಚಿಮ ಭಾಗ ಅಭಿವೃದ್ಧಿ ಹೊಂದಿದೆ, ಆದರೆ ಪೂರ್ವದ ಬಗ್ಗೆ ಹೀಗೆ ಹೇಳುವಂತಿಲ್ಲ. ಅವರು ಕೂಡಲೆ 'ಆಕ್ಟ್ ಈಸ್ಟ್ ಪಾಲಿಸಿ' ಆರಂಭಿಸಿದರು. ಈಗ ಸಿಕ್ಕಿರುವ ವಿಜಯ ಅವರ ನೀತಿಗೆ ಸಿಕ್ಕ ದಿಗ್ವಿಜಯವಾಗಿದೆ. ಇದೇ ಅಭಿವೃದ್ಧಿಯನ್ನು ಪೂರ್ವದಲ್ಲಿಯೂ ಮುಂದುವರಿಸುತ್ತೇವೆ ಎಂದರು.
ಜಯದ ಮೇಲೆ ಜಯ ಸಾಧಿಸುತ್ತಿರುವುದು ಬಿಜೆಪಿಗೆ ಧನಾತ್ಮಕ ಸಂಕೇತ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಇನ್ನೂ ಹೆಚ್ಚಿಸಿದೆ ಎಂದು ಅವರು ನುಡಿದರು. 2019ರ ಏಪ್ರಿಲ್ ನಲ್ಲಿ ಲೋಕಸಭೆ ಅವಧಿ ಮುಗಿಯಲಿದ್ದು, ಇತರ ರಾಜ್ಯಗಳ ಚುನಾವಣೆಯೊಂದಿಗೆ ಲೋಕಸಭೆ ಚುನಾವಣೆಯೂ ನಡೆಯುವ ಸಾಧ್ಯತೆಯಿದೆ.
ತ್ರಿಪುರಾ : ಯುವಜನತೆ ಬಿಜೆಪಿ ಜಯಭೇರಿಯ ರೂವಾರಿ
ಮೇಘಾಲಯವನ್ನು ಪರಿಗಣಿಸದಿದ್ದರೂ, ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿದೆ. ಪ್ರತಿ ಚುನಾವಣೆಯಲ್ಲಿಯೂ ದೇಶದ ಜನತೆ ನರೇಂದ್ರ ಮೋದಿ ಮತ್ತು ಅವರ ಸರಕಾರದ ಪರವಾಗಿ ಮತ ಹಾಕುತ್ತಿದ್ದಾರೆ. ಇದಕ್ಕೆಲ್ಲ ನರೇಂದ್ರ ಮೋದಿ ಸರಕಾರದ ಅಭಿವೃದ್ಧಿ ಪರವಾದ ನೀತಿಯೇ ಕಾರಣ ಎಂದು ಅವರು ವಿಶ್ಲೇಷಿಸಿದರು.
ಎಡಪಕ್ಷಗಳಿಗೆ ಸಂಬಂಧಿಸಿದಂತೆ ಹೇಳಬೇಕೆಂದರೆ, ದೇಶದ ಯಾವುದೇ ಕ್ಷೇತ್ರವನ್ನು ತೆಗೆದುಕೊಳ್ಳಿ ಲೆಫ್ಟ್ ಯಾವತ್ತಿಗೂ ರೈಟ್ ಆಗಲ್ಲ ಎಂಬುದು ಸಿದ್ಧವಾಗಿದೆ. ತ್ರಿಪುರಾದಲ್ಲಿ ಬಿಜೆಪಿ ಸರಳ ಬಹುಮತ ಬಂದಿರಬಹುದು. ಆದರೆ, ನಾವು ಮೈತ್ರಿಕೂಟದ ಇತರ ಪಕ್ಷಗಳನ್ನೂ ಸಂಪುಟದಲ್ಲಿ ಸೇರಿಸಿಕೊಳ್ಳುತ್ತೇವೆ ಎಂದು ಅವರು ಭರವಸೆ ನೀಡಿದರು.
ಮೇಘಾಲಯ, ನಾಗಾಲ್ಯಾಂಡ್, ತ್ರಿಪುರ ಚುನಾವಣೆ: ಇಂದು ಫಲಿತಾಂಶ